ಶಿರಸಿ: ಪದವಿಯಲ್ಲಿ ಅಧ್ಯಯನ ಜೊತೆ ಜೊತೆಗೆ ಎಲ್ಲಾ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ಅಧ್ಯಯನವನ್ನು ಒಂದು ಹಂತಕ್ಕೆ ಮುಗಿಸಿದ್ದೀರಿ. ನಿಜವಾದ ಪರೀಕ್ಷೆ ಈಗ ನಿಮಗೆ ಪ್ರಾರಂಭವಾಗುತ್ತದೆ ದಕ್ಷತೆ, ಬದ್ಧತೆ, ಜವಾಬ್ದಾರಿ ನಿಮ್ಮದಾಗಬೇಕಿದೆ ಎಂದು ಮಾಜಿ ಪ್ರಾಚಾರ್ಯ ಪ್ರೊಫೆಸರ್ ರವಿ ನಾಯಕ್ ಹೇಳಿದರು.
ಅವರು ಎಂಎಂ ಕಲಾ ಮತ್ತು ವಿಜ್ಞಾನ ಮಹಾ ವಿದ್ಯಾಲಯದಲ್ಲಿ ಆಯೋಜಿಸಿದ್ದ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ನೀವು ಜೀವನದಲ್ಲಿ ನಾಲ್ಕು ಅಂಶಗಳನ್ನು ಅಳವಡಿಸಿಕೊಳ್ಳಬೇಕು. ಈಗಾಗಲೇ ಭವಿಷ್ಯದ ಕನಸನ್ನು ಕಂಡಿದ್ದೀರಿ, ನನಸು ಮಾಡಿಕೊಳ್ಳಲು ಬದ್ಧತೆ ಬೇಕು. ನಿಮ್ಮನ್ನು ಕಷ್ಟಪಟ್ಟು ನಿಮ್ಮ ತಂದೆ ತಾಯಿ ಓದಿಸಿದ್ದಾರೆ ಅವರ ವೃದ್ಧಾಪ್ಯದಲ್ಲಿ ಉತ್ತಮವಾಗಿ ನೋಡಿಕೊಳ್ಳಬೇಕು. ಶಿಕ್ಷಕರಿಗೆ ಗೌರವವನ್ನು ನೀಡಬೇಕು. ಸಮಾಜದೊಟ್ಟಿಗೆ ಬದುಕುವ ನೀವು ಸಮಾಜವನ್ನು ತಿದ್ದುವ ಕೆಲಸವನ್ನು ಮಾಡಬೇಕು. ಈ ನಾಲ್ಕು ಅಂಶಗಳು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಜೀವನದಲ್ಲಿ ಅಳವಡಿಸಿಕೊಳ್ಳಲೇಬೇಕಾದ ವಿಚಾರವಾಗಿದೆ.
ಕಾಲೇಜು ಉಪಸಮಿತಿ ಸದಸ್ಯ ಪ್ರಸಾದ್ ಭಟ್ ಮಾತನಾಡಿ ಅಹಂಕಾರ ಬಿಟ್ಟು ವಿದ್ಯಾ ದೇಗುಲದ ಬಾಗಿಲನ್ನು ತಟ್ಟಿದರೆ ಭವಿಷ್ಯ ಉಜ್ವಲವಾಗುತ್ತದೆ. ನಿಮ್ಮ ಭವಿಷ್ಯವು ಉಜ್ವಲವಾಗಬೇಕು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಎಂದು ಕರೆಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪಸಮಿತಿ ಅಧ್ಯಕ್ಷ ಎಸ್.ಕೆ.ಭಾಗವತ್ ವಹಿಸಿದ್ದರು. ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿಗಳಾದ ಸುದೀಪ್ ಮಾಳಿ ಮತ್ತು ಪವನ್ ದೇವಾಡಿಗ ಉಪಸ್ಥಿತರಿದ್ದರು.
ಸ್ವಾಗತಿಸಿ ಪ್ರಸ್ತಾವಿಸಿದ ಪ್ರಾಚಾರ್ಯ ಜಿ.ಟಿ.ಭಟ್ ಮಾತನಾಡಿ ಸಂಸ್ಕೃತದಲ್ಲಿ ಒಂದು ಸಾಲಿದೆ ಅಂತಃ ಅಸ್ತಿ ಪ್ರಾರಂಭ ಎಂದು ಅದರ ಅರ್ಥ ಎಲ್ಲಿ ಮುಕ್ತಾಯವೋ ಅಲ್ಲಿಂದಲೇ ಪ್ರಾರಂಭ ಎಂದು ಹಾಗಾಗಿ ಪದವಿ ಮುಗಿಸಿ ಹೋಗುತ್ತಿರುವ ನೀವು ಹೊಸ ಜೀವನವನ್ನು ಪ್ರಾರಂಭಿಸುತ್ತೀರಿ. ಅದು ನಿಮಗೆ ಎಲ್ಲಾ ಸೌಭಾಗ್ಯವನ್ನು ನೀಡಲಿ. ನಿಮ್ಮ ಶ್ರಮ ನಿಮ್ಮ ಸಮರ್ಪಣಾ ಭಾವ ಜೀವನವನ್ನು ಉಜ್ವಲವಾಗಿಸಲಿ ಎಂದರು. ಇದೇ ಸಂದರ್ಭದಲ್ಲಿ ಪ್ರೊಫೆಸರ್ ರವಿ ನಾಯಕ್ ಅವರನ್ನು ಸನ್ಮಾನಿಸಲಾಯಿತು, ಬಿಎ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಸ್ವಾಗತ ಗೀತೆ ಹಾಡಿದರು. ಪ್ರೊಫೆಸರ್ ರಾಘವೇಂದ್ರ ಹೆಗಡೆ ವಂದಿಸಿದರು. ವಿದ್ಯಾರ್ಥಿನಿ ದಿವ್ಯಾ ಗಾಂವ್ಕರ್ ನಿರೂಪಿಸಿದರು.