ಯಲ್ಲಾಪುರ: ವೇದ ಪಾರಾಯಣ ಮಾಡುವುದರಿಂದ ಎಲ್ಲಾ ಕರ್ಮಗಳನ್ನು ವೇದೋಕ್ತವಾಗಿ ಮಾಡಿದ ಪುಣ್ಯ ಲಭಿಸುತ್ತದೆ ಎಂದು ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ಅವರು ತಾಲೂಕಿನ ಹುಲೇಕೋಣೆಯ ‘ಶಿವಗಂಗಾ’ ಆವಾರದಲ್ಲಿ 8 ನೇ ವರ್ಷದ ಕೃಷ್ಣಯಜುರ್ವೇದ ಪಾರಾಯಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಎಲ್ಲಾ ಕರ್ಮಗಳನ್ನು ವೇದೋಕ್ತವಾಗಿ ಮಾಡಬೇಕು. ಪ್ರಸ್ತುತ ದಿನಮಾನದಲ್ಲಿ ಅದು ಕಷ್ಟ. ಅದಕ್ಕೆ ಪರ್ಯಾಯವಾಗಿ ವೇದ ಪಾರಾಯಣ ಮಾಡುವ ಮೂಲಕ ದೇವರ ಅನುಗ್ರಹ ಪಡೆಯಬಹುದು ಎಂದರು.
ಹಿರಿಯ ವಿದ್ವಾಂಸ ವೇ.ಜಂಬೂನಾಥ ಘನಪಾಠಿ ಅವರನ್ನು ಶ್ರೀಗಳು ಸನ್ಮಾನಿಸಿದರು. ಶಿವರಾಮ ಭಟ್ಟ, ಗಂಗಾ ಭಟ್ಟ, ಮಂಜುನಾಥ ಭಟ್ಟ, ಸುಮಂಗಲಾ ಭಟ್ಟ ಶ್ರೀಗಳಿಗೆ ಫಲ ಸಮರ್ಪಿಸಿದರು. ವೇ.ವಿಶ್ವನಾಥ ಭಟ್ಟ ಬೆಳಖಂಡ ಉಪಸ್ಥಿತರಿದ್ದರು. ಕಳೆದ 4 ದಿವಸಗಳಿಂದ ಶ್ರೀರಾಮ ಭಟ್ಟ ಗುಂಡ್ಕಲ್ ಕೃಷ್ಣ ಯಜುರ್ವೇದ ಪಾರಾಯಣದಲ್ಲಿ ನಿರತರಾಗಿದ್ದು, ವೇ.ಗೋಪಾಲಕೃಷ್ಣ ಘನಪಾಠಿ, ವೇ.ನಿರ್ಗುಣ ಘನಪಾಠಿ, ವೇ.ಗಣಪತಿ ಭಟ್ಟ ಗೋಕರ್ಣ, ವೇ.ವಿದ್ಯಾನಂದ ಭಟ್ಟ ಸುಂಕಸಾಳ, ವೇ.ಶಶಿಕಾಂತ ಭಟ್ಟ ಶಂಭುಮನೆ, ವೇ.ವೆಂಕಟರಮಣ ಭಟ್ಟ ಮೊಟ್ಟೆಗದ್ದೆ ಇತರ ವಿದ್ವಾಂಸರೂ ಭಾಗವಹಿಸಿದ್ದಾರೆ. ಮೇ.25 ರಂದು ವೇದ ಪಾರಾಯಣ ಸಂಪನ್ನಗೊಳ್ಳಲಿದ್ದು, ಸಮಾರೋಪದಲ್ಲಿ ಶಿರಳಗಿಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ.
ಮಾದರಿಯ ಕಾರ್ಯ:
ಶಿವಗಂಗಾ ಆವಾರದಲ್ಲಿ ಕಳೆದ 8 ವರ್ಷಗಳಿಂದ ವೇದ ಪಾರಾಯಣ ನಡೆಸುತ್ತಿರುವುದು ಗುಂಡ್ಕಲ್ ಕುಟುಂಬದ ಮಾದರಿಯ ಕಾರ್ಯವಾಗಿದೆ. ಗುಂಡ್ಕಲ್ ನ ಮಂಜುನಾಥ ಭಟ್ಟ ಹಾಗೂ ಸುಮಂಗಲಾ ಭಟ್ಟ ತಮ್ಮ ಮಕ್ಕಳಾದ ಶ್ರೀನಿಧಿ ಹಾಗೂ ಶ್ರೀರಾಮ ವೇದ, ಸಂಸ್ಕೃತ ವಿಭಾಗದ ಅಧ್ಯಯನಕ್ಕೆ ತೊಡಗಿದಾಗಿನಿಂದ ಪ್ರತಿ ವರ್ಷ ವೇದ ಪಾರಾಯಣ ಕಾರ್ಯಕ್ರಮ ಮಾಡುತ್ತ ಬಂದಿದ್ದಾರೆ.
ಈ ಬಾರಿ ಅವರ ವಿವಾಹದ 25 ನೇ ವಾರ್ಷಿಕೋತ್ಸವದ ಜತೆಗೆ, ಮಗಳು ಶ್ರೀನಿಧಿ ಸಂಸ್ಕೃತ ವಿಭಾಗದಲ್ಲಿ ಎಂ.ಎ ಪೂರೈಸಿದ್ದಾರೆ. ಮಗ ಶ್ರೀರಾಮ ವೇದಾಧ್ಯಯನ ಮಾಡಿದ್ದು, ಈ ಬಾರಿಯ ವೇದ ಪಾರಾಯಣವನ್ನು ಸ್ವತಃ ಶ್ರೀರಾಮ ಮಾಡುತ್ತಿರುವುದು ವಿಶೇಷವಾಗಿದೆ.
ಮಕ್ಕಳಿಬ್ಬರಿಗೂ ಸನಾತನ ಶಿಕ್ಷಣ ನೀಡುವ ಮೂಲಕ ಮಾದರಿಯಾದ ಮಂಜುನಾಥ ಭಟ್ಟ ದಂಪತಿ, ವೇದ ಪಾರಾಯಣ, ಧಾರ್ಮಿಕ ಕಾರ್ಯಗಳು, ವಿದ್ವಾಂಸರಿಗೆ ಸನ್ಮಾನ ಮಾಡುವುದರೊಂದಿಗೆ ವಿವಾಹದ ರಜತ ಮಹೋತ್ಸವ ಆಚರಿಸುತ್ತಿರುವುದೂ ಮಾದರಿಯಾಗಿದೆ.