• Slide
    Slide
    Slide
    previous arrow
    next arrow
  • ಸಾರ್ಥಕ ಸಾಧಕ-2023 ಪ್ರಶಸ್ತಿಗೆ ಭಾಗವತ ಪರಮೇಶ್ವರ ಹೆಗಡೆ ಐನಬೈಲ್ ಆಯ್ಕೆ

    300x250 AD

    ಸಿದ್ದಾಪುರ: ಬೆಂಗಳೂರಿನ‌ ಯಕ್ಷಸಿಂಚನ ಟ್ರಸ್ಟ್ ನೀಡುವ ಸಾರ್ಥಕ ಸಾಧಕ-2023 ಪ್ರಶಸ್ತಿಯನ್ನು ಪ್ರಸಿದ್ಧ ಭಾಗವತ ಪರಮೇಶ್ವರ ಹೆಗಡೆ ಐನಬೈಲು ಅವರಿಗೆ ಪ್ರಕಟಿಸಲಾಗಿದೆ.

    ಬೆಂಗಳೂರಿನ ಉದಯಭಾನು‌ ಕಲಾ‌ ಸಂಘದಲ್ಲಿ ಆ.6, ಭಾನುವಾರ ಮಧ್ಯಾಹ್ನ 3 ರಿಂದ ನಡೆಯುವ ಬಡಗುತಿಟ್ಟು ಪೌರಾಣಿಕ ಯಕ್ಷೋತ್ಸವದಲ್ಲಿ‌ ಪ್ರಶಸ್ತಿ ಪ್ರದಾನ‌ ನಡೆಯಲಿದೆ.
    ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪ್ರಸಂಗಕರ್ತ ಶ್ರೀಧರ್ ಡಿ.ಎಸ್, ಸಾಹಿತಿ ಜಗದೀಶ್ ಶರ್ಮ ಸಂಪಾ, ಕಿರಣ್ ಉಪಾಧ್ಯಾಯ ಬಹ್ರೇನ್ ಪಾಲ್ಗೊಳ್ಳಲಿದ್ದಾರೆ.

