ದಾಂಡೇಲಿ : ನಗರದ ಜೆ.ಎನ್ ರಸ್ತೆಯ ಪುಸ್ತಕ ಮಳಿಗೆಯೊಂದರ ಕೌಂಟರಿನಲ್ಲಿ ಇಟ್ಟಿದ್ದ ಕಾರಿನ ಕೀಯನ್ನು ಕಳವು ಮಾಡಿದ್ದ ವ್ಯಕ್ತಿ ಕೀಯನ್ನು ಕಾರಿನ ಮಾಲಕರಿಗೆ ಮರಳಿಸಿದ್ದಾನೆ.
ಸ್ಥಳೀಯ ಗಣೇಶನಗರದ ನಿವಾಸಿ ಮೈಕಲ್ ವ್ಹಾಜ್ ಎಂಬವರು ಜೆ.ಎನ್ ರಸ್ತೆಯಲ್ಲಿರುವ ದಾಮೋದರ ಬುಕ್ ಸ್ಟಾಲಿಗೆ ಪುಸ್ತಕ ಖರೀದಿಗಾಗಿ ಜೂನ್.3 ರಂದು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ತಮ್ಮ ಕೆಎ 17, ಸಿ 3017 ಸಂಖ್ಯೆಯ ತಮ್ಮ ಕಾರಿನ ಕೀಯನ್ನು ಬುಕ್ ಸ್ಟಾಲಿನ ಕೌಂಟರ್ ನಲ್ಲಿ ಇಟ್ಟಿದ್ದಾರೆ. ಅದೇ ಮಳಿಗೆಗೆ ಬಂದಿದ್ದ ಗಣೇಶಗುಡಿಯ ನಿವಾಸಿ ಎನ್ನಲಾದ ಗ್ರಾಹಕನೋರ್ವ ಇದನ್ನು ಗಮನಿಸಿ, ಮೈಕಲ್ ವ್ಹಾಜ್ ಅವರ ಕಣ್ತಪ್ಪಿಸಿ ಕಾರಿನ ಕೀಯನ್ನು ಉಪಾಯದಿಂದ ಎಗರಿಸಿದ್ದಾನೆ. ಕಾರಿನ ಕೀಯನ್ನು ಕಳವು ಮಾಡುತ್ತಿರುವ ದೃಶ್ಯ ಮಳಿಗೆಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಈ ಬಗ್ಗೆ ಮೈಕಲ್ ವ್ಹಾಜ್ ಅವರು ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿಯನ್ನು ನೀಡಿದ್ದರು. ಸಿಟಿಸಿಟಿವಿಯ ದೃಶ್ಯವನ್ನು ನೋಡಿದ ನಗರದ ಟ್ಯಾಕ್ಸಿ ಚಾಲಕರು ಕಾರಿನ ಕೀ ಕಳವು ಮಾಡಿದ ವ್ಯಕ್ತಿ ಗಣೇಶಗುಡಿಯ ನಿವಾಸಿಯಾಗಿದ್ದಾನೆ ಎಂದು ತಿಳಿಸಿದ್ದಾರೆ. ಈ ಮಾಹಿತಿಯನ್ನು ಪೊಲೀಸರಿಗೂ ತಿಳಿಸಲಾಗಿತ್ತು. ಕೂಡಲೇ ಪೊಲೀಸರು ಆತನಿಗೆ ಕರೆ ಮಾಡಿ ತಕ್ಷಣವೇ ಕಾರಿನ ಕೀಯನ್ನು ಹಿಂದಿರುಗಿಸುವಂತೆ ಎಚ್ಚರಿಕೆಯನ್ನು ನೀಡಿದ್ದರು. ಅಂತೂ ಆ ವ್ಯಕ್ತಿ ಕಾರಿನ ಕೀಯನ್ನು ಬಸ್ ಮೂಲಕ ಕಳುಹಿಸಿ ಮೈಕಲ್ ವ್ಹಾಜ್ ಅವರಿಗೆ ಮಾಹಿತಿಯನ್ನು ನೀಡಿದ್ದಾನೆ. ಕಾರಿನ ಕೀ ಗಾಗಿ ಕಳೆದ ನಾಲ್ಕು ದಿನಗಳಿಂದ ಒದ್ದಾಡುತ್ತಿದ್ದ ಮೈಕಲ್ ವ್ಹಾಜ್ ಅವರಿಗೆ ಇದೀಗ ಕಾರಿನ ಕೀ ಸಿಕ್ಕಿರುವುದರಿಂದ ಆತಂಕ ದೂರವಾಗಿದೆ. ಕಾರಿನ ಕೀ ಸಿಗುವಂತಾಗಲು ಸಹಕರಿಸಿದ ನಗರ ಪೊಲೀಸ್ ಠಾಣೆಗೆ ಮತ್ತು ಟ್ಯಾಕ್ಸಿ ಚಾಲಕರಿಗೆ ಮೈಕಲ್ ವ್ಹಾಜ್ ಅವರು ಮಾಧ್ಯಮದ ಮೂಲಕ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.