ಸಿದ್ದಾಪುರ: ಕಳೆದ 62 ವರ್ಷಗಳ ಜೀವನದಲ್ಲಿ ನಾನು ಈವರೆಗೂ ಹಳೆಯ ಘಟನೆ ಇಟ್ಟುಕೊಂಡು ದ್ವೇಷ ಸಾಧಿಸಿಲ್ಲ. ಅದಕ್ಕೆ ಪುರುಸೊತ್ತೂ ಇಲ್ಲ. ಕಳೆದ 36 ವರ್ಷದಿಂದ ಬಿಜೆಪಿಯಲ್ಲಿ ವಿವಿಧ ಹಂತದ ಹುದ್ದೆಗಳಲ್ಲಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿದ್ದೇನೆ. ಪಟ್ಟಣ ಪಂಚಾಯತ ಸದಸ್ಯನಾಗಿ ಕಾರ್ಯನಿರ್ವಹಿಸಿ, ಅಧ್ಯಕ್ಷನಾಗಿ ಹಿಂದಿನ ಮತ್ತು ನನ್ನ ನಂತರದ ಅಧ್ಯಕ್ಷರು ಮಾಡದ ರೀತಿಯಲ್ಲಿ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ.ಪಟ್ಟಣ ಪಂಚಾಯತ ಹಣದಲ್ಲಿ ಸಂಸಾರ ನಡೆಸುವ ಅವಶ್ಯಕತೆ ನನಗಿಲ್ಲ.ಈವರೆಗೆ ಯಾವುದೇ ಕಳಂಕ ಹೊತ್ತಿಲ್ಲ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ನನ್ನ ಮೇಲೆ ಮಾಡಿರುವ ಆರೋಪವನ್ನು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಅದು ಸುಳ್ಳಾದರೆ ವಸಂತ ನಾಯ್ಕ ರಾಜಕೀಯ ನಿವೃತ್ತಿ ಪಡೆಯುತ್ತಾರಾ? ಅವರೇ ಹೇಳಲಿ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಜಿ.ನಾಯ್ಕ ಹಾಣಜೀಬೈಲ್ ಸವಾಲು ಹಾಕಿದರು.
ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಸಂತೋಷ ನಾಯ್ಕ ಪ್ರಕರಣದಲ್ಲಿ ಆತ ಆತ್ಮಹತ್ಯೆಗೂ ಮುನ್ನ ಮಾಡಿದ ವಿಡಿಯೋದಲ್ಲಿ ಹೆಸರಿಸಿದ, ಡೆತ್ ನೋಟ್ನಲ್ಲಿ ಉಲ್ಲೇಖಿಸಿದ ಹೆಸರುಗಳ ವ್ಯಕ್ತಿಗಳ ಮೇಲೆ ಎಪ್.ಐ.ಆರ್. ದಾಖಲಿಸಿ ತನಿಖೆ ನಡೆಸಿ. ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ,ಬ್ಲಾಕ್ ಮೇಲ್ ಮಾಡಿರುವ ಹಾಗೂ ಬದುಕಿ ಬಾಳಬೇಕಾದ ಯುವಕನ ಆತ್ಮಹತ್ಯೆಗೆ ಕಾರಣರಾದವರ ಮೇಲೆ ಕ್ರಮ ಜರುಗಿಸಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಮತ್ತು ನಾನು ಹೇಳಿದ್ದೆವೆಯೇ ಹೊರತು ಕಾಂಗ್ರೆಸ್ನವರ ಮೇಲೆ ಆರೋಪ ಮಾಡಿಲ್ಲ. ಆತ್ಮಹತ್ಯೆಗೂ ಮುನ್ನ ಸಂತೋಷ ನಾಯ್ಕ ತಾನು ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೇ ಮುಂದೆ ಇಂಥಹ ದೌರ್ಜನ್ಯ ನಡೆಯಬಾರದು. ಆ ಕಾರಣದಿಂದ ಕೆಲವರ ಹೆಸರನ್ನು ಉಲ್ಲೇಖಿಸಿದ್ದಾನೆ. ಅಲ್ಲದೇ ಸಂತೋಷನ ತಂದೆ ವಸಂತ ನಾಯ್ಕ ಅವರ ಮೇಲೆ ದೂರು ನೀಡಿದ್ದಾರೆ. ಆ ಕಾರಣಕ್ಕೆ ಪೊಲೀಸರು ಅವರ ವಿಚಾರಣೆ ನಡೆಸಿರಬಹುದು. ಆರೋಪಿಗಳ ಜೊತೆ ಸಂಬಂಧವಿಲ್ಲದಿದ್ದರೆ ಇವರ ಬಳಿ ಯಾಕೆ ಸಹಾಯ ಕೇಳುತ್ತಿದ್ದರು. ಈ ಪ್ರಕರಣಕ್ಕೆ ಸಂಬಂಧವಿರುವದನ್ನು ಅವರೇ ಒಪ್ಪಿಕೊಂಡಿದ್ದಾರೆ. ಅಲ್ಲದೇ ಕಾಂಗ್ರೆಸ್ ಮುಖಂಡರಾದ ವಸಂತ ನಾಯ್ಕ ಎನ್ನುವವರು ಬೇರೆ ಯಾರಾದರೂ ಇದ್ದರೆ ಹೇಳಲಿ. ವಿಡಿಯೋದಲ್ಲಿ ತನ್ನ ಹೆಸರು ಉಲ್ಲೇಖವಾಗಿದೆ ಅಂತ ಗೊತ್ತಾದ ತಕ್ಷಣ ಪೊಲೀಸರಿಗೆ ದೂರು ನೀಡಬಹುದಿತ್ತಲ್ಲ. ಕೇಸು ಹಾಕುವ ಬೆದರಿಕೆ ತಂತ್ರ ಬಳಸಿ ನಮ್ಮ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಅವರು ಯಾವ ಕೇಸ್ ಹಾಕಿದರೂ ಎದುರಿಸಲು ಸಿದ್ಧ. ಯಾವ ಕೇಸಿಗೂ,ಪೊಲೀಸರಿಗೂ ಹೆದರೋದಿಲ್ಲ ಎಂದರು.
