ಶಿರಸಿ: ಪತ್ರಿಕೋದ್ಯಮಕ್ಕೆ ಉತ್ತರ ಕನ್ನಡ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ಉತ್ತರ ಕನ್ನಡ ಜಿಲ್ಲೆಯಿಂದ ಬರುವಷ್ಟು ಗುಣಮಟ್ಟದ ಪತ್ರಕರ್ತರು ಬೇರೆ ಯಾವ ಜಿಲ್ಲೆಯಲ್ಲೂ ಇಲ್ಲ. ರಾಜ್ಯ ಮಟ್ಟದ ಎಲ್ಲಾ ಪತ್ರಿಕೆಗಳ ಮುಖ್ಯ ಸ್ಥಾನದಲ್ಲಿ ಉತ್ತರ ಕನ್ನಡದವರೇ ಇದ್ದಾರೆ. ಇಲ್ಲಿನ ಜನ,ಜಲ, ಪತ್ರಕರ್ತರನ್ನು ಹುಟ್ಟಿ ಹಾಕುವ ರೀತಿ ವಿಭಿನ್ನವಾಗಿದೆ ಎಂದು ಹಿರಿಯ ಪತ್ರಕರ್ತ ಮಹಾಬಲ ಸೀತಾಳಭಾವಿ ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಶಿರಸಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ದತ್ತಿನಿಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಕರ್ತರಾದ ನಾವು ಬರವಣಿಗೆಯಲ್ಲಿ ತೊಡಗಿಕೊಂಡು ಕೆಲಸ ಮಾಡುತ್ತೇವೆ. ಕಷ್ಟಪಟ್ಟು ಕೆಲಸ ಮಾಡುವ ಬದ್ದತೆ ಜಿಲ್ಲೆಯ ಪತ್ರಕರ್ತರಿಗಿದೆ. ಬೇರೆ ಜಿಲ್ಲೆಯ ಪತ್ರಕರ್ತರಿಗೆ ಈ ಬದ್ಧತೆ ಸ್ವಲ್ಪ ಕಡಿಮೆ ಇರುವಂತೆ ಕಾಣುತ್ತದೆ ಎಂದರು.
ಪತ್ರಕರ್ತರನ್ನು ಪ್ರಾರಂಭದಲ್ಲಿ ಬಿಗಿಯಾಗಿ ಕೂರಿಸಿ ಕೆಲಸ ಕಲಿಸಿದರೆ ಅವರ ಜೀವನ ಉಜ್ವಲವಾಗುತ್ತದೆ. ದಿನ ಪತ್ರಿಕೆಗಳಿಗೆ ಯುವ ಪತ್ರಕರ್ತರು ಬರುವುದು ಬಹಳ ಕಡಿಮೆಯಾಗುತ್ತಿದೆ. ಕೆಲಸ ಕಲಿಯುವ ಗುಣ ಇಂದಿನ ಪತ್ರಕರ್ತರಿಗೆ ಬಹಳ ಕಡಿಮೆ ಇದೆ. ಆದರೆ ಉತ್ತರ ಕನ್ನಡ ಜಿಲ್ಲೆಯಿಂದ ಬರುವ ಪತ್ರಕರ್ತರಿಗೆ ಬದ್ಧತೆ ಇಂದಿಗೂ ಕಾಣಿಸುತ್ತಿದೆ.ಹಾಗಾಗಿ ಉತ್ತರ ಕನ್ನಡ ಜಿಲ್ಲೆಯ ಪತ್ರಕರ್ತರಿಗೆ ರಾಜ್ಯ ಮಟ್ಟದಲ್ಲಿ ಮಾನ್ಯತೆ ಸಿಗುತ್ತಿದೆ ಎಂದರು.
