Slide
Slide
Slide
previous arrow
next arrow

ಬಿಜಿಎಸ್‌ ಸೆಂಟ್ರಲ್‌ ಸ್ಕೂಲಿನಲ್ಲಿ ಯೋಗ ದಿನಾಚರಣೆ

300x250 AD

ಕುಮಟಾ: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನಮಠದ ಪ್ರಧಾನ ಕಾರ್ಯದರ್ಶಿ ಹಾಗೂ ಶಿವಮೊಗ್ಗ ಮತ್ತು ಉತ್ತರ ಕನ್ನಡ ಶಾಖಾಮಠದ ಪೂಜ್ಯರಾದ  ಸದ್ಗುರು ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಆಶೀರ್ವಾದಗಳೊಂದಿಗೆ, ಮಿರ್ಜಾನ್‌ ಶಾಖಾಮಠದ ಪೂಜ್ಯರಾದ ಬ್ರಹ್ಮಚಾರಿ ಶ್ರೀ ನಿಶ್ಚಲಾನಂದನಾಥಜೀ ಮಾರ್ಗದರ್ಶನದಲ್ಲಿ  ಜೂ.21ರಂದು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಬಿಜಿಎಸ್‌ ಸೆಂಟ್ರಲ್‌ ಸ್ಕೂಲ್‌ ಮತ್ತು ಆದಿಚುಂಚನಗಿರಿ ಇಂಡಿಪೆಂಡೆಂಟ್‌ ಪದವಿಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ 10ನೇ ಅಂತರರಾಷ್ಷ್ರೀಯ ಯೋಗ ದಿನಾಚರಣೆಯನ್ನು  ಆಚರಿಸಲಾಯಿತು.

10ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜ್ಯೋತಿ ಬೆಳಗಿಸಿ, ಉದ್ಘಾಟಿಸಿದ ಬಿಜಿಎಸ್‌ ಸಂಸ್ಥೆಯ ಆಡಳಿತ ಅಧಿಕಾರಿ ಜಿ. ಮಂಜುನಾಥ ಓಂಕಾರದ ಮಹತ್ವ, ಧ್ಯಾನ, ಯೋಗಾಸನ ಮತ್ತು ಪ್ರಾಣಾಯಾಮ ಇಂದು ಜಗತ್ತಿನಲ್ಲಿ ಎಷ್ಟು ಪ್ರಾಮುಖ್ಯತೆ ಪಡೆದಿದೆ. ಪ್ರಪಂಚದ ಬಹಳಷ್ಟು ದೇಶಗಳು ಇಂದು ತಮ್ಮ ದೈನಂದಿನ ಜೀವನದಲ್ಲಿ ಯೋಗಾಸನವನ್ನು ಹೇಗೆ ಅಳವಡಿಸಿಕೊಂಡಿದೆ, ದಿನನಿತ್ಯ ಯೋಗಾಸಾನ ಮಾಡುವುದರ ಮೂಲಕ ನಮ್ಮ ದೇಹ ಮತ್ತು ಮನಸ್ಸು  ಪ್ರಫುಲ್ಲವಾಗಿರುವುದಲ್ಲದೆ ನಾವು ಸದಾ ಆರೋಗ್ಯವಾಗಿರಬಹುದು ಎಂಬುದನ್ನು ಹೇಳಿದರು. ಪತಂಜಲಿಯ ಅಷ್ಟಾಂಗ ಯೋಗ ಮಾರ್ಗದ ಬಗ್ಗೆ ವಿವರವಾಗಿ ತಿಳಿಸಿದರು. ದಿನನಿತ್ಯ ಯೋಗಾಭ್ಯಾಸದಿಂದ ಮನಸ್ಸು ಅರಳಿ ಆತ್ಮಶಕ್ತಿಯ ಜಾಗೃತಿ ಆಗುವುದು ಹಾಗೂ ದೈಹಿಕವಾಗಿ ಸಮರ್ಥರಾಗಿ ಜೀವನ ನಡೆಸಲು ಅನುಕೂಲಕರವಾಗುವುದೆಂದು ತಿಳಿಸಿದರು. 

