• Slide
    Slide
    Slide
    previous arrow
    next arrow
  • ಅತಿಕ್ರಮಣದಾರರಿಗೆ ಹಕ್ಕು ಕೊಡಿಸಲು ಪ್ರಯತ್ಮ ಸಾಗಿದೆ: ಕಾಗೇರಿ

    300x250 AD

    ಸಿದ್ದಾಪುರ: ಅತಿಕ್ರಮಣದಾರರಿಗೆ ಕಾಯ್ದೆಯ ತೊಡಕು, ನ್ಯಾಯಾಲಯದ ಆದೇಶಗಳ ನಡುವೆಯೂ ಕಾನೂನುಬದ್ಧವಾಗಿ ಹಕ್ಕು ಕೊಡಿಸಲು ರಾಜ್ಯ ಸರಕಾರ ಪ್ರಯತ್ನಿಸುತ್ತಿದೆ ಎಂದು ಸಾಕಷ್ಟು ಬಾರಿ ಹೇಳಿದ್ದೇನೆ. ಈಗಲೂ ಅದಕ್ಕೆ ಬದ್ಧನಾಗಿದ್ದೇನೆ. ಅತಿಕ್ರಮಣದಾರರ ಹಿತರಕ್ಷಣೆ ಮಾಡಿಲ್ಲ ಅಂದರೆ ಅವರನ್ನು ಯಾವತ್ತೋ ಒಕ್ಕಲೆಬ್ಬಿಸುತ್ತಿದ್ದರು. ನಾವು ಜವಾಬ್ದಾರಿಯುತವಾಗಿ ಅತಿಕ್ರಮಣದಾರರಿಗೆ ನ್ಯಾಯ ಕೊಡಿಸುತ್ತೇವೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೋರಾಟಗಾರ ಮುಖಂಡರು ತಾವು ಅಧಿಕಾರದಲ್ಲಿದ್ದಾಗ ಯಾಕೆ ಅತಿಕ್ರಮಣದಾರರಿಗೆ ನ್ಯಾಯ ಕೊಡಿಸಿಲ್ಲ? ಅವರ ಪಕ್ಷವೇ ಅಧಿಕಾರದಲ್ಲಿದ್ದಾಗ, ತಮ್ಮವರೇ ಮಂತ್ರಿ, ಮುಖ್ಯಮಂತ್ರಿಗಳಾಗಿದ್ದಾಗ ಯಾಕೆ ಮಾಡಿಲ್ಲ? ಅತಿಕ್ರಮಣ ಮಾಡಿರುವುದು ಎಷ್ಟೋ ಹಿಂದೆ. ನಾನು ಸ್ಪೀಕರ್ ಆದ ನಂತರ ಅತಿಕ್ರಮಣ ಮಾಡಿದ್ದಲ್ಲ. ಈ ಎಲ್ಲದರ ಹಿಂದಿರುವ ಕಾರಣ ರಾಜಕಾರಣ. ಯಾಕೆಂದರೆ ಚುನಾವಣೆ ಹತ್ತಿರ ಬಂದಿದೆ. ಟೀಕಿಸುವವರ ಅವಧಿಯಲ್ಲಿ ಏನು ಮಾಡಿದ್ದರು ಅಂತ ಜನರಿಗೆ ಗೊತ್ತೇ ಇದೆ. ಹೋರಾಟ ಮಾಡುವದು ಪ್ರಜಾಪ್ರಭುತ್ವದಲ್ಲಿರುವ ಹಕ್ಕು. ಆದರೆ ಜನರ ಮುಗ್ದತೆಯನ್ನು ಬಳಸಿಕೊಳ್ಳಬಾರದು ಎಂದರು.
    ಈವರೆಗಿನ ನನ್ನ ಅವಧಿಯಲ್ಲಿ ಬೇಧಭಾವವಿಲ್ಲದೇ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಮುಂದೆಯೂ ಮಾಡುತ್ತೇನೆ. ಅಭಿವೃದ್ಧಿ ಆಗಿಲ್ಲ ಎಂದು ಆರೋಪಿಸುವವರಿಗೆ ಬಹುಶಃ ದೃಷ್ಟಿದೋಷ, ಶ್ರವಣದೋಷ, ವಾಕ್ ದೋಷ ಇರಬೇಕು. ಮಾಡಿದ್ದನ್ನು ಕಂಡರೂ ಕಾಣದೇ ವಿನಾ:ಕಾರಣ ಆರೋಪ ಮಾಡುವವರಿಗೆ ಮತ್ತೇನು ಹೇಳಲು ಸಾಧ್ಯ? ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
    ನಾನು ಸ್ಪೀಕರ್ ಆದ ನಂತರದಲ್ಲಿ ಶಿರಸಿ-ಸಿದ್ದಾಪುರ ಕ್ಷೇತ್ರಕ್ಕೆ ಅಭಿವೃದ್ಧಿ ಕಾರ್ಯಗಳಿಗೆ 111 ಕೋಟಿ ರೂ.ಗಳನ್ನು ಮಂಜೂರಿ ಮಾಡಿಸಿ, ಅನುಷ್ಠಾನಗೊಳಿಸಿದ್ದೇನೆ. ಕೆಲವರಿಗೆ ಇದನ್ನು ಸಹಿಸಲಾಗುತ್ತಿಲ್ಲ. ಅಭಿವೃದ್ಧಿಗೆ ನನ್ನ ನಿರ್ಲಕ್ಷ ಅನ್ನುವವರು ತಮ್ಮ ಸರಕಾರದ ಅವಧಿಯಲ್ಲಿ ಎಷ್ಟು ಅಭಿವೃದ್ಧಿಯಾಗಿತ್ತು ಅಂತ ತಿರುಗಿನೋಡಿಕೊಳ್ಳಲಿ. ಅವರ ಸರಕಾರದಲ್ಲಿ ರಸ್ತೆ ಅಭಿವೃದ್ಧಿಗೆ ವರ್ಷಕ್ಕೆ 1 ಕೋಟಿ ರೂ.ಬರುತ್ತಿತ್ತು ಎಂದರು. ಯಾವ ಅತಿಕ್ರಮಣದಾರರಿಗೂ ಸ್ಥಳದಲ್ಲಿ ತೊಂದರೆಯಾಗದ ಹಾಗೇ ಸ್ಪಷ್ಟವಾಗಿ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಅತಿಕ್ರಮಣದಾರರಿಗೆ ಮಂಜೂರಿ ಮಾಡಿಕೊಡಲು ರಾಜ್ಯ- ಕೇಂದ್ರ ಸರಕಾರವಾಗಿ ನಾವು ಬದ್ಧರಿದ್ದೇವೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು .

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top