ಶಿರಸಿ: ಚಿಂತೆ ಸಾರ್ವತ್ರಿಕವಾದುದು. ಜಾತಿ, ಮತ, ವಯೋಮಾನ, ಅಂತಸ್ತು, ಅವಸ್ಥೆಗಳನ್ನು ಮೀರಿದ್ದು. ತಾನು ಮಾತ್ರ ಸದಾ ಸುಖಿಯಾಗಿರಬೇಕು ಎಂಬ ಅಪೇಕ್ಷೆ ಅರ್ಥಾತ್ ಸ್ವಾರ್ಥ ಭಾವವೇ ಚಿಂತೆಯ ಮೂಲ ಕಾರಣ ಎಂದು ವಿಶ್ರಾಂತ ಉಪನ್ಯಾಸಕ ಪ್ರೊ ಎಮ್.ಎನ್.ಹೆಗಡೆ ಹಲವಳ್ಳಿಯವರು ನುಡಿದರು.
ಅವರು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು(ರಿ) ಬೆಂಗಳೂರು ಶಿರಸಿ ಮತ್ತು ನೆಮ್ಮದಿ ಮಾಸದ ಮಾತು ಸಂಯುಕ್ತಾಶ್ರಯದಲ್ಲಿ ನೆಮ್ಮದಿ ಕುಟೀರದಲ್ಲಿ ಜರುಗಿದ ಉಪನ್ಯಾಸ ಕಾರ್ಯಕ್ರಮದಲ್ಲಿ “ಚಿಂತೆ ಬಿಡಿ ಚಿಂತನೆ ಮಾಡಿ” ವಿಷಯದ ಕುರಿತು ಮಾತನಾಡುತ್ತಿದ್ದರು.
ಅವರು ಮುಂದುವರೆದು, ಜೀವನದಲ್ಲಿ ನಿಸರ್ಗದ ಕೊಡುಗೆಯಾದ ವರ್ತಮಾನವನ್ನು ಸರಿಯಾಗಿ ಬಳಸಿಕೊಂಡರೆ ಚಿಂತಿಸುವ ಅಗತ್ಯವಿರದು. ನಮ್ಮ ಮುಂದೆ ನೆರಳಿದೆ ಎಂದರೆ ಅದಕ್ಕೆ ಕಾರಣ ಅದರ ಹಿಂದಿರುವ ಪ್ರಕಾಶಮಾನವಾದ ಬೆಳಕು ಆಗಿರುತ್ತದೆ. ಆದ್ದರಿಂದ ನೆರಳನ್ನು ಎದುರಿಸಿ ಸಾಗಿದಾಗ ಬೆಳಕಿನ ಅನುಭವ ನಮ್ಮದಾಗುತ್ತದೆ. ಹಿಂದಿರುವ ಬೆಳಕಿನ ಬಗ್ಗೆ ಸಂಭ್ರಮಿಸೋಣ. ವಿಷಯ ವ್ಯಾಮೋಹವನ್ನು ಕಡಿಮೆಗೊಳಿಸುತ್ತ ನಿರ್ಲಿಪ್ತ ಭಾವವನ್ನು ಹೊಂದಲು ಪ್ರಯತ್ನಿಸಿದರೆ ಚಿಂತೆಯಿಂದ ಹೊರಬರಲಿಕ್ಕೆ ಸಾಧ್ಯವಾಗುವುದು. ಭವಿಷ್ಯದ ಕುರಿತು ಅನಾವಶ್ಯಕ ಆಲೋಚನೆಗಳನ್ನು ಮಾಡದೆ ಚಿಂತನೆಗಳನ್ನು ಮಾಡುತ್ತಾ ಸಾಗೋಣ. ನಮ್ಮ ಸುತ್ತಲಿನವರೊಂದಿಗೆ ನಾವು ಉತ್ತಮ ಬಾಂಧವ್ಯವನ್ನು ಇರಿಸಿಕೊಂಡರೆ ನಮ್ಮನ್ನು ಹರಸುವ ಕೈಗಳು, ಮನಸ್ಸುಗಳು ಹೆಚ್ಚಾಗುತ್ತವೆ ಎಂದು ವಿವಿಧ ದೃಷ್ಟಾಂತಗಳ ಉಲ್ಲೇಖಿಸುತ್ತ ಮನೋಜ್ಞವಾಗಿ ಮಾತನಾಡಿದರು.
ಕಾವ್ಯಶಾಸ್ತ್ರದಲ್ಲಿ ಚಿಂತನೆ ಮಾಡುವವನು ಸುಖಿಯಾಗಿರುತ್ತಾನೆ ಮತ್ತು ವ್ಯಸನಗಳಲ್ಲಿ ಚಿಂತನೆ ಮಾಡುವವನು ದುಃಖಿಯಾಗಿರುತ್ತಾನೆ ಎಂಬರ್ಥ ಕೊಡುವ ಸಂಸ್ಕೃತ ಸಾಲುಗಳನ್ನು ಉಲ್ಲೇಖಿಸಿ ಹಿರಿಯ ಸಾಹಿತಿ ಜಿ.ವಿ.ಭಟ್ ಕೊಪ್ಪಲುತೋಟ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಾತಮಾಡಿದರು.
ಕಾರ್ಯಕ್ರಕಮದ ಪ್ರಾರಂಭದಲ್ಲಿ ಪ್ರಸನ್ನಕುಮಾರಿ ಪುರಾಣಿಕ ಪ್ರಾರ್ಥನೆ ಮಾಡಿದರು. ಅಭಾಸಾಪ ರಾಜ್ಯ ಸಮಿತಿ ಸದಸ್ಯರಾದ ಜಗದೀಶ ಭಂಡಾರಿ ಸರ್ವರನ್ನು ಸ್ವಾಗತಿಸಿದರು. ಗಣಪತಿ ಭಟ್, ವರ್ಗಾಸರ ಅವರು ವಕ್ತಾರರ ಪರಿಚಯಿಸಿ ಆಶಯ ನುಡಿಗಳನ್ನಾಡಿದರು. ಸಾಹಿತಿ ವಾಸುದೇವ ಶಾನಭಾಗ ಸರ್ವರನ್ನು ವಂದಿಸಿದರು. ಅಭಾಸಾಪ ಶಿರಸಿಯ ಕೃಷ್ಣ ಪದಕಿಯವರು ಸುಂದರವಾಗಿ ನಿರೂಪಿಸಿದರು.