ಭಾಷೆ ನಮ್ಮ ಜಿಲ್ಲೆಯ ಪತ್ರಕರ್ತರಿಗೆ ವರವಾಗಿದೆ. ಇಲ್ಲಿನ ಶಿಕ್ಷಣ ವ್ಯವಸ್ಥೆ ಅಷ್ಟು ಪ್ರಬಲವಾಗಿದೆ. ದೊಡ್ಡ ದೊಡ್ಡ ಪತ್ರಕರ್ತ ರಾಗುವ ಸಾಮರ್ಥ್ಯವಿರುವ ಪತ್ರಕರ್ತರೂ ಇಲ್ಲಿದ್ದಾರೆ ಎಂದರು. ಕನ್ನಡದ ಮೊದಲ ಪತ್ರಿಕೆಯಾದ ಮಂಗಳೂರು ಸಮಾಚಾರ ಪ್ರಾರಂಭವಾದ ದಿನವಿದು.ಆ ದಿನವನ್ನು ನಾವು ಪತ್ರಿಕಾ ದಿನಾಚರಣೆಯನ್ನಾಗಿ ನಾವು ಆಚರಣೆ ಮಾಡುತ್ತಿದ್ದೇವೆ. 1996ರಿಂದ ಪತ್ರಿಕಾ ದಿನಾಚರಣೆಯನ್ನು ನಾವು ಆಚರಿಸುತ್ತಿದ್ದೇವೆ. ಸರ್ಕಾರ ಸಹ ಆಚರಣೆ ಮಾಡುತ್ತಿದೆ ಎಂದರು.
ಪತ್ರಕರ್ತರ ಒಳ್ಳೆಯ ದಿನಗಳು ಮುಗಿದು ಹೋಗಿದೆ. ಕನ್ನಡ ಪತ್ರಿಕೋದ್ಯಮದ ಸುವರ್ಣ ಯುಗ ಸಹ ಮುಗಿದುಹೋಗಿದೆ. ಈಗಿರುವ ಒಳ್ಳೆಯದನ್ನು ಎಷ್ಟು ದಿನ ಉಳಿಸಿಕೊಳ್ಳಬಹುದು ಎಂದು ಯೋಚಿಸುವ ದಿನ ಬಂದಿದೆ. ಮುಂದಿನ 10ರಿಂದ15 ವರ್ಷಗಳವರೆಗೆ ಪತ್ರಿಕೆಗಳು ಇರಬಹುದು. ಪತ್ರಿಕೆಗಳ ಮೊದಲು ಟಿವಿ ಮಾಧ್ಯಮಗಳು ಬಾಗಿಲು ಹಾಕಲಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಚಾನೆಲ್ಗಳೂ ಸಹ ಕೊನೆಯ ಹಂತಕ್ಕೆ ಬಂದು ತಲುಪಿದೆ. ಪತ್ರಿಕೆಗಳು ಚಾನೆಲ್ಗಳು ಮೊಬೈಲ್ ನಲ್ಲಿ ಮಾತ್ರ ಕಾಣುವ ದಿನ ದೂರವಿಲ್ಲ ಎಂದರು.
ಅಮೇರಿಕಾದಲ್ಲಿ ನಡೆದ ಸಮೀಕ್ಷೆಗಳು ಭಾರತದಲ್ಲಿ ನಡೆದರೆ ಬಾಗಿಲು ಹಾಕಿದ ಪತ್ರಿಕೆಗಳ ಸಂಖ್ಯೆ ನಮಗೆ ಗೋಚರಿಸುತ್ತದೆ. ಮೊದಲು ಪತ್ರಿಕೋದ್ಯಮ ಸಮಾಜ ಸೇವೆಯಾಗಿತ್ತು.ಇದೀಗ ಉದ್ಯಮವಾಗಿ ಮಾರ್ಪಾಡುಗೊಂಡಿದೆ. ಜಾಹೀರಾತುಗಳ ಮೂಲಕವೇ ಪತ್ರಿಕೆಯನ್ನು ನಡೆಸಬೇಕಿದೆ. ಮೊದಲಿನಷ್ಟು ಜಾಹೀರಾತುಗಳೂ ಈಗ ಬರುತ್ತಿಲ್ಲ.