• Slide
    Slide
    Slide
    previous arrow
    next arrow
  • ‘ಕಾಫಿ’ ಹೆಚ್ಚಿನ ಶ್ರಮ, ತಾಂತ್ರಿಕ ಜ್ಞಾನ ಬೇಡದ ಲಾಭದಾಯಕ ಬೆಳೆ: ಸೀತಾರಾಮ ಹೆಗಡೆ

    300x250 AD

    ಶಿರಸಿ: ಇಲ್ಲಿನ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ನಿ., ಕಾಫಿ ಅಭಿವೃದ್ಧಿ ಮಂಡಳಿ-ಚಿಕ್ಕಮಗಳೂರು ಹಾಗೂ ಸಹ್ಯಾದ್ರಿ ಕಾಫಿ ಸೊಸೈಟಿ ಸಾಗರ ಇವರ ಸಂಯುಕ್ತ ಆಶ್ರಯದಲ್ಲಿ “ಅಡಿಕೆ ತೋಟದಲ್ಲಿ ಉಪಬೆಳೆಯಾಗಿ ಕಾಫಿ” ಕುರಿತ ಮಾಹಿತಿ ಕಾರ್ಯಾಗಾರ ನಡೆಯಿತು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕದಂಬ ಮಾರ್ಕೆಟಿಂಗ್ ಅಧ್ಯಕ್ಷ ಶಂಭುಲಿಂಗ ಗಣಪತಿ ಹೆಗಡೆ, ನಡಗೋಡ ವಹಿಸಿ ಮಾತನಾಡಿ, ಭವಿಷ್ಯದ ಒಳಿತಿಗಾಗಿ ಕಾಫಿ ಪೂರಕ ಬೆಳೆ. ಯುವ ರೈತರ ಆಸಕ್ತಿ ಕಾಫಿ ಬೆಳೆಯ ಕಡೆ ಬರಬೇಕೆಂದು ಆಶಯ ಪಟ್ಟರು. ಹಿಂದಿನ ವರ್ಷ ಕದಂಬ ಮಾರ್ಕೆಟಿಂಗ್ ಸ್ಥಳೀಯ 192 ರೈತರಿಂದ 600 ಕ್ವಿಂಟಲ್ ಗೂ ಅಧಿಕ ಪ್ರಮಾಣದಲ್ಲಿ ಕಾಫಿ ಖರೀದಿ ಮಾಡಿದೆ ಹಾಗೂ ಮುಂದಿನ ದಿನದಲ್ಲಿ ಇನ್ನಷ್ಟು ಪ್ರಮಾಣ ದ ಕಾಫಿ ನಿರೀಕ್ಷಿಸುತ್ತಿದ್ದೇವೆ ಎಂದರು.

    ಕಾರ್ಯಕ್ರಮದ ಉದ್ಘಾಟನೆೆಯನ್ನು ನೆರವೇರಿಸಿ ಮಾತನಾಡಿದ, ಪ್ರಗತಿಪರ ರೈತ ಸೀತಾರಾಮ ಮಂಜುನಾಥ ಹೆಗಡೆ, ನೀರ್ನಳ್ಳಿ, ಅಡಿಕೆಯೊಂದಿಗೆ ಉಪಬೆಳೆಯಾಗಿ ಕಾಫಿ ಬೆಳೆದರೆ ಅಡಿಕೆಯ ಇಳುವರಿಯಲ್ಲಿ ಯಾವುದೇ ವ್ಯತ್ಯಾಸವಾಗದು. ಕಾಫಿ ಬೆಳೆಯಲು ಹೆಚ್ಚಿನ ಶ್ರಮ, ತಾಂತ್ರಿಕ ಜ್ಞಾನದ ಅವಶ್ಯಕತೆ ಇಲ್ಲದೆ ಬೆಳೆಯುವ ಲಾಭದಾಯಕ ಬೆಳೆಯಾಗಿದೆ ಎಂದರು.

    ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಹ್ಯಾದ್ರಿ ಕಾಫಿ ಸೊಸೈಟಿ, ಸಾಗರದ ಅಧ್ಯಕ್ಷ ಪಿ. ಎನ್. ಶಶಿಧರ ಹರ್ತಾಳು, ಶಿರಸಿ ಸಾಗರ ಭಾಗದ ಕಾಫಿ ಬೆಳೆಗಾರರು ಸರಕಾರದ ಸಹಾಯಧನದಿಂದ ವಂಚಿತರಾಗುತ್ತಿದ್ದು ರೈತರು ಈ ಕುರಿತು ಧ್ವನಿ ಎತ್ತಬೇಕಿದೆ. ಕಾಫಿ ಮಂಡಳಿಯವರೂ ಈ ಭಾಗದಲ್ಲಿ ಸೂಕ್ತ ಸಮೀಕ್ಷೆ ಮಾಡಿ ಕಾಫಿಯನ್ನು ಪ್ರಧಾನ ಉಪಬೆಳೆಯೆಂದು ಪರಿಗಣಿಸಬೇಕಿದೆ ಎಂದರು. ಕಾಫಿ ಬೋರ್ಡ್ ಸಂಶೋಧನಾ ವಿಭಾಗದ ಜಂಟಿ ನಿರ್ದೇಶಕ ನಾಗರಾಜರವರು ಕಾಫಿ ಬೆಳೆಯುವ ವಿಧಾನ, ಸಂಸ್ಕರಣೆ, ಮಾರುಕಟ್ಟೆ ಇತ್ಯಾದಿ ವಿಷಯಗಳ ಕುರಿತು ತಾಂತ್ರಿಕ ಮಾಹಿತಿ ನೀಡಿದರು. ಕಾಫಿ ಬೋರ್ಡ್ ಹಿರಿಯ ಸಂಯೋಜನಾಧಿಕಾರಿ ಪ್ರಭುಗೌಡ ಕೆ., ಕೃಷಿ ತಜ್ಞ ವಿಜಯೇಂದ್ರ ಎಮ್ ಹೆಗಡೆ ಉಪಸ್ಥಿತರಿದ್ದರು.

    300x250 AD

    ವಿಶ್ವೇಶ್ವರ ಭಟ್ಟ ಕೋಟೇಮನೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ಸಾವಯವ ದೃಢೀಕರಣ ಹೊಂದಿರುವ ರೈತರಿಗೆ ಕದಂಬ ಮಾರ್ಕೆಟಿಂಗ್‌ ಮೂಲಕ ಈಗಾಗಲೆ ಕಾಫಿ ಬೆಳೆಗೆ ಹೆಚ್ಚಿನ ಬೆಲೆ ನೀಡುತ್ತಿದ್ದು ಆಸಕ್ತ ರೈತರು ಉಚಿತವಾಗಿ ದೃಢೀಕರಣ ಪ್ರಕ್ರಿಯೆಗೆ ಒಳಪಡಲು ಶೀಘ್ರದಲ್ಲಿ ಕದಂಬ ಮಾರ್ಕೆಟಿಂಗ್‌ ಸಂಪರ್ಕಿಸಬಹುದಾಗಿದ್ದು ಮುಂದಿನ ದಿನಗಳಲ್ಲಿ ಸಣ್ಣ ಬೆಳೆಗಾರರಿಗೆಂದೇ ಇರುವ ಅಂತರಾಷ್ಟ್ರೀಯ ಮನ್ನಣೆಯ ಕೆಫೆ ಪ್ರ್ಯಾಕ್ಟೀಸ್‌ ಅಥವಾ ಫೇರ್‌ ಟ್ರೇಡ್‌ ದೃಢೀಕರಣಕ್ಕೆ ಇದು ಅವಶ್ಯವಿದೆ ಎಂದರು.

    ಸಹಕಾರಿಯ ವ್ಯವಸ್ಥಾಪಕ ರಾಜೇಂದ್ರ ಜೋಶಿ ವಂದಿಸಿದರು. ಕಾರ್ಯಾಗಾರದ ನಂತರ ಅಡಿಕೆ ತೋಟದಲ್ಲಿ ಯಶಸ್ವಿಯಾಗಿ ಕಾಫಿ ಕೃಷಿ ಮಾಡುತ್ತಿರುವ ಸೀತಾರಾಮ ಮಂಜುನಾಥ ಹೆಗಡೆ, ನೀರ್ನಳ್ಳಿ ಅವರ ತೋಟಕ್ಕೆ ಭೇಟಿ ನೀಡಿ ರೈತರು ಮಾಹಿತಿ ಪಡೆದರು

    Share This
    300x250 AD
    300x250 AD
    300x250 AD
    Leaderboard Ad
    Back to top