    ಯಕ್ಷಗಾನ ಗುರು ಪರಂಪರೆಯಲ್ಲಿ ಪ್ರತ್ಯೇಕ ಸ್ಥಾನ‌ ಹೊಂದಿದ ಪರಮೇಶ್ವರ ಹೆಗಡೆ ಮೂಲತಃ ಸಿದ್ದಾಪುರ ತಾಲೂಕಿನ ಐನಬೈಲ್ ಗ್ರಾಮದವರು. ಯಕ್ಷಗಾನಕ್ಕೆ ತಮ್ಮ ಹದಿಮೂರನೇ ವಯಸ್ಸಿಗೆ ಪಾದಾರ್ಪಣೆಯನ್ನು ಮಾಡಿದ ಅವರಿಗೆ ಮನೆಯೇ ಮೊದಲ ಪಾಠಶಾಲೆ ಎಂಬಂತೆ ಯಕ್ಷಗಾನ ಕಲಿಕೆಯೂ ಕೂಡ ಸ್ವತಃ ತಂದೆಯಿಂದಲೇ ಆರಂಭವಾಯಿತು. ಆಟವಾಡುವ ವಯಸ್ಸಿನಲ್ಲಿ ಕಲೆಯತ್ತ ಆಕರ್ಷಿತರಾದ ಐನ್ಬೈಲ್ ಅವರು, ಆ ಕಾಲದ ಗುರುಗಳಾಗಿದ್ದ ಬಾಳೆಹದ್ದ ಕೃಷ್ಣ ಭಾಗವತರಲ್ಲಿ ಯಕ್ಷಗಾನವನ್ನು ಅಭ್ಯಾಸವನ್ನು ಮಾಡಿದರು. ಮುಂದೆ ಅವರು ಜೊತೆಗೆ ಶಿರಳಗಿ ಮಂಜುನಾಥ ಭಟ್ಟರಲ್ಲಿ ನಾಟ್ಯವನ್ನು ಅಭ್ಯಸಿಸಿದರು. ನಿರಂತರವಾದ ಅಭ್ಯಾಸವನ್ನು ಮಾಡಿದ ಐನಬೈಲ್ ಅವರು ತಮ್ಮ ಹದಿನೆಂಟನೇ ವಯಸ್ಸಿನಲ್ಲಿ ಯಕ್ಷಗಾನ ವೃತ್ತಿ ತಿರುಗಾಟವನ್ನು ಆರಂಭಿಸಿದವರು. ಸೋಂದಾ ಮೇಳದಲ್ಲಿ ವೇಷಧಾರಿಗಳಾಗಿ ಕಾಣಿಸಿಕೊಂಡ ಅವರು, ಪುಂಡುವೇಶದ ಸಾಲಿನ ಅನೇಕ ವೇಷಗಳನ್ನು ಮಾಡಿ ಜನರಿಂದ ಮೆಚ್ಚುಗೆಯನ್ನು ಗಳಿಸಿಕೊಂಡರು. ವ್ಯವಸಾಯೀ ಮೇಳದಲ್ಲಿ ಹೆಚ್ಚು ಕಾಲ ವೃತ್ತಿಯನ್ನು ಮಾಡದೆ ಹವ್ಯಾಸಿಯಾಗಿ ಮುಂದೆವರೆದರು. ವೇಷಧಾರಿಗಳಾಗಿದ್ದ ಐನ್ಬೈಲ್ ಅವರು ಭಾಗವತರಾಗಿ ಹಾಗೂ ಯಕ್ಷಗುರುಗಳಾಗಿ ಬೆಳೆಯುವುದಕ್ಕೆ ಯಕ್ಷಋಷಿ ಎನಿಸಿಕೊಂಡ ಹೊಸ್ತೋಟ ಮಂಜುನಾಥ ಭಾಗವತರ ಪ್ರೇರಣೆ, ಮಾರ್ಗದರ್ಶನ ಸಿಕ್ಕಿತು.ಅವರ ಗರಡಿಯಲ್ಲಿ ಯಕ್ಷಗಾನದ ಅನೇಕ ಸೂತ್ರಗಳನ್ನು ರಂಗತಂತ್ರಗಳನ್ನು, ಪ್ರಸಂಗವನ್ನು ನಿರ್ದೇಶನವನ್ನು ಕಲಿತರು. ಮುಂದೆ ಅವರು ಯಕ್ಷಗಾನದ ಶಿಕ್ಷಕರಾಗಿ ತಮ್ಮ ಗುರುವಿನಂತೆ ಸಾಧನೆಯನ್ನು ಮಾಡಿದರು. ಕೇವಲ ರಂಗದ ಬಗ್ಗೆ ಮಾತ್ರ ಆಸಕ್ತಿಯನ್ನು ವಹಿಸಿದೆ ಯಕ್ಷ ಕವಿಗಳಾಗಿ ಹದಿನಾರಕ್ಕೂ ಹೆಚ್ಚು ಪ್ರಸಂಗಳನ್ನು ರಚಿಸಿರುವುದು ವಿಶೇಷವಾಗಿದೆ.

    300x250 AD

    ಯಕ್ಷಗಾನ ವಿಸ್ತಾರಗೊಳ್ಳುವುದಕ್ಕೆ ಮಕ್ಕಳು, ಹವ್ಯಾಸಿಗಳು ಯಕ್ಷಗಾನಕ್ಕೆ ಬರುವುದು ತೀರಾ ಅಗತ್ಯವೆಂದು ನಂಬಿರುವ ಐನಬೈಲ್, ಆಸಕ್ತರಿಗೆ ತರಬೇತಿಯನ್ನು ನೀಡುತ್ತ ಬಂದಿದ್ದಾರೆ. ಶಾರದ ದೇವಿ ಅಂಧ ವಿಕಾಸ ಕೇಂದ್ರದ ಅಂಧ ಮಕ್ಕಳಿಗೆ ಯಕ್ಷಗಾನವನ್ನು ಕಲಿಸಿ ಅವರಿಂದ ಪ್ರದರ್ಶವನ್ನು ಮಾಡಿಸಿದ್ದು ಮಹತ್ತರ ಸಾಧನೆಯಾಗಿದೆ. ಶಿವಮೊಗ್ಗದ ತರಂಗ ಶಾಲೆಯ ಕಿವುಡ ಮೂಕ ಮಕ್ಕಳಿಗೂ ಕೂಡ ಯಕ್ಷಗಾನದ ತರಬೇತಿಯನ್ನು ನೀಡಿದ್ದಾರೆ. ಕೊಂಕಣಿ, ಸಂಸ್ಕೃತ ಭಾಷೆಗಳಲ್ಲೂ ಯಕ್ಷಗಾನವನ್ನು ಮಾಡಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ರವಿ‌‌ ಮಡೋಡಿ ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top