ಸರ್ಕಾರದ ಜಾಹೀರಾತುಗಳನ್ನೇ ನಂಬಿ ಹಲವು ಪತ್ರಿಕೆಗಳು ಇಂದು ಕಾರ್ಯನಿರ್ವಹಿಸುತ್ತಿದೆ. ಜಾಹೀರಾತುಗಳು ಡಿಜಿಟಲೀಕರಣಗೊಂಡಿದೆ. ಜಾಹೀರಾತಿನಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಿವೆ ಇವೆಲ್ಲಾ ಕಾರಣಗಳಿಂದ ಪತ್ರಿಕೆ ಗಳು ಕೊನೆಯ ದಿನದತ್ತ ಹೆಜ್ಜೆ ಹಾಕುತ್ತಿದೆ.ದಿನ ಪತ್ರಿಕೆಗಳು ವೃದ್ಧಾಪ್ಯಹಂತಕ್ಕೆ ಬಂದು ತಲುಪಿದೆ. ಫೇಕ್ ನ್ಯೂಸ್ಗಳು ನಮ್ಮ ಮುಂದಿರುವ ದೊಡ್ಡ ಸವಾಲಾಗಿದೆ. ಬೆಂಗಳೂರಿನಂತಹ ನಗರಗಳಲ್ಲಿ ಪತ್ರಿಕೆಗಳನ್ನು ಯಾವ ಮಕ್ಕಳೂ ಕಣ್ಣೆತ್ತಿಯೂ ನೋಡುವುದಿಲ್ಲ. ಟಿವಿ ಚಾನೆಲ್ಗಳನ್ನೂ ನೋಡುವುದಿಲ್ಲ. ದಿನದಿಂದ ದಿನಕ್ಕೆ ಪತ್ರಿಕೋದ್ಯಮದಲ್ಲಿ ಬದಲಾವಣೆಯಾಗುತ್ತಿದೆ. ಮೊಬೈಲ್ ನ್ಯೂಸ್ ಡೈನಾಮಿಕ್ಸ್ ಗಳನ್ನು ಅರಗತ ಮಾಡಿಕೊಳ್ಳುವ ಪತ್ರಕರ್ತರು ಬಂದರೆ ಎನಾದರೂ ಬದಲಾವಣೆ ಆದರೆ ಆಗಬಹುದು ಎಂದರು.
ಪತ್ರಿಕೋದ್ಯಮ ಕೋರ್ಸ್ ಗೆ ಬರುವ ವಿದ್ಯಾರ್ಥಿಗಳ ಸಂಖ್ಯೆಯೂ ಬಹಳ ಕಡಿಮೆಯಾಗುತ್ತಿದೆ. ಅನುಭವಿ ಪತ್ರಕರ್ತರು ಪತ್ರಿಕಾ ಕಚೇರಿಯಲ್ಲಿ ಉಳಿಯುತ್ತಿಲ್ಲ. ಹಾಗಾಗಿ ಗುಣಮಟ್ಟ ಕಡಿಮೆಯಾಗುತ್ತಿದೆ. ಉತ್ತರ ಕನ್ನಡ ದ ಪತ್ರಕರ್ತರು ಪತ್ರಿಕೋದ್ಯಮವನ್ನು ನೋಡುವ ದೃಷ್ಟಿಕೋನ ಉತ್ತಮವಾಗಿದೆ. ಸುದ್ದಿಯನ್ನು ಗುರುತಿಸುವುದು , ಸುದ್ದಿಯನ್ನು ಕೊಡುವುದು ಈ ವಿಧಾನ ಬದಲಾಗಬಹುದು. ಬದಲಾದ ಪತ್ರಿಕೋದ್ಯಮವನ್ನು ಗುರುತಿಸಿ ಕೆಲಸ ಮಾಡಿದರೆ ಪತ್ರಿಕೋದ್ಯಮದಲ್ಲಿ ಉಳಿಯಲು ಸಾಧ್ಯ. ಪತ್ರಿಕೋದ್ಯಮವನ್ನು ಬದಲಾದ ಸ್ವರೂಪದಲ್ಲಿ ಉಳಿಸುವ ಜವಾಬ್ದಾರಿ ಯುವ ಪತ್ರಕರ್ತರ ಮೇಲಿದೆ. ಹೊಸ ಹೊಸ ರೀತಿಯಲ್ಲಿ ಪತ್ರಕರ್ತರು ಪತ್ರಿಕೋದ್ಯಮಕ್ಕೆ ಬರಬೇಕು ಎಂದರು.
