ಕುಮಟಾ: ತಾಲ್ಲೂಕಿನ ಹೆಗಡೆ ಗ್ರಾಮಕ್ಕೆ ಸಾಯಂಕಾಲದ ನಂತರ ಕೇವಲ ಒಂದು ಬಸ್ಸನ್ನು ಬಿಡುತ್ತಿದ್ದು, ಕನಿಷ್ಠ ಎರಡು ಬಸ್ಗಳ ಸೌಲಭ್ಯ ಕಲ್ಪಿಸಬೇಕು ಎಂದು ಆ ಭಾಗದ ಗ್ರಾಮಸ್ಥರು ಶಾಸಕರ ಮನೆಗೆ ತೆರಳಿ ಒತ್ತಾಯಿಸಿದರು.
ಸಂಜೆವರೆಗೆ ಹೆಗಡೆ ಮಾರ್ಗದಲ್ಲಿ ಮೂರು ಬಸ್ಗಳು ಸಂಚರಿಸುತ್ತಿದ್ದು, ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿತ್ತು. ಆದರೆ 5.30ರ ನಂತರ ಎರಡು ಬಸ್ ಗಳು ಸಂಚರಿಸುತ್ತಿದ್ದವು. ಜನಸಂಖ್ಯೆ ಹೆಚ್ಚಿರುವ ಕಾರಣ ಇದರ ಅಗತ್ಯತೆಯಿದೆ. ಕಳೆದೆರಡು ದಿನಗಳಿಂದ ಆ ಸೇವೆಯೂ ಸ್ಥಗಿತಗೊಂಡು ಈ ಮಾರ್ಗಕ್ಕೆ ಬರುವ ಬಸ್ಸನ್ನು ಬೇರೆಡೆಗೆ ಬಿಡಲಾಗುತ್ತಿದೆ. ಇದರಿಂದ ಪ್ರತಿನಿತ್ಯ ಕೆಲಸ ಕಾರ್ಯಗಳಿಗೆ ತೆರಳುವವರು ಮನೆಗೆ ಮರಳಲು ಸಮಸ್ಯೆಯಾಗಿದೆ ಎಂದು ವಿವರಿಸಿದರು.
51 ಮತ್ತು 52 ಶೆಡ್ಯೂಲ್ನ ಬಸ್ಗಳು ಇದಾಗಿದ್ದು, ಬೆಳಿಗ್ಗೆ 6.30ರಿಂದ ರಾತ್ರಿ 9.30 ಗಂಟೆವರೆಗೆ ಯಾವುದೇ ತೊಡಕಾಗದಂತೆ ನಿರಂತರವಾಗಿ ಸೇವೆ ಒದಗಿಸುವಂತಾಗಬೇಕು ಎಂದು ಒತ್ತಾಯಿಸಿದಾಗ ಶಾಸಕ ದಿನಕರ ಶೆಟ್ಟಿ ಅವರು ಡಿಪೋ ವ್ಯವಸ್ಥಾಪಕರನ್ನು ಕರೆಯಿಸಿ ಗ್ರಾಮಸ್ಥರ ಸಮ್ಮುಖದಲ್ಲಿ ಚರ್ಚಿಸಿದರು.
ಡಿಪೋ ವ್ಯವಸ್ಥಾಪಕ ಬಾನಾವಳಿಕರ್ ಪ್ರತಿಕ್ರಿಯಿಸಿ, ಬಸ್ಗಳಿಗಿಂತ ಮುಖ್ಯವಾಗಿ ಸಿಬ್ಬಂದಿ ಕೊರತೆಯಿದ್ದು, ಹೆಚ್ಚುವರಿ ಚಾಲಕ ನಿರ್ವಾಹಕರ ಅಗತ್ಯವಿದೆ. ಹಾಗಾಗಿ ಎರಡು ಬಸ್ ಗಳ ಸೌಲಭ್ಯ ಕಷ್ಟಸಾಧ್ಯವೆಂದಾಗ ಗ್ರಾಮಸ್ಥರು ಕೆರಳಿ ಮಾತಿನ ಚಕಮಕಿಗೆ ಇಳಿದರು. ಶಾಸಕರು ಮಧ್ಯಸ್ಥಿಕೆ ವಹಿಸಿ, ಆಕ್ರೋಶಿತರನ್ನು ಸಮಾಧಾನಪಡಿಸಿ ಹೆಗಡೆ ಗ್ರಾಮದ ಜನರಿಗೆ ಮೊದಲಿನಂತೆ ಎರಡು ಬಸ್ ಗಳನ್ನು ಖಾಯಂ ಮಾಡಿ ಎಂದು ತಿಳಿಸಿದರು. ಜೊತೆಗೆ ಸಾರಿಗೆ ಘಟಕದ ಜಿಲ್ಲಾಧಿಕಾರಿ ಜೊತೆ ದೂರವಾಣಿ ಕರೆಯಲ್ಲಿ ಸಂಪರ್ಕಿಸಿ ಸಮಸ್ಯೆ ತಿಳಿಹೇಳಿದರು. ಎರಡು ದಿನಗಳಲ್ಲಿ ಹೊಸ ಶೆಡ್ಯೂಲ್ ಮಾಡಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಬಿ.ಜಿ.ಶಾನಭಾಗ, ಮೋಹನ ಶಾನಭಾಗ, ಅಮರನಾಥ ಭಟ್ಟ, ವೆಂಕಟೇಶ ನಾಯ್ಕ, ವಿನಾಯಕ ಪಟಗಾರ, ಎನ್.ವಿ.ನಾಯ್ಕ, ಜಿ.ಎಸ್.ನಾಯ್ಕ, ದಾಮೋದರ ಪಟಗಾರ ಇದ್ದರು.