• Slide
    Slide
    Slide
    previous arrow
    next arrow
  • ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಬೆಂಬಲ: ಜು.30ರಂದು ಮೌನ ಪ್ರತಿಭಟನೆಗೆ ಸ್ವರ್ಣವಲ್ಲಿ ಶ್ರೀ ಕರೆ

    300x250 AD

    ಶಿರಸಿ: ಉತ್ತರಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ವಿಚಾರವಾಗಿ ನಡೆಯುತ್ತಿರುವ ಹೋರಾಟಗಳಿಗೆ ತಾಲೂಕಿನ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಗಂಗಾಧರೇಂದ್ರ ಮಹಾಸ್ವಾಮಿ ಬೆಂಬಲ ಸೂಚಿಸಿದ್ದು, ಜು.30ರಂದು ಆಯೋಜಿಸಿರುವ ಮೌನ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯ ಜನ ಸೇರುವಂತೆ ಕರೆ ನೀಡಿದ್ದಾರೆ.

    ‘ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉತ್ತರ ಕನ್ನಡ ಜಿಲ್ಲೆಗೆ ಅತ್ಯವಶ್ಯವಾಗಿದೆ. ಕಳೆದ ಮೂರು ದಶಕಗಳಿಂದಲೂ ಈ ವಿಷಯದಲ್ಲಿ ಜಿಲ್ಲಾದ್ಯಂತ ಒಮ್ಮತದ ಹಾಗೂ ಒತ್ತಾಯಪೂರ್ವಕವಾದ ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಸುತ್ತಲೇ ಬಂದಿದ್ದರೂ, ಇದುವರೆಗೂ ಅದು ಈಡೇರದೇ ಇರುವುದು ಇಲ್ಲಿನ ಜನತೆಗೆ ನೋವನ್ನುಂಟು ಮಾಡಿದೆ. ನಾಡಿನ ಸರ್ವತೋಮುಖವಾದ ಅಭಿವೃದ್ಧಿಗೆ ನಮ್ಮ ಉತ್ತರಕನ್ನಡ ಜಿಲ್ಲೆಯ ಕೊಡುಗೆ ಅಪಾರವಾದದ್ದು. ಆದರೆ ಈ ಜಿಲ್ಲೆಯ ಜನರ ಸಂಕಷ್ಟಕ್ಕೆ ಪರಿಹಾರವಾಗಿ ಸರ್ಕಾರದಿಂದ ಅಪೇಕ್ಷಿಸುತ್ತಿರುವ ಅತ್ಯಂತ ಮೂಲಭೂತ ಹಾಗೂ ಅನಿವಾರ್ಯವಾದ ವ್ಯವಸ್ಥೆ ಎಂದರೆ ಅದು ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣ’ ಎಂದಿದ್ದಾರೆ.

    ದಿನೇ ದಿನೇ ಆತಂಕಕಾರಿ ರೋಗಗಳು ಹಾಗೂ ಭಯಂಕರವಾದ ಅಪಘಾತಗಳು ಹೆಚ್ಚಾಗುತ್ತಿರುವ ಈ ಕಾಲದಲ್ಲಿ ತುರ್ತಾಗಿ ಚಿಕಿತ್ಸೆ ಹಾಗೂ ವೈದ್ಯೋಪಚಾರವನ್ನು ಒದಗಿಸುವ ಮೂಲಭೂತ ವ್ಯವಸ್ಥೆಯು ಇಲ್ಲವಾದಾಗ ಜನರಲ್ಲಿ ಸಹಜವಾಗಿ ಆತಂಕ ಉಂಟಾಗುತ್ತದೆ. ದೂರದ ಆಸ್ಪತ್ರೆಗಳಿಗೆ ಹೋಗುವಷ್ಟರಲ್ಲಿ ಮಾರ್ಗಮಧ್ಯದಲ್ಲಿಯೇ ಪ್ರಾಣಹಾನಿಯಾಗಿರುವ ಅನೇಕ ಘಟನೆಗಳು ನಮ್ಮ ಮುಂದೆ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಅತ್ಯಂತ ತುರ್ತಾಗಿ ಉತ್ತರಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತವಾದ ಮಲ್ಟಿ ಸ್ಥೆಷಾಲಿಟಿ ಆಸ್ಪತ್ರೆಯ ನಿರ್ಮಾಣವು ಆಗಬೇಕಿದೆ. ಈ ಕುರಿತಾಗಿ ಸರ್ಕಾರವು ಆದಷ್ಟು ಶೀಘ್ರದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಬೇಕಾದ ಅಗತ್ಯವಿದೆ’ ಎಂದು ತಿಳಿಸಿದ್ದಾರೆ.