ಸಂಘದ ನಿಕಟ ಪೂರ್ವ ಅಧ್ಯಕ್ಷ ರಾಧಾಕೃಷ್ಣ ಭಟ್ ಮಾತನಾಡಿ, ಆತ್ಮ ತೃಪ್ತಿಯಿಂದ ನಾನು ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಇಂದಿನ ಡಿಜಿಟಲ್ ಯುಗದಲ್ಲಿ ಪತ್ರಿಕರ್ತರಿಗೆ ಕೆಲಸ ಸ್ವಲ್ಪ ಕಡಿಮೆಯಾಗಿದೆ. ಡಾ.ಯು ಚಿತ್ತರಂಜನ್ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಬೇಕು ಎಂಬ ಹಂಬಲ ನನಗಿತ್ತು. ಸಚಿವ ಮಂಕಾಳು ವೈದ್ಯ ಅವರ ಬಳಿ ಹೇಳಿದಾಗ ಅವರು ಒಪ್ಪಿ ದತ್ತಿನಿಧಿಗೆ ಸಹಕಾರ ನೀಡಿದ್ದಾರೆ. ದತ್ತಿನಿಧಿ ಪ್ರಶಸ್ತಿಗೆ ಗಣೇಶ ಹೆಗಡೆಯವರ ಹೆಸರು ಬಂದಾಗ ಎಲ್ಲರೂ ಸಹಮತದಿಂದ ಒಪ್ಪಿ ಆಯ್ಕೆಮಾಡಲಾಗಿದೆ ಎಂದರು.
ಡಿವೈಎಸ್ಪಿ ಗೀತಾ ಪಾಟೀಲ್ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಪತ್ರಿಕೆಗಳಿವೆ. ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಓದುವ ಹವ್ಯಾಸಗಳಿವೆ. ಸತ್ಯ, ನಿಷ್ಠೆ ಪ್ರಾಮಾಣಿಕತೆಯನ್ನು ಎತ್ತಿ ಹಿಡಿಯುವ ಮೂಲಕ ಪತ್ರಕರ್ತರು ಕೆಲಸ ಮಾಡುತ್ತಿದ್ದಾರೆ. ಕಾರ್ಯಾಂಗ, ಶಾಸಕಾಂಗ,ನ್ಯಾಯಾಂಗದಷ್ಟೇ ಕೆಲಸವನ್ನು ಪತ್ರಿಕಾರಂಗ ಮಾಡುತ್ತಿದೆ ಎಂದರು.
ಹಿರಿಯ ಸಹಕಾರಿ ಸುಭಾಷ್ ಶೆಟ್ಟಿ ಮಾತನಾಡಿ,
ಪತ್ರಿಕೆಗಳನ್ನು ಓದುವವರು ಸಂಖ್ಯೆ ನಮ್ಮ ಜಿಲ್ಲೆಯ ಜನರಿದ್ದಾರೆ. ಡಾ ಚಿತ್ತರಂಜನ್ ಅವರು ಭಟ್ಕಳದಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಇಡೀ ಜಿಲ್ಲೆಯಲ್ಲಿ ಅವರು ಖ್ಯಾತಿ ಪಡೆದಿದ್ದರು. ಡಾ.ಚಿತ್ತರಂಜನ್ ಅವರು ಬಹಳ ಸದೃಢ ವ್ಯಕ್ತಿಯಾಗಿದ್ದರು. ಯಾರೋ ಒಬ್ಬ ದುಷ್ಟ ಅವರನ್ನು ಹತ್ಯೆ ಮಾಡಿದ್ದ. ಆ ಸಮಯದಲ್ಲಿ ಅವರಿಗೆ ಹೆಚ್ಚಿನ ಭದ್ರತೆಯನ್ನು ಪೊಲೀಸ್ ಇಲಾಖೆ ನೀಡಿದ್ದರು ನಮ್ಮ ಚಿತ್ತರಂಜನ್ ಇನ್ನೂ ನಮ್ಮ ಜೊತೆ ಇರುತ್ತಿದ್ದರು. ಅವರ ಹೆಸರಿನಲ್ಲಿ ದತ್ತಿನಿಧಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಸಂಘದ ಜಿಲ್ಲಾ ಉಪಾಧ್ಯಕ್ಷ ವಿಠ್ಠಲದಾಸ ಕಾಮತ್ ಮಾತನಾಡಿ, ಪತ್ರಕರ್ತರ ಆರ್ಥಿಕ ಸ್ಥಿತಿಗತಿಯನ್ನು ನೋಡಿದರೆ ವೈದ್ಯರ ಅನಿವಾರ್ಯತೆ ಸಾಕಷ್ಟಿದೆ. ಸಂಘ ಒಗ್ಗಟ್ಟಾಗಿ ಕೆಲಸ ಮಾಡುತ್ತಿದೆ.