300x250 AD

ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಯೋಗಪಟು ಮಹೇಂದ್ರ ಗಣಪತಿ ಗೌಡ ಮಾತನಾಡಿ, ಬಾಲ್ಯದಲ್ಲಿ ನನಗಿರುವ ಯೋಗದ ಬಗ್ಗೆ ಇರುವ ಆಸಕ್ತಿಯನ್ನು ಗುರುತಿಸಿದ ಗುರುಗಳು ನನಗೆ ಯೋಗ ತರಬೇತಿಯನ್ನು ನೀಡಿ ಈಗ ನಾನು ರಾಷ್ಟ್ರಮಟ್ಟದಲ್ಲಿ ವಿಜೇತನಾಗಿ, ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆ ಆಗಿದ್ದೇನೆ, ನೀವು ಯೋಗ ಅಭ್ಯಾಸ ಮಾಡಿ, ಅಲ್ಲದೆ ನಿಮಗೆ ಕಲಿಸಿದ ಗುರುಗಳನ್ನು ಯಾವತ್ತೂ ಮರೆಯಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಬಿಜಿಎಸ್‌ ಸೆಂಟ್ರಲ್‌ ಸ್ಕೂಲಿನ ಪ್ರಾಂಶುಪಾಲೆ ಶ್ರೀಮತಿ ಅರ್ಚನಾ ಭಟ್‌  ಪ್ರಸ್ತುತ ದಿನಗಳಲ್ಲಿ ಯೋಗದ ಮಹತ್ವದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ವರನ್ನೂ ಸ್ವಾಗತಿಸಿದರು. ಕನ್ನಡ ಉಪನ್ಯಾಸಕರಾದ ಶ್ರೀಧರ ಹೆಚ್‌. ಆರ್.‌ ಮಾತನಾಡಿ ದಿನನಿತ್ಯ  ಯೋಗಾಸನ ಮಾಡುವುದರಿಂದ ನಮ್ಮ ದೈಹಿಕ ಮತ್ತು ಬೌದ್ಧಿಕ ಸಾಮರ್ಥ ಹೆಚ್ಚುವುದಲ್ಲದೆ ಸದಾ ಆರೋಗ್ಯದಿಂದ ಲವಲವಿಕೆಯಿಂದ ಇರಲು ಸಾಧ್ಯ ಎಂದರು. ದೈಹಿಕ ಶಿಕ್ಷಣ ಶಿಕ್ಷಕರಾದ ಬಾಲಕೃಷ್ಣ ನಾಯಕ ಮತ್ತು ನಾಗರತ್ನ ನಾಯ್ಕ  ಸೂರ್ಯ ನಮಸ್ಕಾರ,  ಪ್ರಾಣಾಯಾಮ ಅಲ್ಲದೇ ಕುಳಿತು, ನಿಂತು ಮತ್ತು ಮಲಗಿ ಮಾಡಬಹುದಾದ ಯೋಗಾಸನದ ವಿವಿಧ ಆಸನಗಳನ್ನು  ಪ್ರಾತ್ಯಕ್ಷಿಕೆ ಮೂಲಕ ಮಾಡಿ ತೋರಿಸಿದರು.
ಹಿರಿಯ ಶಿಕ್ಷಕರಾದ ಎಂ. ಜಿ. ಹಿರೇಕುಡಿ, ಶ್ರೀಮತಿ ಲೀನಾ ಎಂ. ಗೊನೇಹಳ್ಳಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಯೋಗಾಸನ ಮಾಡಿ 10ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಹೆಚ್ಚಿನ ಮೆರುಗು ನೀಡಿದರು. ಕುಮಾರ ನಿಹಾನ್‌  ಮತ್ತು ಸಂಗಡಿಗರು ಪ್ರಾರ್ಥಿಸಿದರು. ಕುಮಾರ ನಿನಾದ ಮತ್ತು ಸಂಗಡಿಗರು ವೇದಘೋಷ ಮೊಳಗಿಸಿದರು. ಶಿಕ್ಷಕಿ ಅಫ್ರೋಝ್‌  ನಿರೂಪಿಸಿದರು.  ಆದಿಚುಂಚನಗಿರಿ ಇಂಡಿಪೆಂಡೆಂಟ್‌ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ರೇಷ್ಮಾ ಬಾಡ್ಕರ್‌ ವಂದಿಸಿದರು

Share This
300x250 AD
300x250 AD
300x250 AD
Back to top