ಬೆಂಗಳೂರು: ಖ್ಯಾತ ಪತ್ರಕರ್ತ, ಜನಾನುರಾಗಿ ಬರಹಗಾರ ಹರಿಪ್ರಕಾಶ ಕೋಣೆಮನೆ
ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕ ಜವಾಬ್ದಾರಿಗೆ ರಾಜೀನಾಮೆ ನೀಡಿದ್ದು, ನೂತನವಾಗಿ ಸುದ್ದಿವಾಹಿನಿ ಸೇರಿದಂತೆ ಎಂಟರ್ಟೈನ್ಮೆಂಟ್-ಮ್ಯೂಸಿಕ್ ಚಾನೆಲ್ ಆರಂಭಿಸಲಿದ್ದಾರೆ ಎಂದು ತಿಳಿದುಬಂದಿದೆ.
ಅವರು ತಮ್ಮ ಪ್ರಸಕ್ತ ಹೊಣೆಗಾರಿಕೆಯಿಂದ ಬಿಡುಗಡೆಗೆ (ಟೈಮ್ಸ್ ಸಮೂಹದ ಎಂಎಂಸಿಎಲ್ ಆಡಳಿತ ಮಂಡಳಿಗೆ) ಮನವಿ ಮಾಡಿದ್ದಾರೆ ಎನ್ನಲಾಗಿದ್ದು, ಮುಂದೆ ಸುದ್ದಿವಾಹಿನಿ, ಎಂಟರ್ಟೈನ್ಮೆಂಟ್-ಮ್ಯೂಸಿಕ್ ಚಾನೆಲ್ ಆರಂಭಿಸುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆ ಎಂಬ ಮಾಹಿತಿ ಲಭ್ಯವಾಗಿದೆ.
ಹರಿಪ್ರಕಾಶ್ ಕೋಣೆಮನೆ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕೋಣೆಮನೆಯವರಾಗಿದ್ದು, ಪತ್ರಿಕಾ ರಂಗದಲ್ಲಿ ಎರಡು ದಶಕಗಳಿಗೂ ಅಧಿಕ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಅವರದ್ದು. ತಮ್ಮ ತೀಕ್ಷ್ಣ, ಸಂವೇದನಾಶೀಲತೆ ಮತ್ತು ರಾಷ್ಟ್ರೀಯ ವಿಚಾರಗಳ ಕುರಿತಾಗಿ ಬರಹ ಮತ್ತು ಮಾತುಗಳಿಂದ ನಾಡಿನ ಜನತೆಯ ಮನ ಗೆದ್ದಿದ್ದಾರೆ.
ಈಗಾಗಲೇ ನೂತನ ಸುದ್ದಿವಾಹಿನಿ ಪ್ರಾರಂಭಕ್ಕೆ ಸಿದ್ಧತೆಗಳು ಬಿರುಸಿನಿಂದ ಸಾಗಿದ್ದು ಏಪ್ರಿಲ್ ತಿಂಗಳ ವೇಳೆಗೆ ಚಾನೆಲ್ ಲಾಂಚ್ ಆಗಲಿದೆ. ಹೊಸದಾಗಿ ಆರಂಭಗೊಳ್ಳುತ್ತಿರುವ ನ್ಯೂಸ್ ಚಾನೆಲ್ ಜೊತೆಗೆ ಎಂಟರ್ಟೇನ್ಮೆಂಟ್ ಮತ್ತು ಮ್ಯೂಸಿಕ್ ಚಾನೆಲ್ ಕೂಡ ಕಾರ್ಯಾರಂಭ ಮಾಡುತ್ತಿರುವುದು ಕನ್ನಡ ಟಿವಿ ಮಾಧ್ಯಮ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.
‘ಗುಣಮಟ್ಟದ, ಮೌಲ್ಯಯುತ ಸುದ್ದಿ, ಮನರಂಜನೆ ಚಾನೆಲ್ ಜೊತೆಗೆ ವಿಸ್ತಾರಗೊಳ್ಳುತ್ತಿರುವ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಇನ್ನೂ ಅಗಾಧವಾದ ಮತ್ತು ಅಪರಿಮಿತವಾದ ಅವಕಾಶಗಳಿವೆ. ಅದನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಆಲೋಚನೆ ಮತ್ತು ಸಿದ್ಧತೆ ಎರಡೂ ನಡೆದಿದೆ. ಉಳಿದ ಮಾಹಿತಿಯನ್ನು ನಂತರದ ದಿನಗಳಲ್ಲಿ ಕಾಲಕಾಲಕ್ಕೆ ಪ್ರಕಟ ಮಾಡಲಾಗುವುದು, ಹೊಸ ವಾಹಿನಿಗಳು Content ಮತ್ತು Presentation ಗಳೆರಡರ ದೃಷ್ಟಿಯಿಂದಲೂ ವಿಭಿನ್ನ ಮತ್ತು ವಿಶಿಷ್ಟವಾಗಿರಲಿದ್ದು ಕನ್ನಡ ವೀಕ್ಷಕರಿಗೆ ಸಂತೃಪ್ತಿ ನೀಡುವ ಖಚಿತ ವಿಶ್ವಾಸವಿದೆ.’ ಎನ್ನುವುದು ಅವರ ಅನಿಸಿಕೆಯಾಗಿದೆ.