Slide
Slide
Slide
previous arrow
next arrow

ಮೆಮು ಸಂಚಾರದಲ್ಲಿ ಬದಲಾವಣೆ; ಹಾರವಾಡದಲ್ಲಿ ರೈಲು ತಡೆದು ಪ್ರತಿಭಟನೆ

300x250 AD

ಅಂಕೋಲಾ: ಮಂಗಳೂರು- ಮಡಗಾಂವ್ ನಡುವೆ ಸಂಚರಿಸುತ್ತಿದ್ದ ಡೆಮು ರೈಲನ್ನು ಮೆಮು ಎಕ್ಸ್ಪ್ರೆಸ್ಸಾಗಿ ಮೇಲ್ದರ್ಜೆಗೇರಿಸಿದ ಬಳಿಕ ಉಂಟಾಗುತ್ತಿರುವ ಸಮಸ್ಯೆಗಳನ್ನು ಸರಿಪಡಿಸಲು ಒತ್ತಾಯಿಸಿ ಉತ್ತರ ಕನ್ನಡ ಜಿಲ್ಲೆಯ ತಾಲೂಕಿನ ಹಾರವಾಡದಲ್ಲಿ ರೈಲು ತಡೆದು ಪ್ರತಿಭಟಿಸಲಾಯಿತು.
ಜನಶಕ್ತಿ ವೇದಿಕೆ ಹಾಗೂ ಸಮಾನ ಮನಸ್ಕ ಸಂಘಟನೆಗಳು ಹಮ್ಮಿಕೊಂಡಿದ್ದ ರೈಲ್ ರೋಖೋ ಪ್ರತಿಭಟನೆಗೆ ಪದ್ಮಶ್ರೀ ಪುರಸ್ಕೃತರಾದ ಜಾನಪದ ಕಲಾವಿದೆ ಸುಕ್ರಿ ಗೌಡ, ವೃಕ್ಷಮಾತೆ ತುಳಸಿ ಗೌಡ ಹಾಗೂ ಮಾಜಿ ಶಾಸಕ ಸತೀಶ್ ಸೈಲ್ ಸಾಥ್ ನೀಡಿದರು. ಕಳೆದ ಎರಡು ವರ್ಷಗಳ ಹಿಂದಿನವರೆಗೆ ಸಂಚರಿಸುತ್ತಿದ್ದ ಡೆಮೊ ರೈಲು ದಕ್ಷಿಣ ಕನ್ನಡದಿಂದ ಗೋವಾದವರೆಗಿನ ಜನರು ಮತ್ತು ಪ್ರವಾಸಿಗರನ್ನ ಸಂಪರ್ಕಿಸುತ್ತಿತ್ತು. ಪ್ರಮುಖವಾಗಿ ಉತ್ತರಕನ್ನಡದಿಂದ ಉಡುಪಿ, ದಕ್ಷಿಣ ಕನ್ನಡದ ಆಸ್ಪತ್ರೆಗಳಿಗೆ ತೆರಳುವವರಿಗೆ, ಉದ್ಯೋಗಿಗಳಿಗೆ ಅನುಕೂಲಕರವಾಗಿತ್ತು. ಆದರೆ ಎರಡು ವರ್ಷಗಳ ಹಿಂದೆ ಕೋವಿಡ್ ನೆಪದಲ್ಲಿ ಪ್ರಯಾಣಿಕರಿಲ್ಲವೆಂದು ಡೆಮು ಸಂಚಾರ ಸ್ಥಗಿತಗೊಳಿಸಲಾಗಿತ್ತು.
ಸದ್ಯ ಸಾರ್ವಜನಿಕರ ಒತ್ತಾಯದ ಮೇರೆಗೆ ಎರಡು ವರ್ಷಗಳ ಬಳಿಕ ಡೆಮು ಬದಲು ಇಲೆಕ್ಟ್ರಿಕ್ ಎಂಜಿನ್ ನ ಮೆಮು ರೈಲಿನ ಸಂಚಾರವನ್ನ ಜ.5ರಿಂದ ಸಂಚಾರ ಆರಂಭಿಸಿದೆ. ಆದರೆ ಈ ಮೆಮು ರೈಲನ್ನ ಎಕ್ಸ್ಪ್ರೆಸ್ ರೈಲಾಗಿ ಪರಿವರ್ತಿಸಿದ್ದು, ಟಿಕೆಟ್ ದುಬಾರಿಯಾಗಿದೆ. ಜೊತೆಗೆ ಈ ಮೊದಲು ಡೆಮು ರೈಲು ನಿಲುಗಡೆಯಾಗುತ್ತಿದ್ದ ಹಾರವಾಡ, ಮಿರ್ಜಾನ್, ಚಿತ್ರಾಪುರ ನಿಲ್ದಾಣಗಳಲ್ಲಿ ಮೆಮುಗೆ ನಿಲುಗಡೆ ರದ್ದುಪಡಿಸಲಾಗಿದೆ. ಇದರಿಂದಾಗಿ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಿದ್ದು, ಸಮಸ್ಯೆ ಪರಿಹರಿಸುವಂತೆ ಕೊಂಕಣ ರೈಲ್ವೆಗೆ ಎಷ್ಟೇ ಮನವಿ ಮಾಡಿಕೊಂಡರೂ ಸ್ಪಂದನೆ ಸಿಕ್ಕಿರಲಿಲ್ಲ. ಇದರಿಂದಾಗಿ ಅಸಮಾಧಾನಗೊಂಡಿದ್ದ ಜನತೆ, ಇಂದು ಹಾರವಾಡದಲ್ಲಿ ಮಂಗಳೂರು- ಮಡಗಾಂವ್ ಪ್ಯಾಸೆಂಜರ್ ರೈಲನ್ನ ತಡೆದು ಪ್ರತಿಭಟನೆ ನಡೆಸಿದರು. ಬೇಡಿಕೆ ಈಡೇರಿಸಲು ಒತ್ತಾಯಿಸಿದರು.
ಇನ್ನು ಇದೇ ವೇಳೆ ಸ್ಥಳಕ್ಕಾಗಮಿಸಿದ ಕೊಂಕಣ ರೈಲ್ವೆ ಪ್ರಾದೇಶಿಕ ವ್ಯವಸ್ಥಾಪಕ ಬಿ.ಬಿ.ನಿಕ್ಕಂ, ಪ್ರತಿಭಟನಾಕಾರರ ಬೇಡಿಕೆಗಳನ್ನ ಆಲಿಸಿದರು. ಈ ಬಗ್ಗೆ ಮನವಿ ಸ್ವೀಕರಿಸಿ, 10 ದಿನಗಳಲ್ಲಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದು ರೈಲು ಸಾಗಲು ಪ್ರತಿಭಟನಾಕಾರರು ಅವಕಾಶ ಮಾಡಿಕೊಟ್ಟರು. ಇದೇ ವೇಳೆ ಹಾರವಾಡ ರೈಲ್ವೆ ನಿಲ್ದಾಣದ ಫ್ಲಾಟ್ ಫಾರ್ಮ್ ಮೇಲ್ದರ್ಜೆಗೇರಿಸಲು ಕೂಡ ಒತ್ತಾಯಿಸಲಾಗಿದ್ದು, ಈ ಬಗ್ಗೆ ಕೂಡ ಆರ್‌ಆರ್‌ಎಂ ಕ್ರಮದ ಭರವಸೆ ನೀಡಿದ್ದಾರೆ.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಶಸ್ತ್ರ ಸಜ್ಜಿತ ರೈಲ್ವೆ ರಕ್ಷಣಾ ದಳದ ಸಿಬ್ಬಂದಿಯನ್ನು ಹಾಗೂ ಅಂಕೋಲಾ ಠಾಣೆಯ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಸದ್ಯ ಪ್ರತಿಭಟನೆ ಹಿಂಪಡೆದಿರುವ ಪ್ರತಿಭಟನಾಕಾರರು, ಒಂದುವೇಳೆ ಬೇಡಿಕೆ ಈಡೇರಿಸದಿದ್ದರೆ ಮತ್ತೆ ರೈಲು ತಡೆಯುವ ಎಚ್ಚರಿಕೆ ನೀಡಿದ್ದು, 10 ದಿನಗಳೊಳಗೆ ರೈಲ್ವೆ ಇಲಾಖೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನ ಕಾದುನೋಡಬೇಕಿದೆ.

300x250 AD
Share This
300x250 AD
300x250 AD
300x250 AD
Back to top