ಶಿರಸಿ: ಇಲ್ಲಿನ ಶಾಲ್ಮಲಾ ಬಡಾವಣೆಯ ಪ್ರತಿಭಾನ್ವಿತ ವಿದ್ಯಾರ್ಥಿ ಕು. ವೇಣುಗೋಪಾಲ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ (ಜೆಇಇ )ಯಲ್ಲಿ 336ನೇ ಸ್ಥಾನದೊಂದಿಗೆ ಉತ್ತೀರ್ಣನಾಗಿದ್ದು, ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗೆ ಸನ್ಮಾನಿಸಿ ಗೌರವಿಸಲಾಯಿತು.
ಸಾಮಾಜಿಕ ಮುಂದಾಳು, ಬಸಟ್ಟಿಕೆರೆಯಾದಿಯಾಗಿ ಹಲವಾರು ಜಲಮೂಲಗಳ ಅಭಿವೃದ್ದಿಯ ರೂವಾರಿ ಶ್ರೀನಿವಾಸ ಹೆಬ್ಬಾರ ವೇಣುವನ್ನು ಸನ್ಮಾನಿಸಿ ಇಂತಹ ಅಪೂರ್ವ ಸಾಧಕ ತನ್ನ ಸರಳತೆ ಸೌಜನ್ಯದಿಂದ ಹೆಚ್ಚು ಆಕರ್ಷಿತ ಎಂದು ಹೇಳಿ ವಿದ್ಯಾ ವಿನಯೇನ ಶೋಭತೆ ಎಂದು ತಿಳಿಸಿ ಇವನು ಮುಂದೆ ಇನ್ನೂ ಉನ್ನತ ಸಾಧನೆ ಮಾಡಿ ಶಿರಸಿಗೆ ಕೀರ್ತಿ ತರಲೆಂದರು.
ಇದೇ ಸಂದರ್ಭದಲ್ಲಿ ಆತನ ಮಾತಾಪಿತರಾದ ಬಿ.ಜಿ ಆನಂದ್,ಶ್ರೀಮತಿ ರಾಜಲಕ್ಷ್ಮಿ ದಂಪತಿಗಳನ್ನೂ ಅಭಿನಂದಿಸಲಾಯಿತು. ವೇಣು ಒಡನಾಡಿಗಳು, ಸ್ಥಳೀಯ ನಾಗರಿಕರೂ ಶುಭ ಹಾರೈಸಿದರು. ಇದೇ ವೇಳೆ ಶಾಲ್ಮಲಾ ಸ್ನೇಹಕೂಟದ ಸದಸ್ಯರುಗಳು, ಡಿ.ಎಸ್.ಹೆಗಡೆ ಮೂರೂರು ನೇತೃತ್ವದಲ್ಲಿ ಶ್ರೀನಿವಾಸ ಹೆಬ್ಬಾರರನ್ನು ಗೌರವಿಸಿದರು.
ವಿಶೇಷ ಅಭ್ಯಾಗತರಾದ ಲೋಕಧ್ವನಿ ದಿನಪತ್ರಿಕೆಯ ಸ್ಥಾನಿಕ ಸಂಪಾದಕ ನಾಗರಾಜ ಮತ್ತಿಗಾರ ಚಿಕ್ಕ ಬಡಾವಣೆಯ ಒಗ್ಗಟ್ಟು,ಪರಸ್ಪರ ಸಹಮತ ಶ್ಲಾಘಿಸಿದರು. ವಿದ್ಯೆ ಒಂದು ಅಪಹರಿಸಲಾಗದ ಸಂಪತ್ತು.ವಿದ್ಯೆಗೆ ಪೋಷಕರು ಹೆಚ್ಚಚ್ಚು ಗಮನ ನೀಡಬೇಕೆಂದು ಕಿವಿಮಾತು ಹೇಳಿ ಕು. ವೇಣುವಿನ ಸಾಧನೆ ಹಿಂದಿರುವ ಪರಿಶ್ರಮ, ಛಲ ಆದರ್ಶವಾದದ್ದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬಡಾವಣೆಯ ಇನ್ನೋರ್ವ ಸಾಧಕ ಅಮೃತ ರಾಜೇಂದ್ರ ಭಟ್ (ನವೋದಯದ ಟಾಪರ್,) ಮತ್ತು ಕುಮಾರಿ ಅದಿತಿ ಈಶ್ವರಪ್ಪ ಇವರನ್ನೂ ಅಭಿನಂದಿಸಲಾಯಿತು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಜೀವಜಲ ಕಾರ್ಯಪಡೆಯ ಪದಾಧಿಕಾರಿಗಳಾದ ಡಾ.ಗೋವಿಂದ ಭಟ್, ಕೆ.ವಿ ಭಟ್, ಎಂ.ಎಂ.ಭಟ್, ಸಾಂದರ್ಭಿಕವಾಗಿ ಮಾತನಾಡಿದರು.ವೇ. ರಾಜೇಶ್ ಭಟ್ ಮತ್ತು ವೇ.ತ್ರಿವಿಕ್ರಮ ಭಟ್ಟರಿಂದ ವೇದಘೋಷ,ಕು.ಧಾತ್ರಿ ಹೆಗಡೆ ,ಸ್ವಾಗತಿಸಿದರು. ದರುಯ್ ಕುಮಾರ ವಂದಿಸಿದನು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಸಂಪನ್ನವಾಯ್ತು. ಡಿ.ಎಸ್.ಹೆಗಡೆ ಮೂರೂರು ಅವರು ಸಂಕಲ್ಪಿಸಿ,ಸಂಯೋಜಿಸಿದ ಕಾರ್ಯಕ್ರಮದಲ್ಲಿ ಬಡಾವಣೆಯ ಎಲ್ಲ ಮಾತೆಯರೂ,ಮಹನೀಯರು,ಮಕ್ಕಳೂ ಪಾಲ್ಗೊಂಡಿದ್ದರು.