ಈಡೀ ರಾಜ್ಯದಲ್ಲಿ ನಮ್ಮ ಸಂಘ ಖ್ಯಾತಿ ಪಡೆಯಲು ಸುಬ್ರಾಯ ಭಟ್ ಬಕ್ಕಳ ಹಾಗೂ ಸದಸ್ಯರ ಶ್ರಮ ಸಾಕಷ್ಟಿದೆ. ಪತ್ರಕರ್ತರು ತುಂಬಾ ಸಂಕಷ್ಟಗಳು ಸವಾಲುಗಳ ಮಧ್ಯೆ ಕೆಲಸ ಮಾಡುತ್ತಿದ್ದೇವೆ. ರಾಜಕಾರಣಿಗಳಿಗಿಂತ ಜನಸಾಮಾನ್ಯರತ್ತ ಪತ್ರಕರ್ತರು ಹೋಗಿ ಕೆಲಸ ಮಾಡುವ ಮನಸ್ಥಿತಿ ಬರಬೇಕಿದೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಜಿ. ಸುಬ್ರಾಯ ಭಟ್ ಬಕ್ಕಳ ಆಶಯನುಡಿಗಳ್ನಾಡಿ
ನಮ್ಮನ್ನೇ ನಾವು ಅಭಿನಂದಿಸಿಕೊಳ್ಳುವ ದಿನವಿದು. ಇವತ್ತಿನ ಮಾಧ್ಯಮದ ಪೈಪೋಟಿ ನಡುವೆ ಪತ್ರಿಕೆಯನ್ನು ನಡೆಸುವುದು ಬಹಳ ಸವಾಲಾಗಿದೆ. ಇಂದಿನ ದಿನಗಳಲ್ಲಿ ನೈಜ ಪತ್ರಿಕೋದ್ಯಮ ಹಿಂದೆ ಸುರಿಸುತ್ತಿದೆ. 50 ವರ್ಷಗಳ ಇತಿಹಾಸವನ್ನು ನಮ್ಮ ಪತ್ರಿಕಾ ಸಂಘ ಹೊಂದಿದೆ. ಇಡೀ ಜಿಲ್ಲೆಯಲ್ಲಿ ನಮ್ಮ ಸಂಘ ಸಧೃಡವಾಗಿದೆ. ಸಂಘ ಈ ಮಟ್ಟದಲ್ಲಿ ಬೆಳೆಯಲು ಈ ಹಿಂದೆ ಕರ್ತವ್ಯ ನಿರ್ವಹಿಸಿದ ಅಧ್ಯಕ್ಷರುಗಳ ಕೊಡುಗೆ ಅಪಾರವಾಗಿದೆ. ಈ ಮೊದಲು ಎರಡು ದತ್ತಿನಿಧಿಗಳನ್ನು ನೀಡಿ ಗೌರವಿಸಲಾಗುತ್ತಿತ್ತು.ಈ ವರ್ಷದಿಂದ ಚಿತ್ತರಂಜನ್ ಹೆಸರಿನಲ್ಲಿ ದತ್ತಿನಿಧಿ ಯನ್ನು ನೀಡಿ ಗೌರವಿಸಲಾಗುತ್ತಿದೆ ಎಂದರು. ಪತ್ರಕರ್ತರ ಪ್ರತಿಭೆಗಳನ್ನು ಗುರುತಿಸಿ ಅವರ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಜೊತೆಗೆ ಎಸ್ಎಸ್ಎಲ್ ಸಿ ಹಾಗೂ ಪಿಯುಸಿಯಲ್ಲಿ ಸಾಧನೆ ಮಾಡಿದ ಪತ್ರಕರ್ತರ ಮಕ್ಕಳನ್ನೂ ಗೌರವಿಸಲಾಗುತ್ತಿದೆ.
ಪತ್ರಕರ್ತರ ಹಿತದೃಷ್ಟಿಯಿಂದ ಸಹಕಾರಿ ಸಂಘವನ್ನು ಸ್ಥಾಪಿಸಬೇಕು ಎಂಬ ಮಹದಾಸೆ ನಮ್ಮದಾಗಿದೆ ಎಂದರು.
