ಶಿರಸಿ: ಇಲ್ಲಿನ ಟಿ.ಎಸ್.ಎಸ್. ಪ್ರಧಾನ ಕಛೇರಿ ಆವರಣದಲ್ಲಿ ಜೂ.10, ಮಂಗಳವಾರದಂದು ಕೃಷಿ ಮತ್ತು ಕೃಷಿಕರನ್ನು ಉತ್ತೇಜಿಸುವ ದೃಷ್ಟಿಯಿಂದ ವಿವಿಧ ಹಣ್ಣು, ಹೂವು ಹಾಗೂ ವಾಣಿಜ್ಯ ಬೆಳೆ ಸಸ್ಯಗಳ ಪ್ರದರ್ಶನ ಮತ್ತು ಮಾರಾಟ ಮೇಳ “ಹಸಿರು ಮಾಸ”ಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಗೋಪಾಲಕೃಷ್ಣ ವೆಂಕಟ್ರಮಣ ವೈದ್ಯ ಮತ್ತಿಘಟ್ಟ ವಹಿಸಿದ್ದರು. ಸಾಂಕೇತಿಕವಾಗಿ ಕಾಫಿ ಗಿಡವನ್ನು ಸದಸ್ಯರಾದ ಸುರೇಶ ಮಂಜುನಾಥ ಹೆಗಡೆ ಹುಲದೇವನಸರ, ವೆಂಕಟ್ರಮಣ ನಾರಾಯಣ ಹೆಗಡೆ ವಡೇನದ್ದ ಹಾಗೂ ಮಹಾಬಲೇಶ್ವರ ಶ್ರೀಪತಿ ಭಟ್ಟ ಅರಸಗೋಡ ಇವರಿಗೆ ನೀಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಂಘದ ಸದಸ್ಯರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ರಿಯಾಯತಿ ದರದಲ್ಲಿ ಸಸ್ಯಗಳನ್ನು ಮಾರಾಟ ಮಾಡುತ್ತಿರುವುದಾಗಿ ತಿಳಿಸಿದರು. ಈ ಹಸಿರು ಮಾಸ ಶೀರ್ಷಿಕೆ ಅಡಿಯಲ್ಲಿ ಸಂಘದಲ್ಲಿ ಮಳೆಗಾಲದ ಪರ್ಯಂತ ಅಡಿಕೆ, ಕಾಳು ಮೆಣಸು, ಬಾಳೆ, ಮಾವು, ಗೇರು, ತೆಂಗು, ಲಿಂಬೆ, ಪೇರಲೆ, ಚಿಕ್ಕು, ಏಲಕ್ಕಿ, ಕಾಫಿ, ಹಲಸು ಹೀಗೆ ಅನೇಕ ಆಹಾರ ಮತ್ತು ವಾಣಿಜ್ಯ ಬೆಳೆಗಳ ಆರೋಗ್ಯವಂತ ಸಸ್ಯಗಳು ಮತ್ತು ವಿವಿಧ ಜಾತಿಯ ಹೂವಿನ ಗಿಡಗಳ ಮಾರಾಟ ವ್ಯವಸ್ಥೆ ಕಲ್ಪಿಸಲಾಗಿದ್ದು, ಸದಸ್ಯರು ಇದರ ಪ್ರಯೋಜನ ಪಡೆದುಕೊಳ್ಳಲು ಸೂಚಿಸಿದರು. ಯಾವ ಸಂದರ್ಭದಲ್ಲಿ ಯಾವ ಬೆಳೆ ರೈತರ ಕೈ ಹಿಡಿಯುವುದು ಎಂದು ಹೇಳುವುದು ಕಷ್ಟ. ದರ, ಹವಾಮಾನ ವೈಪರೀತ್ಯ ಇತ್ತೀಚಿನ ದಿನಗಳಲ್ಲಿ ಕಾಡುತ್ತಿರುವ ಮಾರಕ ರೋಗಗಳು ಇತರೇ ಕಾರಣದಿಂದ ಎಲ್ಲ ಬೆಳೆಗಳನ್ನು ಬೆಳೆದರೆ ಯಾವುದಾದರೊಂದು ಬೆಳೆ ರೈತರ ರಕ್ಷಣೆಗೆ ನೆರವಾಗುವುದು ಖಂಡಿತ ಎಂದು ಉಲ್ಲೇಖಿಸಿದರು. ಸದಸ್ಯರ ಮನೆ ಮತ್ತು ಸುತ್ತಮುತ್ತಲಿನ ವಾತಾವರಣ ಸದಾ ಹಸಿರಾಗಿರಬೇಕು ಮತ್ತು ಸದಸ್ಯರು ಸದಾ ಹಸನಾಗಿರಬೇಕು. ನಮ್ಮ ಹಿಂದಿನವರು ಮಾವು ಹಲಸು ತೆಂಗು ಇತರ ಗಿಡ ನೆಟ್ಟು ಬೆಳೆಸಿದಕ್ಕೆ ನಾವು ಇಂದು ಸಂತಸದಿಂದ ಇದ್ದೇವೆ. ಸಂಪದ್ಭರಿತರಾಗಿದ್ದೇವೆ. ಹಾಗೇಯೇ ನಾವು ಇಂದು ಬೆಳೆಸುವ ಗಿಡ ಮರವಾಗಿ ಮುಂದಿನ ಪೀಳಿಗೆಗೆ ಅನುಕೂಲವಾಗಬೇಕು ಎಂದು ಆಶಿಸಿದರು.
ಕರ್ಯಕ್ರಮದಲ್ಲಿ ಟಿ.ಎಸ್.ಎಸ್.ನ ಉಪಾಧ್ಯಕ್ಷರಾದ ಮಹಾಬಲೇಶ್ವರ ಎನ್ ಭಟ್ಟ ತೋಟಿಮನೆ, ಟಿ.ಎಸ್.ಎಸ್.ನ ನಿರ್ದೇಶಕರಾದ ರವೀಂದ್ರ ಜಯಪ್ರಕಾಶ ಹೆಗಡೆ ಹೀರೇಕೈ, ಪುರುಷೋತ್ತಮ ಹೆಗಡೆ ಕಳಲೇಮಕ್ಕಿ ಹಾಗೂ ಪ್ರಭಾರಿ ಪ್ರಧಾನ ವ್ಯವಸ್ಥಾಪಕರಾದ ಗಿರೀಶ ಚಿದಾನಂದ ಹೆಗಡೆ ಸಂಕದಮನೆ, ಸಂಘದ ಸಿಬ್ಬಂದಿಗಳು, ಸದಸ್ಯರು ಗ್ರಾಹಕರು ಉಪಸ್ಥಿತರಿದ್ದರು. ಸಹಾಯಕ ವ್ಯವಸ್ಥಾಪಕ ಗೋಪಾಲ ಹೆಗಡೆ ಸ್ವಾಗತ, ವಂದನಾರ್ಪಣೆ ಹಾಗೂ ಕಾರ್ಯಕ್ರಮ ನಿರೂಪಣೆ ನಿರ್ವಹಿಸಿದರು.