ನವದೆಹಲಿ: ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಇಂದು ಬೆಳಗ್ಗೆ ಹಣಕಾಸು ಸಚಿವ ಬಸಿಲ್ ರಾಜಪಕ್ಸೆ ಅವರನ್ನು ಭೇಟಿ ಮಾಡುವ ಮೂಲಕ ಶ್ರೀಲಂಕಾ ಪ್ರವಾಸವನ್ನು ಆರಂಭಿಸಿದರು.
ಡಾ. ಜೈಶಂಕರ್ ಅವರು ಆರ್ಥಿಕ ಪರಿಸ್ಥಿತಿ ಮತ್ತು ಭಾರತದ ಬೆಂಬಲದ ಬಗ್ಗೆ ಅವರೊಂದಿಗೆ ಚರ್ಚಿಸಿದ್ದಾರೆ. ನೆರೆಹೊರೆ ಮೊದಲು ನೀತಿಯಿಂದ ಭಾರತವು ಮಾರ್ಗದರ್ಶನ ಪಡೆಯುವುದನ್ನು ಮುಂದುವರಿಸುತ್ತದೆ ಎಂದು ಈ ಸಂದರ್ಭದಲ್ಲಿ ಪುನರುಚ್ಛರಿಸಿದ್ದಾರೆ.
ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಲಂಕಾ ಸರ್ಕಾರದ ಅಸಮರ್ಥತೆಯ ಬಗ್ಗೆ ಸಾರ್ವಜನಿಕರ ಆಕ್ರೋಶ ಉಲ್ಬಣವಾಗುತ್ತಿರುವ ಸಮಯದಲ್ಲಿ ಜೈಶಂಕರ್ ಅವರು ಅಲ್ಲಿಗೆ ಭೇಟಿ ನೀಡಿರುವುದು ಎಲ್ಲರ ಕುತೂಹಲ ಕೆರಳಿಸಿದೆ. ಪ್ರಸ್ತುತ ಆರ್ಥಿಕ ಬಿಕ್ಕಟ್ಟಿನಿಂದ ಶ್ರೀಲಂಕಾವನ್ನು ರಕ್ಷಿಸಲು ಭಾರತವು ಆರ್ಥಿಕ ಪರಿಹಾರ ಪ್ಯಾಕೇಜ್ ಅನ್ನು ವಿಸ್ತರಿಸಿದ ನಂತರ ಇದು ದ್ವೀಪ ರಾಷ್ಟ್ರಕ್ಕೆ ಅವರ ಮೊದಲ ಭೇಟಿಯಾಗಿದೆ.
ವಿದೇಶಾಂಗ ಸಚಿವರು ತಮ್ಮ ಮಾಲ್ಡೀವ್ಸ್ ಭೇಟಿಯ ನಂತರ ಶ್ರೀಲಂಕಾಕ್ಕೆ ಮೂರು ದಿನಗಳ ಭೇಟಿಗಾಗಿ ನಿನ್ನೆ ಕೊಲಂಬೊ ತಲುಪಿದರು. ಅವರು ಮುಂದಿನ ಎರಡು ದಿನಗಳಲ್ಲಿ ದ್ವಿಪಕ್ಷೀಯ ಮತ್ತು ಬಿಮ್ಸ್ಟಿಕ್ ಸಚಿವರ ಸಭೆಗಳನ್ನು ನಡೆಸಲಿದ್ದಾರೆ.