ದತ್ತಿನಿಧಿ ಪ್ರಶಸ್ತಿ ಪ್ರದಾನ:
ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕೊಡಮಾಡುವ ಪ್ರತಿಷ್ಠಿತ ಪ್ರಶಸ್ತಿಗಳಾದ ಕೆ.ಶ್ಯಾಮರಾವ ದತ್ತಿನಿಧಿ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತೆ ಶೈಲಜಾ ಗೋರನಮನೆ ಅವರಿಗೆ, ಡಾ.ಯು.ಚಿತ್ತರಂಜನ್ ದತ್ತಿನಿಧಿ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಗಣೇಶ ಇಟಗಿ ಹಾಗೂ ಜಿ.ಎಸ್.ಹೆಗಡೆ ಅಜ್ಜೀಬಳ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ದೀಪಕ ಕುಮಾರ್ ಶೇಣ್ವಿ ಅವರಿಗೆ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪುರಸ್ಕೃತರಾದ ಶೈಲಜಾ ಗೋರನಮನೆ ಅವರ ಕುರಿತು ಸುಮಂಗಲಾ ಹೊನ್ನೆಕೊಪ್ಪ, ಗಣೇಶ ಹೆಗಡೆ ಇಟಗಿ ಅವರ ಕುರಿತು ವಿನುತಾ ಹೆಗಡೆ ಹಾಗೂ ದೀಪಕ ಕುಮಾರ್ ಶೇಣ್ವಿ ಅವರ ಕುರಿತು ಪ್ರಭಾವತಿ ಗೋವಿ ಪರಿಚಯ ಮಾಡಿದರು.
ಇದೇ ಸಂದರ್ಭದಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಪತ್ರಕರ್ತರ ಮಕ್ಕಳಾದ ಸುಜನ್ ಮನಮೋಹನ್ ನಾಯ್ಕ ಹಾಗೂ ದೀಪ್ತಿ ದತ್ತಾತ್ರೇಯ ಭಟ್ ಮತ್ತು ಎಸ್ಎಸ್ಎಲ್ಸಿಯಲ್ಲಿ ಉತ್ತಮ ಸಾಧನೆ ಮಾಡಿದ ತುಳಸಿ ರಾಘವೇಂದ್ರ ಹೆಗಡೆ ಇವರನ್ನು ಪುರಸ್ಕರಿಸಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಹಿರಿಯ ಪತ್ರಕರ್ತ ದೀಪಕ ಕುಮಾರ್ ಶೇಣ್ವಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಹಿರಿಯ ಪತ್ರಕರ್ತೆ ಶೈಲಜಾ ಗೋರನಮನೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿ ಮಾತನಾಡಿ, ಮಹಿಳೆಯರು ಮನಸ್ಸು ಮಾಡಿದರೆ ಸಾಧನೆಗಳನ್ನು ಮಾಡಬಹುದು. ಪತ್ರಕರ್ತರು ಸಾಕಷ್ಟು ಕಷ್ಟ ನಷ್ಟವನ್ನು ಅನುಭವಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ವಿಠ್ಠಲದಾಸ ಕಾಮತ್, ರಾಜ್ಯ ಸಮಿತಿ ಸದಸ್ಯ ಬಸವರಾಜ ಪಾಟೀಲ,ಖಜಾಂಚಿ ರಾಜೇಂದ್ರ ಹೆಗಡೆ, ಪತ್ರಿಕಾ ಮಂಡಳಿ ಸದಸ್ಯ ಪ್ರದೀಪ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ರಾಧಾಕೃಷ್ಣ ಭಟ್ , ಪ್ರಧಾನ ಕಾರ್ಯದರ್ಶಿ ಸುಮಂಗಲಾ ಹೊನ್ನೆಕೊಪ್ಪ ಸೇರಿದಂತೆ ಹಲವರು ಇದ್ದರು.
ಗಾಯತ್ರಿ ರಾಘವೇಂದ್ರ ಪ್ರಾರ್ಥಿಸಿದರು.
ಕಾರ್ಯದರ್ಶಿ ನರಸಿಂಹ ಸಾತೋಡ್ಡಿ ಸ್ವಾಗತಿಸಿದರು.
ರಾಘವೇಂದ್ರ ಬೆಟ್ಟಕೊಪ್ಪ ನಿರೂಪಿಸಿದರು.
ಕೃಷ್ಣಮೂರ್ತಿ ಕೆರೆಗದ್ದೆ ವಂದಿಸಿದರು.