ಈ ಪ್ರಕರಣದಿಂದ ಸಾರ್ವಜನಿಕರು,ಪಾಲಕರು ಭಯಭೀತರಾಗಿದ್ದಾರೆ. ಇಂಥ ಕೆಟ್ಟ ಪ್ರಕರಣ ಮುಂದೆ ಜರುಗಬಾರದು. ಸಾರ್ವಜನಿಕ ಹಿತದೃಷ್ಟಿಯಿಂದ ಭಾರತೀಯ ಜನತಾ ಪಕ್ಷ ಕಾನೂನು ಹೋರಾಟಕ್ಕೂ ಮುಂದಾಗಲಿದೆ. ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರು ಸದ್ಯದಲ್ಲೇ ದೂರು ನೀಡಲಿದ್ದಾರೆ. ಅಪರಾಧ ಯಾರು ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗಲಿ ಎನ್ನುವ ನಿಲುವಿಗೆ ಈಗಲೂ ಬದ್ದ. ಸಮರ್ಪಕವಾದ ರೀತಿಯಲ್ಲಿ ತನಿಖೆ ನಡೆಯದಿದ್ದರೆ ಪ್ರತಿಭಟನೆಯೂ ಸೇರಿದಂತೆ ಎಲ್ಲ ಹೋರಾಟಕ್ಕೂ ಬಿಜೆಪಿ ಸಿದ್ಧವಿದೆ ಎಂದರು. ಬಿಜೆಪಿ ಮಂಡಲ ಅಧ್ಯಕ್ಷ ತಿಮ್ಮಪ್ಪ ಎಂ.ಕೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಪ್ರೇಮಕುಮಾರ ನಾಯ್ಕ ಸೇರಿದಂತೆ ಪಕ್ಷದ ಪದಾಧಿಕಾರಿಗಳು,ಪ್ರಮುಖರು ಇದ್ದರು.
ಸರಕಾರದ ಆದೇಶದ ಪ್ರಕಾರ ಕಾರ್ಯ :
ವಸಂತ ನಾಯ್ಕ ಪಟ್ಟಣ ಪಂಚಾಯತ ವಾಣಿಜ್ಯಮಳಿಗೆ ಹಂಚಿಕೆಯಲ್ಲಿ ಭೃಷ್ಟಾಚಾರ ನಡೆಸಿದ್ದೇನೆ ಎಂದು ತನ್ನ ಮೇಲೆ ಆರೋಪಿಸಿರುವದಕ್ಕೆ ಕೆ.ಜಿ.ನಾಯ್ಕ ವಾಣಿಜ್ಯಮಳಿಗೆ ವಿಲೇವಾರಿ ಕುರಿತು ಸರಕಾರ ಹೊರಡಿಸಿದ ಮಾರ್ಗಸೂಚಿಯ ಸುತ್ತೋಲೆಯನ್ನು ಪತ್ರಕರ್ತರಿಗೆ ನೀಡಿದರು. ತಾನು ಕೇವಲ ಸದಸ್ಯನಾಗಿದ್ದೇನೆ. ಅಧ್ಯಕ್ಷರು,ಮುಖ್ಯಾಧಿಕಾರಿಗಳು ಸರಕಾರದ ಸುತ್ತೋಲೆ ಪ್ರಕಾರ ನಿರ್ವಹಿಸುತ್ತಾರೆಯೇ ಹೊರತು ನಾನಲ್ಲ. ವಾಣಿಜ್ಯ ಮಳಿಗೆ ವಿಲೇವಾರಿ ಮಾರ್ಗಸೂಚಿಯಂತೆ ಪಾರದರ್ಶಕವಾಗಿ ನಡೆದಿದೆ ಎಂದರು.