Slide
Slide
Slide
previous arrow
next arrow

ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ: ಸಾರ್ವಜನಿಕರ ಅಸಮಾಧಾನ

300x250 AD

ಶಿರಸಿ: ಎಲ್ಲ ಮೂಲ ಸೌಕರ್ಯಗಳನ್ನು ಹೊಂದಿರುವ ಸುಸಜ್ಜಿತ ಕಟ್ಟಡವಿದ್ದರೂ ವೈದ್ಯರ ಕೊರತೆಯಿಂದ ತಾಲೂಕಿನ ಮೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇದ್ದೂ ಜನರಿಗೆ ಪ್ರಯೋಜನ ಇಲ್ಲದಂತಾಗಿದೆ.

ತಾಲ್ಲೂಕಿನ ಮೆಣಸಿ, ಸುಗಾವಿ ಮತ್ತು ಹೆಗಡೆಕಟ್ಟಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಗಂಭೀರ ಸಮಸ್ಯೆಯಾಗಿದೆ. ಹತ್ತು ಹಾಸಿಗೆಯ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿ ಎರಡು ವರ್ಷ ಕಳೆದರೂ ಮೆಣಸಿ ಆರೋಗ್ಯ ಕೇಂದ್ರ ಕಾಯಂ ವೈದ್ಯರನ್ನು ಕಂಡಿಲ್ಲ. ಸುಗಾವಿ ಆಸ್ಪತ್ರೆಯ ವೈದ್ಯರೊಬ್ಬರು ವರ್ಗಾವಣೆಗೊಂಡ ಹಲವು ತಿಂಗಳು ಕಳೆದಿದೆ. ಹೆಗಡೆಕಟ್ಟಾ ಆಸ್ಪತ್ರೆಯ ವೈದ್ಯರು ಈಚೆಗೆ ಭಟ್ಕಳಕ್ಕೆ ವರ್ಗವಾಗಿದ್ದಾರೆ. ಮೆಣಸಿ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬಾಳೆಕಾಯಿಮನೆ, ಸೊಣಗಿನಮನೆ, ಕೊಡ್ನಗದ್ದೆ ಸೇರಿ ಹಲವು ಗ್ರಾಮಗಳಿವೆ. ಕುಗ್ರಾಮದಂತಿರುವ ಈ ಪ್ರದೇಶ ತಾಲ್ಲೂಕು ಕೇಂದ್ರದಿಂದ 35 ರಿಂದ 40 ಕಿ. ಮೀ. ದೂರದಲ್ಲಿದೆ. ಅನಾರೋಗ್ಯಕ್ಕೆ ತುತ್ತಾದವರನ್ನು ಚಿಕಿತ್ಸೆಗೆ ಶಿರಸಿ ನಗರಕ್ಕೆ ಕರೆತರಬೇಕಾದ ಸ್ಥಿತಿ ಇದೆ. ಸುಗಾವಿ ಮತ್ತು ಹೆಗಡೆಕಟ್ಟಾ ಕೂಡ ನಗರದಿಂದ 15 ಕಿ. ಮೀ. ದೂರದಲ್ಲಿವೆ. ಈ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಜನಸಂಖ್ಯೆ ಹೆಚ್ಚಿದೆ.ಗ್ರಾಮಗಳು ಸಾಕಷ್ಟಿವೆ. ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆ ಅವಲಂಬಿಸಿರುವ ಬಡ ಕುಟುಂಬಗಳೇ ಹೆಚ್ಚಿರುವ ಈ ಪ್ರದೇಶದ ಜನರು ವೈದ್ಯರು ಸಕಾಲಕ್ಕೆ ಸಿಗದ ಪರಿಣಾಮ ತೊಂದರೆಗೆ ಸಿಲುಕಿದ್ದಾರೆ. ಮಳೆಗಾಲದಲ್ಲಿ ಏಕಾಏಕಿ ವಾತಾವರಣ ಏರುಪೇರಾಗುವುದರಿಂದ ಅನಾರೋಗ್ಯಕ್ಕೆ ತುತ್ತಾಗುವವರ ಸಂಖ್ಯೆ ಹೆಚ್ಚು ಅಲ್ಲದೆ ಸಣ್ಣಪುಟ್ಟ ಅಪಘಾತ, ಅವಘಡಗಳು ನಡೆದರಂತೂ ತಕ್ಷಣಕ್ಕೆ ಚಿಕಿತ್ಸೆಗೆ ಸ್ಥಳೀಯವಾಗಿ ವೈದ್ಯರಿಲ್ಲದೆ ಸಮಸ್ಯೆ ಉಂಟಾಗುತ್ತಿದೆ. ಕೂಲಿಕಾರ್ಮಿಕರು ಹೆಚ್ಚಿರುವ ಕೊಡ್ನಗದ್ದೆ ಭಾಗದಲ್ಲಿ ಆಸ್ಪತ್ರೆ ಇದ್ದರೂ ವೈದ್ಯರಿಲ್ಲದಿರುವುದು ವ್ಯವಸ್ಥೆಯನ್ನು ಅಣಕಿಸುವಂತಾಗುತ್ತಿದೆ ಎಂದು ಕೊಡ್ನಗದ್ದೆ ಗ್ರಾಮ ಪಂಚಾಯ್ತಿ ಸದಸ್ಯ ಪ್ರವೀಣ ಹೆಗಡೆ ಹೇಳಿದರು.

300x250 AD

ಗ್ರಾಮೀಣ ಭಾಗದಲ್ಲಿ ಆರೋಗ್ಯ ಸುಧಾರಣೆ ಕೇವಲ ಘೋಷಣೆಗೆ ಸೀಮಿತವಾಗಿದೆ. ಕಟ್ಟಡ ನಿರ್ಮಿಸಿ, ಕೆಲವೇ ಸಿಬ್ಬಂದಿ ನಿಯೋಜಿಸುವ ಆರೋಗ್ಯ ಇಲಾಖೆ ಕಾಯಂ ವೈದ್ಯರನ್ನು ನೇಮಿಸಲು ಹಿಂದೇಟು ಹಾಕುತ್ತಿದೆ. ಜನರು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳಿಗೆ ತೆರಳುವ ಸ್ಥಿತಿ ಉಂಟಾಗಿದೆ ಎನ್ನುವುದು ಸುಗಾವಿ ವ್ಯಾಪ್ತಿಯ ಜನರ ಅಭಿಪ್ರಾಯವಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಈ ಮೊದಲು ಬಿ. ಎಂ. ಎಸ್. ಪದವಿ ಪಡೆದ ವೈದ್ಯರನ್ನೂ ನಿಯೋಜಿಸಲು ಅವಕಾಶವಿತ್ತು. ಆದರೆ ಈಗ ಎಂ.ಬಿ.ಬಿ.ಎಸ್ ಪದವಿ ಪಡೆದವರ ನೇಮಕಾತಿಗೆ ಮಾತ್ರ ಅವಕಾಶ ಇರುವ ಕಾರಣ ಹುದ್ದೆ ಖಾಲಿ ಇರುವ ಆಸ್ಪತ್ರೆಗಳಿಗೆ ಹೊಂದಾಣಿಕೆ ಕಷ್ಟವಾಗಿದೆ’ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

Share This
300x250 AD
300x250 AD
300x250 AD
Back to top