Slide
Slide
Slide
previous arrow
next arrow

ಹಿರಿಯ ನಾಗರಿಕರಿಗೆ ರೈಲ್ವೇ ದರ ರಿಯಾಯತಿಗೆ ಕೇಂದ್ರ ಸರ್ಕಾರ ನಕಾರ: ಶಂಭು ಶೆಟ್ಟಿ ಟೀಕೆ

300x250 AD

ಕಾರವಾರ: ದೇಶದ ಹಿರಿಯ ನಾಗರಿಕರಿಗೆ ಭಾರತೀಯ ರೈಲ್ವೇ ಪ್ರಯಾಣ ದರದಲ್ಲಿ ಇದ್ದ ರಿಯಾಯತಿಯನ್ನು ಪುನಃ ಸ್ಥಾಪಿಸುವ ಇಚ್ಚೆ ಸರಕಾರಕ್ಕಿಲ್ಲ ಎಂದು ಕೇಂದ್ರ ರೈಲ್ವೇ ಮಂತ್ರಿ ಲೋಕಸಭೆಯಲ್ಲಿ ತಿಳಿಸುವ ಮೂಲಕ ಬಿಜೆಪಿ ಸರಕಾರ ತಾನು ಜನವಿರೋಧಿ ಎಂಬ ನೀತಿಯನ್ನು ಪುನರುಚ್ಚರಿಸಿದೆ ಎಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ಸ್ ವಕ್ತಾರ ಕೆ ಶಂಭು ಶೆಟ್ಟಿ ಕೇಂದ್ರ ಸರಕಾರವನ್ನು ಟೀಕಿಸಿದ್ದಾರೆ.
ಬಹಳ ಹಿಂದಿನಿoದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ದೇಶದ ಹಿರಿಯ ನಾಗರಿಕರಿಗೆ ಭಾರತೀಯ ರೈಲ್ವೆ ಪ್ರಯಾಣ ದರದಲ್ಲಿ ರಿಯಾಯತಿಯ ವಿಶೇಷ ಸೌಲಭ್ಯವನ್ನು ಒದಗಿಸಲಾಗಿತ್ತು. ಈ ವಿಶೇಷ ರಿಯಾಯಿತಿ ಸೌಲಭ್ಯ ಕೋವಿಡ್ 19 ಪ್ರಾರಂಭವಾಗುವವರೆಗೂ ಚಾಲ್ತಿಯಲ್ಲಿದ್ದು, ಹಿರಿಯ ನಾಗರಿಕರು ಇದರ ಪ್ರಯೋಜನ ಪಡೆಯುತ್ತಿದ್ದರು. ಆದರೆ ಕೋವಿಡ್ 19 ನೆಪದಲ್ಲಿ ಹಿರಿಯ ನಾಗರಿಕರ ಪ್ರಯಾಣ ನಿಷಿದ್ಧ ಎಂದು ಘೋಷಿಸಿದ ಕೇಂದ್ರ ಸರಕಾರ ಅವರಿಗೆ ರೈಲ್ವೇ ದರದಲ್ಲಿದ್ದ ರಿಯಾಯತಿಯನ್ನೂ ವಜಾಗೊಳಿಸಿತ್ತು. ಆದರೆ ಈಗ ಕೋವಿಡ್ 19ಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ನಿರ್ಬಂಧ ನಮ್ಮ ದೇಶದಲ್ಲಿಲ್ಲ. ಹಿರಿಯ ನಾಗರಿಕರೂ ಸೇರಿದಂತೆ ಪ್ರತಿಯೊಬ್ಬರೂ ಮುಕ್ತವಾಗಿ ಸಂಚರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸದರಿ ರಿಯಾಯತಿ ದರವನ್ನು ಪುನಸ್ತಾಪಿಸುವ ಬಗ್ಗೆ ಸಂಸತ್ತಿನಲ್ಲಿ ಲೋಕಸಭಾ ಸದಸ್ಯರೊಬ್ಬರ ಪ್ರಶ್ನೆಗೆ ಕೇಂದ್ರ ರೈಲ್ವೇ ಸಚಿವರು ನಕಾರಾತ್ಮಕವಾಗಿ ಉತ್ತರಿಸಿದರು.
ರೈಲ್ವೇ ಇಲಾಖೆಯ ನೌಕರರ ಸಂಬಳಕ್ಕೆ ಮತ್ತು ನಿವೃತ್ತರ ಪಿಂಚಣಿಗೆ ಅಪಾರ ಹಣ ವ್ಯಯವಾಗುತ್ತಿರುವ ಕಾರಣ ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ ರಿಯಾಯತಿ ನೀಡುವುದು ಅಸಾಧ್ಯ ಎಂದು ಕಡ್ಡಿ ಮುರಿದಂತೆ ರೈಲ್ವೇ ಸಚಿವರಾದ ಅಶ್ವಿನಿ ವೈಷ್ಣವ ಉತ್ತರಿಸಿದ್ದಾರೆ. ಇದು ಅಚ್ಚೆ ದಿನ್ ತರುತ್ತೇವೆ ಎಂದು ಆಡಳಿತಕ್ಕೆ ಬಂದಿರುವ ಬಿಜೆಪಿ ಸರಕಾರ ದೇಶದ ಹಿರಿಯ ನಾಗರಿಕರಿಗೆ ಮಾಡಿದ ದ್ರೋಹ ಎಂದು ಕಾಂಗ್ರೆಸ್ ವಕ್ತಾರ ಕೆ. ಶಂಭು ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top