ಕುಮಟಾ: ದಕ್ಷಿಣ ಕಾಶಿಯೆಂದೆ ಪ್ರಸಿದ್ಧವಾದ ಶ್ರೀಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ಸನ್ನಿಧಿಯಲ್ಲಿ ಗಾಣಿಗ ಸಮಾಜದವರಿಂದ ದೀಪಾವಳಿಯ ಬಲಿಪಾಡ್ಯದ ದಿನದಂದು ಕಾರ್ತಿಕ ಮಾಸದ ಪ್ರಥಮ ಪೂಜೆ ಸಂಪನ್ನ ಗೊಂಡಿತು.
ಗಾಣಿಗ ಸಮಾಜದವರು ಪ್ರತಿ ವರ್ಷದಂತೆ ಈ ವರ್ಷವೂ ದೀಪಾವಳಿಯ ಬಲಿಪಾಡ್ಯದ ದಿನದಂದು ಕಾರ್ತಿಕ ಮಾಸದ ಪ್ರಥಮ ಪೂಜೆಯನ್ನು ಗೋಕರ್ಣದ ಶ್ರೀ ಮಹಾಬಲೇಶ್ವರ ದೇವನಿಗೆ ಸಲ್ಲಿಸಿದರು. ಗೋಕರ್ಣದ ಮೇಲಿನಕೇರಿಯ ನಾಗೇಶ್ ನಾರಾಯಣ ಶೆಟ್ಟಿ ಅವರ ಮುಂದಾಳತ್ವದಲ್ಲಿ ಅತ್ಯಂತ ವಿಜೃಂಭಣೆಯಿಂದ ಹಾಗೂ ಶ್ರದ್ದಾ ಭಕ್ತಿಯಿಂದ ಪೂಜೆ ಸಲ್ಲಿಸಿ, ಶ್ರೀ ಮಹಾಬಲೇಶ್ವರನ ಕೃಪೆಗೆ ಪಾತ್ರರಾದರು.
ಈ ದಿವ್ಯ ಕ್ಷಣದಲ್ಲಿ ಗಾಣಿಗ ಸಮಾಜದ ಹೆಮ್ಮೆಯ ಸಂಘಟನೆಯಾದ ಕುಮಟಾ ಗಾಣಿಗ ಯುವ ಬಳಗದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪಾಲ್ಗೊಂಡು ಶ್ರೀ ದೇವರ ದರ್ಶನ ಪಡೆದರು. ಅಲ್ಲದೇ ಜನಪ್ರಿಯ ಶಾಸಕರಾದ ದಿನಕರ ಕೆ ಶೆಟ್ಟಿ, ತಾಪಂ ನಿಕಟಪೂರ್ವ ಸದಸ್ಯ ಮಹೇಶ್ ಶೆಟ್ಟಿ ಗೋಕರ್ಣ ಹಾಗೂ ಗಾಣಿಗ ಸಮಾಜ ಯುವಕ ಮಂಡಳ ಶಿರಸಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಕುಮಟಾ ಹಾಗೂ ಗೋಕರ್ಣ ಭಾಗದ ಸಮಸ್ತ ಗಾಣಿಗ ಸಮಾಜದವರು, ಭಕ್ತರು ಈ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು, ಶ್ರೀ ಮಹಾಬಲೇಶ್ವರನ ದರ್ಶನ ಪಡೆದು ಪುನೀತರಾದರು.
ಕುಮಟಾ ತಾಲೂಕಿನಿಂದ ಈ ಪೂಜಾ ಕಾರ್ಯಕ್ಕೆ ತೆರಳಲು ಗಾಣಿಗ ಯುವ ಬಳಗ ಕುಮಟಾದಿಂದ ವಾಹನದ ವ್ಯವಸ್ಥೆ ಕಲ್ಪಿಸುವ ಮೂಲಕ ಬಳಗವು ಸಮಾಜಬಾಂಧವರ ಮೆಚ್ಚುಗೆಗೆ ಪಾತ್ರವಾಯಿತು.
ಗಾಣಿಗ ಸಮಾಜದಿಂದ ಕಾರ್ತಿಕ ಮಾಸದ ಪ್ರಥಮ ಪೂಜೆ
![](https://euttarakannada.in/wp-content/uploads/2022/10/27kar11-730x438.jpg?v=1666948840)