    300x250 AD

    ‘ಸುದೀರ್ಘ ಕಾಲದಿಂದ ಅನೇಕ ವಿಧದಲ್ಲಿ ಶಾಂತಿಯುತವಾದ ಸೌಹಾರ್ದ ಭಾವದಿಂದ ಬೇಡಿಕೆಯನ್ನು ಸಲ್ಲಿಸುತ್ತಲೇ ಬಂದಿದ್ದರೂ, ಈ ಕನಸು ನನಸಾಗದೇ ಇರುವುದು ಇಲ್ಲಿನ ಜನತೆಯ ತಾಳ್ಮೆಯ ಪರೀಕ್ಷೆ ಎಂಬಂತೆ ಭಾಸವಾಗುತ್ತಿದೆ. ಆದ್ದರಿಂದ ಪ್ರಾಮಾಣಿಕವಾದ ಈ ಬೇಡಿಕೆಯು ಪ್ರತಿಭಟನಾ ಸ್ವರೂಪವನ್ನು ಪಡೆದುಕೊಳ್ಳದಂತೆ ಮುಖ್ಯಮಂತ್ರಿಗಳು ಈ ವಿಷಯದಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕಿದೆ’ ಎಂದಿರುವ ಅವರು, ‘ಉತ್ತರಕನ್ನಡ ಜಿಲ್ಲೆಯ ಸಮಗ್ರ ಜನತೆಯ ಒತ್ತಾಯಪೂರ್ವಕವಾದ ಈ ಬೇಡಿಕೆಯನ್ನು ಸರ್ಕಾರಕ್ಕೆ ಪಲಣಾಮಕಾರಿಯಾಗಿ ತಲುಪಿಸಬೇಕಿದೆ. ಈ ಉದ್ದೇಶದಿಂದ ಜು.30ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಆಯೋಜಿಸಲಾದ ಮೌನ ಪ್ರತಿಭಟನೆಯಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಉತ್ತರಕನ್ನಡ ಜಿಲ್ಲೆಯ ಎಲ್ಲರೂ ತಮ್ಮ ಜಿಲ್ಲೆ ಎಂಬ ಅಭಿಮಾನದಿಂದ ಪಾಲ್ಗೊಂಡು, ಸರ್ಕಾರಕ್ಕೆ ಈ ಜಿಲ್ಲೆಯ ಅಗತ್ಯತೆಯನ್ನು ಮನವರಿಕೆ ಮಾಡಿಕೊಡುವಂತಾಗಬೇಕು’ ಎಂದು ಕೋರಿದ್ದಾರೆ.

    ‘ಜನರ ಆಶೋತ್ತರಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಮುಖ್ಯಮಂತ್ರಿಗಳು ಉತ್ತರಕನ್ನಡ ಜಿಲ್ಲೆಯ ಸಮಗ್ರ ಜನತೆಯ ಈ ಬೇಡಿಕೆಯನ್ನು ಅತ್ಯಂತ ತುರ್ತಾಗಿ ಸಾಕಾರಗೊಳಸುವತ್ತ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕು. ಆ ಮೂಲಕ ಉತ್ತರಕನ್ನಡ ಜಿಲ್ಲೆಯ ಜನತೆಯ ಸಂಕಷ್ಟವನ್ನು ನಿವಾರಿಸಿ, ಅನೇಕ ಬಡವರ, ರೋಗಿಗಳ ಜೀವವನ್ನು- ಜೀವನವನ್ನು ಕಾಪಾಡುವ ಮಹತ್ತರ ಜವಾಬ್ದಾರಿಯನ್ನು ನಿರ್ವಹಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top