ದಾಂಡೇಲಿ : ನಗರದ ಸಮೀಪದಲ್ಲಿರುವ ಕೋಗಿಲಬನದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರ ಮೃತದೇಹ ಸೋಮವಾರ ಬೆಳಿಗ್ಗೆ ಪತ್ತೆಯಾಗಿದೆ.
ಕೋಗಿಲಬನದ ನಿವಾಸಿ ನಾಗರಾಜ ತಿಮ್ಮಣ್ಣ ಬೋವಿ (ವ;60) ಎಂಬವರೇ ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಇವರು ಮೊನ್ನೆ ಬುಧವಾರದಿಂದ ನಾಪತ್ತೆಯಾಗಿದ್ದರು. ಮನೆ ಜನರು ಹಾಗೂ ಸ್ಥಳೀಯರು ಸಾಕಷ್ಟು ಕಡೆ ಹುಡುಕಾಡಿದ್ದರು. ಆದರೆ ಇವರ ಸುಳಿವು ಲಭ್ಯವಾಗಿರಲಿಲ್ಲ. ಈ ಬಗ್ಗೆ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಾಗಿತ್ತು. ಸೋಮವಾರ ಬೆಳಿಗ್ಗೆ ಸ್ಥಳೀಯರು ಕೋಗಿಲಬನದ ಸಣ್ಣ ಹಳ್ಳದಲ್ಲಿ ಮೃತದೇಹವನ್ನು ನೋಡಿದ್ದಾರೆ. ತಕ್ಷಣವೇ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿದ್ದಾರೆ.
ದಾಂಡೇಲಿ ಗ್ರಾಮೀಣ ಠಾಣೆಯ ಪಿಎಸ್ಐಗಳಾದ ಶಿವಾನಂದ ನಾವದಗಿ ಮತ್ತು ಜಗದೀಶ್ ನಾಯ್ಕ ಹಾಗೂ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯ ರಮೇಶ ನಾಯ್ಕ ಅವರು ಸುದ್ದಿ ತಿಳಿದು ತಕ್ಷಣವೇ ಸ್ಥಳಕ್ಕೆ ಆಗಮಿಸಿ, ಮುಂದಿನ ಪ್ರಕ್ರಿಯೆಗೆ ಸಹಕರಿಸಿದ್ದಾರೆ. ಈ ನಡುವೆ ಕುಟುಂಬಸ್ಥರಿಗೂ ರಮೇಶ ನಾಯ್ಕ ಅವರು ಧೈರ್ಯವನ್ನು ತುಂಬಿದ್ದಾರೆ. ಇನ್ನೂ ಈ ಸಾವಿನ ಬಗ್ಗೆ ಸತ್ಯಾಂಶ ಪೊಲೀಸ್ ತನಿಖೆಯಿಂದ ಹೊರ ಬರಬೇಕಾಗಿದೆ.