ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಪಿಎಂ ಕೇರ್ಸ್ ಯೋಜನೆಯ 4,000 ಕ್ಕೂ ಹೆಚ್ಚು ಫಲಾನುಭವಿ ಮಕ್ಕಳಿಗೆ ವೈಯಕ್ತಿಕ ಪತ್ರಗಳನ್ನು ಬರೆದಿದ್ದಾರೆ. ಪತ್ರದಲ್ಲಿ ಅವರು ಯೋಜನೆಯ ವಿವಿಧ ಪ್ರಯೋಜನಗಳನ್ನು ವಿವರಿಸಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ತಮ್ಮ ಹೆತ್ತವರನ್ನು ಕಳೆದುಕೊಂಡ ಮಕ್ಕಳು ಇದರಡಿ ಪ್ರಯೋಜನ ಪಡೆಯಬಹುದು.
ಮಕ್ಕಳ ಸುವರ್ಣ ಭವಿಷ್ಯಕ್ಕಾಗಿ ʼಮಕ್ಕಳಿಗಾಗಿ ಪಿಎಂ-ಕೇರ್ಸ್ ಯೋಜನೆʼಯು ದೇಶವು ತೆಗೆದುಕೊಂಡಿರುವ ದೃಢವಾದ ಹೆಜ್ಜೆ ಎಂದು ಮೋದಿ ಬಣ್ಣಿಸಿದ್ದಾರೆ.
ಸುಮಾರು ಒಂದು ಶತಮಾನದ ಹಿಂದೆ ತಮ್ಮ ಕುಟುಂಬ ಅನುಭವಿಸಿದ ಇಂತಹ ದುರಂತದ ಅನುಭವವನ್ನು ಪ್ರಧಾನಿ ಮೋದಿ ಪತ್ರದಲ್ಲಿ ಹಂಚಿಕೊಂಡಿದ್ದಾರೆ ಮತ್ತು ಈ ಕಷ್ಟದ ಸಮಯದಲ್ಲಿ ಇಡೀ ದೇಶವು ಅವರೊಂದಿಗೆ ನಿಲ್ಲುತ್ತದೆ ಎಂದು ಮಕ್ಕಳಿಗೆ ಭರವಸೆ ನೀಡಿದ್ದಾರೆ
ಈ ಪತ್ರವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಹಂಚಿಕೊಂಡಿದೆ.
“ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಯು ಈ ಮಕ್ಕಳ ಸುವರ್ಣ ಭವಿಷ್ಯಕ್ಕಾಗಿ ದೇಶವು ತೆಗೆದುಕೊಂಡ ದೃಢವಾದ ಹೆಜ್ಜೆಯಾಗಿದೆ. ಈ ಯೋಜನೆಯ ಮೂಲಕ ನೀವು ಮುಕ್ತವಾಗಿ ಕನಸು ಕಾಣಬಹುದು ಮತ್ತು ನಿಮ್ಮ ಕನಸುಗಳನ್ನು ನನಸಾಗಿಸಲು ಸಹಾಯ ಮಾಡುವಲ್ಲಿ ಯಾವುದೇ ಪ್ರಯತ್ನಗಳನ್ನು ಕೈಬಿಡುವುದಿಲ್ಲ” ಎಂದು ಪ್ರಧಾನಿ ಮೋದಿ ಇದರಲ್ಲಿ ಬರೆದಿದ್ದಾರೆ
ಇಂಗ್ಲಿಷ್, ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಬರೆದ ಪತ್ರದಲ್ಲಿ ಪ್ರಧಾನಿ ತಮ್ಮ ಬಾಲ್ಯದಲ್ಲಿ ತಾಯಿ ಹೇಳಿದ್ದ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಸುಮಾರು 100 ವರ್ಷಗಳ ಹಿಂದೆ ಅವರ ಕುಟುಂಬ ಕೂಡ ಇದೇ ರೀತಿಯ ದುರಂತ ಮತ್ತು ನೋವನ್ನು ಅನುಭವಿಸಿತ್ತು ಎಂದು ಅವರು ಹೇಳಿದ್ದಾರೆ.ಒಂದು ಶತಮಾನದ ಹಿಂದೆ, ಇಡೀ ಜಗತ್ತು ಇಂದಿನಂತಹ ಭಯಾನಕ ಸಾಂಕ್ರಾಮಿಕದ ಹಿಡಿತದಲ್ಲಿದ್ದಾಗ ನನ್ನ ತಾಯಿ ತನ್ನ ತಾಯಿಯನ್ನು ಕಳೆದುಕೊಂಡರು, ತಾಯಿಯ ಅನುಪಸ್ಥಿತಿಯಲ್ಲಿ,ತಾಯಿಯ ವಾತ್ಸಲ್ಯವಿಲ್ಲದೆ ಅವಳು ಹೇಗೆ ಬೆಳೆದಿದ್ದಾಳೆಂದು ಊಹಿಸಬಲ್ಲೆ. ಆದ್ದರಿಂದ, ಇಂದು, ನಿಮ್ಮ ಮನಸ್ಸಿನಲ್ಲಿರುವ ದುಃಖ, ನಿಮ್ಮ ಹೃದಯದಲ್ಲಿನ ಸಂಘರ್ಷವನ್ನು ನಾನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಕೃಪೆ- news13.in