ಕಾರವಾರ: ಮೀನುಗಾರರ ಏಳಿಗೆಗೆ ಸರ್ಕಾರ ಬದ್ಧವಾಗಿದ್ದು, ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಶಾಸಕಿ ರೂಪಾಲಿ ಎಸ್.ನಾಯ್ಕ ಹೇಳಿದರು.
ನಗರದ ಸುಂಕೇರಿಯ ಜಗತ್ತಕಟ್ಟಾದ ಗಾಬಿತವಾಡದಲ್ಲಿ ಶುಕ್ರವಾರ ಮೀನುಗಾರರ ಅಹವಾಲು ಸ್ವೀಕಾರ ಹಾಗೂ ಮೀನುಗಾರಿಕೆ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು.
ಸರ್ಕಾರ ಮೀನುಗಾರ ಸಮುದಾಯಕ್ಕಾಗಿ ಹಲವು ಯೋಜನೆಗಳನ್ನು ಸೌಲಭ್ಯಗಳನ್ನು ನೀಡುತ್ತಿದೆ. ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರು ಮೀನುಗಾರಿಕೆ ಹಾಗೂ ನೀರಿಗಾಗಿ ಪ್ರತ್ಯೇಕ ಸಚಿವಾಲಯವನ್ನು ಪ್ರಾರಂಭಿಸಿದ್ದಾರೆ. ಸರ್ಕಾರ ಮೀನುಗಾರರಿಗೂ ಕಿಸಾನ್ ಕಾರ್ಡನ್ನು ನೀಡುತ್ತಿದೆ. ಅದರ ಸೌಲಭ್ಯವನ್ನು ಪಡೆದುಕೊಳ್ಳಬೇಕು. ಸರ್ಕಾರ ಮೀನುಗಾರರ ಹಿತಕ್ಕೆ ಬದ್ದವಾಗಿದೆ. ಸಬ್ಸಿಡಿಯಲ್ಲಿ ಸಾಲ ಸೌಲಭ್ಯಗಳನ್ನು ನೀಡುತ್ತಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬಹುದು. ಮೀನುಗಾರರಿಗೆ ಅನುಕೂಲಕ್ಕೆ ಬೃಹತ್ ಬಂದರು ನಿರ್ಮಾಣವಾಗಲಿದೆ. ಎಲ್ಲ ರೀತಿಯ ಅನುಕೂಲಗಳು ಸಿಗಲಿದೆ ಎಂದರು. ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಆರೋಗ್ಯ ಸರಿ ಇಲ್ಲದಿದ್ದರೆ ಆರ್ಥಿಕ ಸಮಸ್ಯೆಯೂ ಕಾಡುತ್ತದೆ. ಮಾನಸಿಕ ನೆಮ್ಮದಿಯೂ ಹಾಳಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ನಗರಮಂಡಲದ ಅಧ್ಯಕ್ಷರಾದ ನಾಗೇಶ್ ಕುರ್ಡೇಕರ, ಮಹಿಳಾ ಮೊರ್ಚಾದ ವೃಂದಾ ದಾಮ್ಸಾಡೇಕರ, ಪದಾಧಿಕಾರಿಗಳು, ಬೂತ್ ಪದಾಧಿಕಾರಿಗಳು, ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.
ಮೀನುಗಾರರ ಏಳಿಗೆಗೆ ಸರ್ಕಾರ ಬದ್ಧ: ಶಾಸಕಿ ರೂಪಾಲಿ
![](https://euttarakannada.in/wp-content/uploads/2022/11/05kar14-730x438.jpg?v=1667815001)