ಅಂಕೋಲಾ: ನನ್ನ ಕ್ಷೇತ್ರದ ಅಚವೆಯಿಂದ ಶಿರಸಿ ಹಾಗೂ ಪ್ರಸಿದ್ಧ ಪ್ರವಾಸಿ ತಾಣ ಯಾಣಕ್ಕೆ ತೆರಳುವ ಗೋಕರ್ಣ- ವಡ್ಡಿ ರಸ್ತೆಯ ಆಯ್ದ ಭಾಗಗಳಲ್ಲಿ 10.80 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದು ಶಾಸಕಿ ರೂಪಾಲಿ ಎಸ್.ನಾಯ್ಕ ಹೇಳಿದರು.
ತಾಲ್ಲೂಕಿನ ಅಚವೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೋಕರ್ಣ-ವಡ್ಡಿ ರಾಜ್ಯ ಹೆದ್ದಾರಿ 143ರ ಕಿ.ಮೀ 38.00 ರಿಂದ 47.15ರವರೆಗೆ ಆಯ್ದ ಭಾಗಗಳಲ್ಲಿ 1080 ಲಕ್ಷ ರೂ.ಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿ, ಗೋಕರ್ಣ- ವಡ್ಡಿ ರಸ್ತೆ ಅತಿ ಅವಶ್ಯಕವಾದ ರಸ್ತೆ ಮಾರ್ಗವಾಗಿದೆ. ಎರಡೂ ಮೂರು ಬಾರಿ ಪ್ರವಾಹ ಬಂದಾಗ ಜನರ ಓಡಾಟಕ್ಕೆ ತುಂಬಾ ಸಮಸ್ಯೆಯಾಯಿತು. ಅರಬೈಲ್, ಅಣಶಿಯಲ್ಲಿ ಗುಡ್ಡಕುಸಿತದಿಂದ ವಾಹನ ಸಂಚಾರವೂ ನಿಂತು ಹೋಗಿತ್ತು. ಈ ರಸ್ತೆ ನಿರ್ಮಾಣವಾದರೆ ಎಲ್ಲರಿಗೂ ಅನುಕೂಲವಾಗಲಿದೆ. ಗೋಕರ್ಣ-ವಡ್ಡಿ ರಸ್ತೆಗೆ ಅನುದಾನ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಾಗೂ ಲೋಕೋಪಯೋಗಿ ಇಲಾಖೆ ಸಚಿವರಾದ ಸಿ.ಸಿ. ಪಾಟೀಲ್ ಅವರಿಗೆ ಅಭಿನಂದನೆ ಸಲ್ಲಿಸಿದರು.
ಅಚವೆ ಪಂಚಾಯತ್ಗೆ ಸುಮಾರು 20 ಕೋಟಿ ರೂ.ಗೂ ಹೆಚ್ಚಿನ ಅನುದಾನವನ್ನು ಒದಗಿಸಿದ್ದೇನೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅಭಿವೃದ್ಧಿಯಾಗುತ್ತಿದೆ. ಅನುದಾನವನ್ನೂ ನೀಡುತ್ತಿದ್ದಾರೆ. ಅಭಿವೃದ್ಧಿಗಾಗಿ ನಾನು ಕಾರ್ಯ ನಿರ್ವಹಿಸುತ್ತಿದ್ದೇನೆ. ಹೊರತು ಚುನಾವಣೆಗಾಗಿ ಅಲ್ಲ. ನನ್ನ ಕ್ಷೇತ್ರದ ಮೂಲೆ ಮೂಲೆಯಲ್ಲಿರುವ ಜನರು ಯಾವಾಗ ಅಭಿವೃದ್ಧಿಯ ಸುಖ ಅನುಭವಿಸುತ್ತಾರೋ ಆಗ ನಿಜವಾಗಿ ಅಭಿವೃದ್ಧಿಯಾಗುತ್ತದೆ. ಸೇವೆ ಮಾಡುವುದು ನನ್ನ ಜವಾಬ್ದಾರಿ. ನಾವು ಮಾಡುವ ಕೆಲಸದಲ್ಲಿ ತೃಪ್ತಿ ಇದ್ದಾಗ ಮನಸ್ಸಿಗೆ ನೆಮ್ಮದಿ ಇರುತ್ತದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಮುನ್ನಡೆಸುತ್ತ ಜಾಗತಿಕ ಮಟ್ಟದಲ್ಲಿ ದೇಶದ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ. ನಾವೂ ಕೂಡ ಅವರ ಬೆನ್ನಿಗೆ ನಿಂತು ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ಅಂಕೋಲಾ ಬಿಜೆಪಿ ಮಂಡಲದ ಅಧ್ಯಕ್ಷರು, ಪದಾಧಿಕಾರಿಗಳು, ಗ್ರಾಮ ಪಂಚಾಯತ್ ಜನಪ್ರತಿನಿಧಿಗಳು, ಮುಖಂಡರು, ಸಾರ್ವಜನಿಕರು, ಪಕ್ಷದ ಪ್ರಮುಖರು, ಕಾರ್ಯಕರ್ತರು, ಊರ ನಾಗರಿಕರು ಉಪಸ್ಥಿತರಿದ್ದರು.
ಗೋಕರ್ಣ ವಡ್ಡಿ ರಸ್ತೆ ನಿರ್ಮಾಣಕ್ಕೆ ಶಾಸಕಿ ರೂಪಾಲಿ ಭೂಮಿ ಪೂಜೆ
![](https://euttarakannada.in/wp-content/uploads/2022/11/18kar25-1-730x438.jpg?v=1668839275)