ಯಲ್ಲಾಪುರ: ಪರೀಕ್ಷೆಯ ಕ್ಷಣಗಳು ಭಯವನ್ನು ಉಂಟು ಮಾಡದೇ ಆತ್ಮ ಸ್ಥೈರ್ಯ ಹೆಚ್ಚಿಸಿಕೊಳ್ಳಲು ಸಹಾಯಕವಾಗಬೇಕು. ಮನಸ್ಸಿನ ಉಲ್ಲಸಿತವು ಉತ್ತಮ ಅಂಕಗಳನ್ನು ಪಡೆಯಲು ಸಹಾಯವಾಗುತ್ತದೆ. ಅಭ್ಯಾಸ ಮಾಡಿದ ಪಠ್ಯಗಳು ನೆನಪಿನ ಮೆಲುಕಿಗೆ ಆಗಾಗ ಸಿಗಲು ಬರವಣಿಗೆಯ ಕ್ರಮವನ್ನು ರೂಢಿಸಿಕೊಳ್ಳಿ ಎಂದು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ ಧನವಾಡಕರ ಅಭಿಪ್ರಾಯಪಟ್ಟರು.
ಅವರು ಬುಧವಾರ ತಾಲೂಕಿನ ವಜ್ರಳ್ಳಿಯ ಗ್ರಾಮ ಪಂಚಾಯಿತಿ ಗ್ರಂಥಾಲಯ ಅರಿವು ಕೇಂದ್ರಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಎಸ್ಎಸ್ಎಲ್ಸಿ ಮಕ್ಕಳ ಜೊತೆಗಿನ ಪರೀಕ್ಷಾ ತಯಾರಿ ಕುರಿತು ಸಂವಾದದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಆಧುನಿಕತೆಯ ತಂತ್ರಜ್ಞಾನದಿಂದ ಕಲಿಕೆ ಸುಲಭವಾಗಿದೆ. ಭವಿಷ್ಯದ ಬದಲಾವಣೆಗಳನ್ನು, ಸವಾಲುಗಳನ್ನು ಎದುರಿಸಲು ನಾವು ಸನ್ನದ್ಧವಾಗಬೇಕಿದೆ. ಉತ್ತಮ ಗುರಿಯ ಆಯ್ಕೆ ನಾವು ಶ್ರಮಿಸಬೇಕಿದೆ. ಪೂರ್ವ ತಯಾರಿಯ ಪರೀಕ್ಷೆಯ ಉತ್ತಮ ಫಲಿತಾಂಶ ಜೀವನದ ಮಾರ್ಗದರ್ಶನದ ಫಲಕಗಳಾಗಲಿ ಎಂದು ಆಶಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ಸಿಆರ್ಪಿ ಪ್ರಭಾಕರ ಭಟ್ ಮಾತನಾಡಿ ಪರೀಕ್ಷೆಯ ಬಗೆಗೆ ಆತಂಕಗಳು ಬೇಡ. ಪ್ರತಿಯೊಬ್ಬರಲ್ಲೂ ಅಧ್ಯಯನದ ಶಕ್ತಿ ಇದೆ. ನಮ್ಮ ಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಉತ್ತಮ ಫಲಿತಾಂಶ ಪಡೆಯುವಂತಾಗಲಿ ಎಂದು ಹೇಳಿದರು. ಮುಖ್ಯಾಧ್ಯಾಪಕ ಎಂ.ಕೆ. ಭಟ್ಟ ಸ್ವಾಗತಿಸಿದರು. ಶಿಕ್ಷಕ ಎಸ್.ಟಿ.ಬೇವಿನಕಟ್ಟಿ ನಿರ್ವಹಿಸಿದರು. ಗ್ರಂಥಪಾಲಕ ದತ್ತಾತ್ರೇಯ ಭಟ್ಟ ವಂದಿಸಿದರು