ಮೈಸೂರು: ಅರ್ಥಶಾಸ್ತ್ರ ಉಪನ್ಯಾಸಕಿ, ಲೇಖಕಿ ಮತ್ತು ನಿರೂಪಕಿ ಶ್ರೀಮತಿ ಎನ್.ಆರ್. ರೂಪಶ್ರೀ ಅವರ ಎರಡು ಕೃತಿಗಳ ಲೋಕಾರ್ಪಣೆ ಸಮಾರಂಭವು ಮಾರ್ಚ್ 23 ಭಾನುವಾರದಂದು ಸಂಜೆ 4 ಗಂಟೆಗೆ ಮೈಸೂರಿನ ಐಡಿಯಲ್ ಜಾವಾ ರೋಟರಿ ಸಭಾಂಗಣದಲ್ಲಿ ನಡೆಯಲಿದೆ.
ಕೃತಿ ಲೋಕಾರ್ಪಣೆಯನ್ನು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡೀಕೆರೆ ಗೋಪಾಲ್ ಮಾಡಲಿದ್ದು, ಹಿರಿಯ ಲೇಖಕರು ಮತ್ತು ಪತ್ರಕರ್ತರಾದ ರಾಜು ಅಡಕಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ. ರೂಪಶ್ರೀ ಅವರ ಕಾದ ಕಂಗಳ ಕಂಪನ ಕವನ ಸಂಕಲನ ಕುರಿತು ಪ್ರಸಿದ್ಧ ಕವಿಗಳಾದ ಡಾ. ಜಯಪ್ಪ ಹೊನ್ನಾಳಿ ಮಾತನಾಡುತ್ತಾರೆ. “ಪ್ರೀತಿಯೆಂದರೆ” ಕಥಾ ಸಂಕಲನ ಕುರಿತು ಸವಿಗನ್ನಡ ಪತ್ರಿಕೆಯ ಸಂಪಾದಕರಾದ ರಂಗನಾಥ ಮೈಸೂರು ಪರಿಚಯಿಸುತ್ತಾರೆ. ಸಂಪಾದಕೀಯ ಸಲಹೆಗಾರರು ಮತ್ತು ಬೆನಕ ಬುಕ್ಸ್ ಬ್ಯಾಂಕ್ ಪ್ರಕಾಶನ ಕೋಡೂರು ಮಾಲೀಕರಾದ ಗಣೇಶ್ ಕೋಡೂರು ಅವರು ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಿರುತ್ತಾರೆ. ಇದೇ ಸಂದರ್ಭದಲ್ಲಿ ಕವನ ಸಂಕಲನದಲ್ಲಿನ ಗೀತೆಗಳ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹಿರಿಕಿರಿಯ ಕವಿಗಳ ಕವಿಗೋಷ್ಠಿ ಕಾರ್ಯಕ್ರಮವು ಇದೆ.
ಮೂಲತಃ ಶಿರಸಿಯವರಾದ ಎನ್. ಆರ್. ರೂಪಶ್ರೀ ಅವರು ಇದುವರೆಗೆ ಒಟ್ಟು ಆರು ಪುಸ್ತಕಗಳನ್ನು ಬರೆದಿದ್ದಾರೆ. ಹಲವಾರು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಪ್ರಸ್ತುತ ಮೈಸೂರಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.