Slide
Slide
Slide
previous arrow
next arrow

ಅರಣ್ಯ ಅಧಿಕಾರಿಗಳಿಂದ ಇಬ್ಬಗೆಯ ನೀತಿ: ಸಿಸಿಎಫ್‌ಗೆ ಪತ್ರ

300x250 AD

ಭಟ್ಕಳ: ಅರಣ್ಯ ಇಲಾಖೆಯ ಅಧಿಕಾರಿಗಳು ಕರ್ತವ್ಯದಲ್ಲಿ ತಾರತಮ್ಯ ನಡೆಸುತ್ತಿದ್ದು, ಇಬ್ಬಗೆಯ ನೀತಿ ಅನುಸರಿಸುತ್ತಿದ್ದಾರೆ ಎಂದು ತಾಲ್ಲೂಕಿನ ಹೇರೂರು ನಿವಾಸಿಯೋರ್ವರು ಇಲ್ಲಿನ ಅರಣ್ಯ ಇಲಾಖೆಯ ಮೂಲಕ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ರವಾನಿಸಿದ್ದಾರೆ.
ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ತಾರತಮ್ಯ ಆರ್ಥಿಕವಾಗಿ ಸಬಲರಾಗಿರುವ ಮತ್ತು ಮೇಲ್ಜಾತಿಯವರ ಹಿತಾಸಕ್ತಿಯನ್ನು ಕಾಯ್ದುಕೊಳ್ಳುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಹಾಗೂ ಹಿಂದುಳಿದ ಜಾತಿಯವರಿಗೆ ತೊಂದರೆ ಕೊಡುತ್ತಿದ್ದಾರೆ. ತಾಲ್ಲೂಕಿನ ಅರಣ್ಯ ಅತಿಕ್ರಮಣದಾರರು ಈಗಾಗಲೇ ಸಾಕಷ್ಟು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದು, ಹೀಗಿರುವಾಗ ಅರಣ್ಯ ಇಲಾಖೆಯ ಅಧಿಕಾರಿಗಳು ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಹೆರೂರು ಗ್ರಾಮದ ಎಳಬಾರಿನಲ್ಲಿ ಮಾಲ್ಕಿ ಜಾಗಕ್ಕೆ ಲಗತ್ತಾಗಿರುವ ಅರಣ್ಯ ಸರ್ವೇ ನಂಬರ್ 12ರಲ್ಲಿ ಸಣ್ಣದಾದ ಮನೆಯೊಂದನ್ನು ನಿರ್ಮಿಸುವ ಹಂತದಲ್ಲಿ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಂಪೂರ್ಣ ನೆಲಸಮಗೊಳಿಸಿದ್ದಾರೆ. ಆದರೆ ಹೆರೂರು ಗ್ರಾಮದ ಪಕ್ಕದ ಗ್ರಾಮವಾದ ಹದ್ಲೂರ ಗ್ರಾಮದ ಅರಣ್ಯ ಸರ್ವೇ ನಂಬರ್ 12ರಲ್ಲಿ ಖಾಸಗಿ ವ್ಯಕ್ತಿಯೋರ್ವರು 1500 ಸ್ಕ್ವಾರ್ ಪೀಟ್ ಅಳತೆಯ ಭವ್ಯವಾದ ಆರ್‌ಸಿಸಿ ಮನೆಯನ್ನು ನಿರ್ಮಿಸಿದ್ದಾರೆ. ಈ ಬಗ್ಗೆ ಸಹಾಯಕ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದೆ. ಆದರೆ ಈ ಅಧಿಕಾರಿಗಳು ನಾನು ನೀಡಿರುವ ದೂರಿಗೆ ಯಾವುದೇ ಸ್ಪಂದನೆ ನೀಡುತ್ತಿಲ್ಲ ಎಂದಿದ್ದಾರೆ.
ಆರ್ಥಿಕವಾಗಿ ದುರ್ಬಲನಾಗಿರುವ ಇಲ್ಲಿಯ ನಿವಾಸಿ ಹಿಂದುಳಿದ ವರ್ಗದವನಾಗಿದ್ದಾನೆ. ಅದೇ ಖಾಸಗಿ ವ್ಯಕ್ತಿ ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಸಬಲರಾಗಿದ್ದು, ಮೇಲ್ವರ್ಗದವರಾಗಿದ್ದಾರೆ. ಹೀಗಾಗಿ ಇಲಾಖೆಯವರು ಬಡವನ ಮನೆಯನ್ನು ನೆಲಸಮ ಮಾಡಿದ್ದಾರೆ. ನೆಲಸಮಕ್ಕೆ ಕಾನೂನು ಬಾಹಿರವಾಗಿ ಮನೆ ನಿರ್ಮಾಣ ಮಾಡಿದ್ದೇ ಕಾರಣ ಎನ್ನುವುದಾದರೆ ದೂರು ಅರ್ಜಿ ಸಲ್ಲಿಸಿದರೂ ಕೂಡ ಕಾನೂನು ಬಾಹಿರವಾಗಿ ನಿರ್ಮಾಣ ಮಾಡುತ್ತಿರುವ ಇನ್ನಿತರ ಮನೆಯನ್ನು ಯಾಕೆ ನೆಲಸಮ ಮಾಡಿಲ್ಲ? ಎಂದು ಅವರು ಪ್ರಶ್ನಿಸಿದ್ದಾರೆ.
ಅರಣ್ಯ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಮೇಲ್ವರ್ಗದವರ ಹಿತಾಸಕ್ತಿ ಕಾಯ್ದುಕೊಳ್ಳಲು ಹಾಗೂ ಹಣದ ಆಮಿಷಕ್ಕೆ ಮಾರು ಹೋಗಿರುವುದಲ್ವೀ ಪ್ರಕರಣದಲ್ಲಿ ಸ್ಪಷ್ಟವಾಗುತ್ತದೆ. ಆದ್ದರಿಂದ ಬಡವನ ಮನೆಯನ್ನು ಕೆಡವಿ ಹಾಕಿದವರ ವಿರುದ್ಧ ಕಾನೂನಿನ ಮೂಲಕ ಕ್ರಮ ಕೈಗೊಳ್ಳಬೇಕು ಹಾಗೂ ಕರ್ತವ್ಯಲೋಪ ಎಸಗಿರುವ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಒಂದುವೇಳೆ ತಾವು ಕ್ರಮ ಕೈಗೊಳ್ಳದಿದ್ದರೆ ನಿವಾಸಿಗರು ಅನಿವಾರ್ಯವಾಗಿ ಹೈಕೋರ್ಟ್ ಮೊರೆ ಹೋಗಿ ನ್ಯಾಯವನ್ನು ಪಡೆದುಕೊಳ್ಳಬೇಕಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top