ದಾಂಡೇಲಿ : ಮಹಾಶಿವರಾತ್ರಿಯ ನಿಮಿತ್ತ ಶಿವರಾತ್ರಿಗೆ ಪ್ರಸಿದ್ದವಾದ ಶ್ರೀ. ಕವಳೇಶ್ವರನ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ತಮ್ಮ ದಣಿವನ್ನು ನಿವಾರಿಸಲು ನಗರದ ರಾಜೇಶ ಜ್ಯುವೆಲ್ಲರ್ಸ್ ಆಭರಣದ ಅಂಗಡಿಯ ಮಾಲಕರಾದ ರಾಜೇಶ್ ವೆರ್ಣೇಕರ್ ಮತ್ತು ಅವರ ಬಳಗದ ವತಿಯಿಂದ ಪ್ರತಿವರ್ಷದಂತೆ ಈ ವರ್ಷವು ಭಕ್ತ ಜನರಿಗೆ ನೀರು ಮತ್ತು ಬೆಲ್ಲವನ್ನು ವಿತರಣೆ ಮಾಡಲಾಯಿತು. ಈ ಸೇವೆಗೆ ಈ ಬಾರಿ 25ನೇ ವರ್ಷದ ಸಂಭ್ರಮ.
ಕವಳಕ್ಕೆ ಸಾಗಬೇಕೆಂದರೆ ದಾಂಡೇಲಿಯಿಂದ ಬಸ್ ಅಥವಾ ಟ್ಯಾಕ್ಸಿಯ ಮೂಲಕ ಸರಿಸುಮಾರು 26 ಕಿ.ಮೀ ಕ್ರಮಿಸಿ ನಂತರ ಅಲ್ಲಿಂದ ಮೂರು ಕಿ.ಮೀ ನಷ್ಟು ಕಾಡಿನ ಮದ್ಯ ಕಾಲ್ನಡಿಗೆಯಲ್ಲಿ ಸಾಗಬೇಕಾಗುತ್ತದೆ. ಇಂತಹ ದುರ್ಗಮವಾದ ಕಾಡು ದಾರಿಯಲ್ಲಿ ಶ್ರೀ.ಕವಳೇಶ್ವರ ಸನ್ನಿಧಿಗೆ ಬರುವ ಭಕ್ತಾದಿಗಳಿಗೆ ನೀರು ವಿತರಿಸುವ ಮೂಲಕ ಭಕ್ತರ ನೀರಿನ ದಾಹವನ್ನು ತಣಿಸುವ ಕಾರ್ಯವನ್ನು ಕಳೆದ 25 ವರ್ಷಗಳಿಂದ ರಾಜೇಶ್ ವೆರ್ಣೇಕರ್ ಅವರು ತನ್ನ ಗೆಳೆಯರ ಬಳಗದ ರವಿ ಪೈ, ಮಹಾಂತೇಶ, ಅತುಲ್, ಸುರೇಶ ಕುಂಬ್ರೀಕರ, ಅಶ್ವಿನಿ, ರೇಖಾ, ಜ್ಯೋತಿ, ಸಂಸ್ಕಾರ ಮತ್ತು ಅರ್ಜುನ್ ಅವರ ಸಹಕಾರದಲ್ಲಿ ಈ ಬಾರಿಯೂ ಯಶಸ್ವಿಯಾಗಿ ನಿರ್ವಹಿಸಿಕೊಂಡು ಬಂದಿದ್ದಾರೆ.
ಕವಳೇಶ್ವರನ ದರ್ಶನಕ್ಕೆಂದು ಹೋದ ಸಂದರ್ಭದಲ್ಲಿ ದಟ್ಟ ಕಾಡಿನ ಮಾರ್ಗ ಮದ್ಯದಲ್ಲಿ ಬಾಯಾರಿಕೆಯನ್ನು ನೀಗಿಸಿಕೊಳ್ಳಲು ಎಲ್ಲಿ ಹುಡುಕಿದರೂ ನೀರು ಸಿಗದೇ ಇದ್ದಾಗ, ಇಂತಹ ಸ್ಥಿತಿ ಮುಂಬರುವ ದಿನಗಳಲ್ಲಿ ಯಾವ ಭಕ್ತರಿಗೂ ಬಾರದಿರಲಿ ಎಂಬ ಆಶಯದೊಂದಿಗೆ ರಾಜೇಶ ವರ್ಣೇಕರವರು 2000 ನೇ ಸಾಲಿನಿಂದಲೇ ಮಹಾ ಶಿವರಾತ್ರಿಯ ದಿನ ಕವಳೇಶ್ವರನ ಸನ್ನಿಧಿಗೆ ಬರುವ ಭಕ್ತರ ಬಾಯಾರಿಕೆಯನ್ನು ನೀಗಿಸಲು ದಾಂಡೇಲಿಯಿಂದ ವಾಹನದ ಮೂಲಕ ನೀರನ್ನು ಸಾಗಿಸಿ ಅಲ್ಲಿಗೆ ಬರುವ ಲಕ್ಷಾಂತರ ಸಂಖ್ಯೆಯ ಅಧಿಕ ಭಕ್ತರಿಗೆ ನೀರಿನ ಜೊತೆಗೆ ಬೆಲ್ಲವನ್ನು ನೀಡಿ ಸಹಕರಿಸುತ್ತಾ ಬರುತ್ತಿದ್ದಾರೆ.
ಅಂತೆಯೆ ಇದೇ ಸೇವಾ ಕಾರ್ಯವನ್ನು ಬುಧವಾರವು ಮುಂದುವರೆಸುವ ಮೂಲಕ ಭಕ್ತ ಜನರ ಶ್ಲಾಘನೆಗೆ ರಾಜೇಶ್ ವೆರ್ಣೇಕರ್ ಹಾಗೂ ಅವರ ಬಳಗ ಪಾತ್ರವಾಗಿದೆ.