ಸಂತೋಷ್ ನಾಯ್ಕ್ ಆತ್ಮಹತ್ಯೆ ಪ್ರಕರಣ:ಪೋಲಿಸ್ ವಿಚಾರಣೆ ನಂತರ ಮಾಧ್ಯಮಕ್ಕೆ ಪ್ರತಿಕ್ರಯಿಸಿದ ವಸಂತ್
ಘನತೆಗೆ ಧಕ್ಕೆ ತಂದವರ ವಿರುದ್ಧ ಮಾನನಷ್ಟ ಮೊಕದ್ದಮೆಯ ಎಚ್ಚರಿಕೆ
ಸಿದ್ದಾಪುರ: ಕಾಳೇನಳ್ಳಿಯಲ್ಲಿ ಸಂತೋಷ್ ನಾಯ್ಕ ಎನ್ನುವಂತ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಆತ್ಮಹತ್ಯೆಗೂ, ನನಗೂ ಯಾವುದೇ ಸಂಬಂಧ ಇಲ್ಲ. ಅನಾವಶ್ಯಕವಾಗಿ ನನ್ನನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿದ್ದಾರೆ. ಈ ಪ್ರಕರಣದಲ್ಲಿ ನನ್ನ ತಪ್ಪೇನಾದರೂ ಇದ್ದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಿ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಹೇಳಿದರು.
ಸಂತೋಷ್ ನಾಯ್ಕ ಸಾವಿನ ಕುರಿತಂತೆ ವಿಚಾರಣೆಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮುಗಿಸಿ ಬಂದ ನಂತರ ಮಾಧ್ಯಮಕ್ಕೆ ಪ್ರತಿಕ್ರಯಿಸಿದ ಅವರು, ಯುವಕನ ಸಾವಿನ ಪ್ರಕರಣದಲ್ಲಿ ಸೂಕ್ತ ತನಿಖೆ ನಡೆಸಬೇಕು. ಹಾಗೂ ಅಪರಾಧಿಗಳಿಗೆ ಶಿಕ್ಷೆ ಆಗಬೇಕು. ನಿರಪರಾಧಿಗಳಿಗೆ ಶಿಕ್ಷೆ ಆಗುವಂತೆ ಆಗಬಾರದು ಎಂದರು. ಜೂ.7ರಂದು ಚೆನ್ನಮಾವಿನ ಲೋಕೇಶ್ ಎನ್ನುವಂತಹ ಹುಡುಗ ಕರೆ ಮಾಡಿ ಸೊರಬ ತಾಲೂಕಿನ ಓರ್ವ ಹುಡುಗ ಫೇಕ್ ಐಡಿ ಮಾಡಿಕೊಂಡು ಇಲ್ಲಸಲ್ಲದ ಆರೋಪ ಮಾಡಿ ಮತ್ತೆ ಹುಡುಗಿ ಫೋಟೋ ಹೊಂದಿದ ಫೇಕ್ ಐಡಿಯಲ್ಲಿ ನಮ್ಮ ತಂದೆಗೆ ಆರೋಗ್ಯ ಸರಿಯಿಲ್ಲದ ಕಾರಣ ಮಣಿಪಾಲದಲ್ಲಿ ಅಡ್ಮಿಟ್ ಆಗಿದ್ದೇವೆ, ನಮಗೆ ಹಣ ಸಹಾಯ ಮಾಡಿ ಎಂದು ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಹಣವನ್ನು ತೆಗೆದುಕೊಂಡಿದ್ದಾನೆ. ಈ ಸಂಬಂಧ ಸಹಾಯ ಮಾಡಿ ಎಂದಿದ್ದ ಆ ಹುಡುಗನಿಗೆ ತಕ್ಷಣ ಪೊಲೀಸ್ ಸ್ಟೇಷನ್ಗೆ ಹೋಗಿ ಕಂಪ್ಲೇಟ್ ಕೊಡಿ ಎಂದು ಹೇಳಿದ್ದೇನೆ. ಅದೇ ರೀತಿಯಲ್ಲಿ ಅವರು ಜೂ.7ಕ್ಕೆ ಕಂಪ್ಲೇಟ್ ನೀಡಿದ್ದರು. ಆದರೆ ಕಂಪ್ಲೇಂಟ್ ನೀಡಿ ಮೂರು ದಿನವಾದರೂ ಯಾವದೇ ಕ್ರಮ ವಹಿಸದೇ, ಅಲಕ್ಷ್ಯ ತೋರಿದ್ದಾರೆ ಎಂದರು. ಆದರೆ ಯುವಕನ ಸಾವಿನ ನಂತರ ಎಚ್ಚೆತ್ತುಕೊಂಡ ಪೋಲಿಸರು ನನ್ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಅನಾವಶ್ಯಕವಾಗಿ ಎಫ್ಐಆರ್ ಮಾಡಿದರೆ ನಾನು ಕಾನೂನು ಹೋರಾಟ ಮಾಡುತ್ತೇನೆ. ನಾನು 15 ವರ್ಷಗಳಿಂದ ರಾಜಕಾರಣ ಮಾಡುತ್ತಿದ್ದರೂ ಯಾವುದೇ ರೀತಿಯ ಭ್ರಷ್ಟಾಚಾರ ಮಾಡಿಲ್ಲ. ನಾನು ಪ್ರಾಮಾಣಿಕವಾಗಿ ಸೇವೆ ಮಾಡುತ್ತಾ ಇದ್ದೇನೆ ಎಂದರು.
ಈ ಪ್ರಕರಣದಲ್ಲಿ ನನ್ನ ಹೆಸರನ್ನು ಎಫ್ಐಆರ್ನಲ್ಲಿ ಸೇರಿಸಬೇಕು ಅಂತ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್. ಎಸ್. ಹೆಗಡೆ ಒತ್ತಾಯಿಸಿದ್ದಾರೆ. ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನ ಘನತೆಗೆ ಧಕ್ಕೆ ತಂದ ಕಾರಣಕ್ಕೆ ಮಾನನಷ್ಟ ಮೊಕದ್ದಮೆ ಕೇಸನ್ನು ದಾಖಲಿಸುತ್ತೇನೆ. ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಅಧಿಕಾರಿಗಳ ಮೇಲೆ ಒತ್ತಡವನ್ನು ತಂದು ನನ್ನ ಮೇಲೆ ಪ್ರಕರಣ ದಾಖಲಿಸಿದ್ದರು. ಪಪಂ ಸದಸ್ಯ ಕೆ.ಜಿ.ನಾಯ್ಕ ಹಾಗೂ ನನಗೂ ಹಿಂದೆ ವೈಮನಸ್ಯ ಇತ್ತು. ಆತನ ಮೇಲೂ ಮಾನನಷ್ಠ ಮೊಕದ್ದಮೆ ಹಾಕುತ್ತೇನೆ ಎಂದು ವಸಂತ ನಾಯ್ಕ ಹೇಳಿದರು.
ಈ ಸಂದರ್ಭದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೆಂಬಲಿಗರಿದ್ದರು.