ಸಿದ್ದಾಪುರ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತದಲ್ಲಿ ಸಿದ್ದಾಪುರದ ಅಕ್ಷತಾ ಆಶಯ ಅಂಬಳ್ಳಿ(27) ಮೃತಪಟ್ಟಿದ್ದು ಗುರುವಾರ ಸಿದ್ದಾಪುರದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಸರಕಾರದ ವತಿಯಿಂದ ಶಿರಸಿ ಉಪವಿಭಾಗಾಧಿಕಾರಿ ಕಾವ್ಯಾರಾಣಿ,ತಹಸೀಲ್ದಾರ ಮಧುಸೂದನ ಕುಲಕರ್ಣಿ ಭಾಗವಹಿಸಿದ್ದರು. ಬಿಜೆಪಿ ಮಂಡಳ ಅಧ್ಯಕ್ಷ ತಿಮ್ಮಪ್ಪ ಮಡಿವಾಳ,ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಕೆ.ಜಿ.ನಾಗರಾಜ,ಪಪಂ ಸದಸ್ಯರಾದ ಕೆ.ಜಿ.ನಾಯ್ಕ ಹಣಜೀಬೈಲ್,ಗುರುರಾಜ ಶಾನಭಾಗ,ವಿಜೇಂದ್ರ ಗೌಡರ್,ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್,ಗುತ್ತಿಗೆದಾರರ ಸಂಘದ ಅಧ್ಯಕ್ಷ ಸತೀಶ ಗೌಡರ್ ಮುಂತಾದವರು ಅಂತಿಮ ದರ್ಶನ ಪಡೆದರು.
ಅಕ್ಷತಾ ಅಂಬಳ್ಳಿ ಚಾರ್ಟೆಡ್ ಅಕೌಂಟೆಂಟ್ ಆಗಿಯೂ ಇವರ ಪತಿ ಆಶಯ್ ಅಂಬಳ್ಳಿ ಸಾಪ್ಟ್ವೇರ್ ಇಂಜನೀಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಮದುವೆಯಾಗಿ ಕೇವಲ ಒಂದು ವರ್ಷವಾಗಿದ್ದ ಈ ದಂಪತಿಗಳು ಆರ್ಸಿಬಿ ತಂಡದ ಅಭಿಮಾನಿಗಳಾಗಿದ್ದರು. ಉಡುಪಿ ಜಿಲ್ಲೆಯ ಮೂಲ್ಕಿ ಅಕ್ಷತಾರ ತವರು ಮನೆ. ಗೆಲುವಿನ ತಂಡದ ಆಟಗಾರರನ್ನು ಕಣ್ಣೆದುರು ನೋಡಬೇಕು ಎಂಬ ಅಭಿಲಾಷೆಯಿಂದ ಕೆಲಸಕ್ಕೆ ರಜಾ ಹಾಕಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿದ್ದರು. ಆದರೆ ವಿಧಿ ಅಕ್ಷತಾರ ಪಾಲಿಗೆ ಮೃತ್ಯುವಾಗಿ ಬಂದಿತ್ತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ: ಸಿದ್ದಾಪುರದ ಯುವತಿ ಸಾವು
