ಶಿರಸಿ : ತಾಲೂಕಿನ ಅರಣ್ಯ ಕಾಲೇಜಿನಲ್ಲಿ ನಡೆದ ಜೀವವೈವಿಧ್ಯ ದಿನ ಆಚರಣೆ ಹಸಿರು ಸಮಾರಂಭವನ್ನು ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯ ವಿಧಾನ ಮಂಡಳದ ವಿಶೇಷ ಸಭೆ – ಅಧಿವೇಶನ ಏರ್ಪಡಿಸಿ ರಾಜ್ಯದ ಜೈವಿಕ ಸಂಪನ್ಮೂಲಗಳ ಸ್ಥಿತಿಗತಿ, ನಿರ್ವಹಣೆ, ಸಂರಕ್ಷಣೆ – ಅಭಿವೃದ್ಧಿ ಬಗ್ಗೆ ವಿಶೇಷ ಚಿಂತನ – ಮಂಥನ, ತಜ್ಞರ ಜೊತೆಗೆ ಸಂವಾದ ಏರ್ಪಡಿಸಬೇಕು ಎಂದು ಮಾನ್ಯ ವಿಧಾನ ಸಭಾಧ್ಯಕ್ಷರಿಗೆ ಮನವಿ ಮಾಡಿದರು.
ಜೀವವೈವಿಧ್ಯ ಕಾಯಿದೆ ಅಡಿಯಲ್ಲಿ ತಳಮಟ್ಟದಲ್ಲಿ ಗ್ರಾಮ ಪಂಚಾಯತಕ್ಕೆ ಜೈವಿಕ ಸಂಪತ್ತಿನ ರಕ್ಷಣೆಯ ಅಧಿಕಾರ ಸಿಕ್ಕಿದೆ. ಗ್ರಾಮಗಳ ನೈಸರ್ಗಿಕ ಸಂಪನ್ಮೂಲಗಳ ಬಳಕೆ, ನಿರ್ವಹಣೆ ಬಗ್ಗೆ ಸ್ಥಳೀಯ ಪಂಚಾಯತರಾಜ್ ಸಂಸ್ಥೆಗಳ ಜವಾಬ್ದಾರಿ ಹೆಚ್ಚಿದೆ. ಭೂ ಕುಸಿತ ಪರಿಸ್ಥಿತಿ ತಡೆಯಲು ಜಿಲ್ಲಾಡಳಿತ ಗಂಭೀರ ಕ್ರಮ ಕೈಗೊಳ್ಳಬೇಕು. ಗ್ರಾಮ ಸಾಮೂಹಿಕ ಭೂಮಿ ಉಳಿಸಲು ಕ್ರಮಬೇಕು ಎಂದು ಜೀವ ವೈವಿಧ್ಯ ಮಂಡಳಿಯ ನಿಕಟ ಪೂರ್ವ ಅಧಕ್ಷ ಅನಂತ ಹೆಗಡೆ ಅಶೀಸರ ಸರ್ಕಾರದ ಗಮನ ಸೆಳೆದರು.
ಮುಖ್ಯ ಅತಿಥಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಜ್ಜಯ್ಯ ಅವರು,ಅಂತರಾಷ್ಟ್ರೀಯ ಜೀವವೈವಿಧ್ಯ ಸಮಾವೇಶ, ಒಪ್ಪಂದ, ಜೀವ ವೈವಿಧ್ಯ ದಾಖಲಾತಿ, ಕಾರ್ಯಕ್ರಮಗಳು ಹಾಗೂ ಕಾನೂನಿನ ಜಾರಿ ಹೇಗೆ ಎಂಬುದನ್ನು ವಿವರಿಸಿದರು.
ತಾಲೂಕು ಪಂಚಾಯತ್ ಇಂಜೀನಿಯರ ರಾಮಮೂರ್ತಿ ಅವರು ಶಿರಸಿ ತಾಲೂಕಾ ಪಂಚಾಯತ ವನ್ನು ರಾಜ್ಯದ ಮಾದರಿ ಜೀವವೈವಿಧ್ಯ ಸಮಿತಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಪಂಚಾಯತಗಳು ಜೀವವೈವಿಧ್ಯ ಸಮಿತಿಗಳ ಸಭೆ ನಡೆಸಿ ಚುರುಕು ಮಾಡಬೇಕು ಎಂದರು.
ಅರಣ್ಯ ಕಾಲೇಜು ಡೀನ್ ಡಾ| ಕೊಪ್ಪದ್ ಅವರು ಅಧ್ಯಕ್ಷತೆ ವಹಿಸಿ “ಗ್ರಾಮ ಮಟ್ಟದ ಜೈವಿಕ ಸಂಪತ್ತಿನ ಅಧ್ಯಯನಕ್ಕೆ ಅರಣ್ಯ ವಿದ್ಯಾರ್ಥಿಗಳನ್ನು ತೊಡಗಿಸುತ್ತೇವೆ” ಎಂದರು.
ಅರಣ್ಯ ವಿಜ್ಞಾನಿ ಡಾ.ವಾಸುದೇವ, ಡಾ.ಕೃಷ್ಣ, ಡಾ.ಉಪಾಧ್ಯ ಕೃಷಿ ವಿಜ್ಞಾನ ಕೇಂದ್ರದ ಡಾ.ರೂಪಾ ಪಾಟೀಲ, ವೃಕ್ಷ ಆಂದೋಲನದ ಗಣಪತಿ ಕೆ. ಸಂವಾದದಲ್ಲಿ ಪಾಲ್ಗೊಂಡರು. ಜೇನು ಕುಟುಂಬಗಳಿಗೆ ತಗಲುವ ರೋಗ ತಡೆಗಟ್ಟಲು ತುರ್ತುಕ್ರಮಬೇಕು. ಜಾಲಾರಿ ವೃಕ್ಷಗಳ ಸಂರಕ್ಷಣೆಗೆ ಕ್ರಮಬೇಕು ಎಂಬ ಒಟ್ಟಾಭಿಪ್ರಾಯ ಸಂವಾದದ ಫಲಶ್ರುತಿ ಆಗಿತ್ತು.