ದೇಶವನ್ನೇ ತಲ್ಲಣಗೊಳಿಸಿದ ಹೃದಯವಿದ್ರಾವಕ ಘಟನೆ: ಏರುತ್ತಲೇ ಇದೆ ಸಾವಿನ ಸಂಖ್ಯೆ
ಅಹಮದಾಬಾದ್: ಅಹ್ಮದಾಬಾದ್ನ ಸರ್ದಾರ್ ವಲ್ಲಭಬಾಯಿ ಪಟೇಲ್ ವಿಮಾನ ನಿಲ್ದಾಣದಿಂದ ಗುರುವಾರ ಮಧ್ಯಾಹ್ನ ಲಂಡನ್ಗೆ ಪ್ರಯಾಣಿಕರು, ಸಿಬ್ಬಂದಿಗಳನ್ನೊಳಗೊಂಡು 242 ಮಂದಿಯನ್ನು ಹೊತ್ತೊಯ್ದಿದ್ದ ವಿಮಾನವೊಂದು ಟೇಕ್ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡ ದುರ್ಘಟನೆ ಸಂಭವಿಸಿದೆ.
ಬೋಯಿಂಗ್ 787-8 ಡ್ರೀಮ್ ಲೈನರ್ ವಿಮಾನವು ತಾಂತ್ರಿಕ ದೋಷದಿಂದಾಗಿ ಮೇಘಾನಿ ಪ್ರದೇಶದ ಬಿಜೆ ಮೆಡಿಕಲ್ ಕಾಲೇಜ್ನ ಹಾಸ್ಟೆಲ್ಗೆ ಡಿಕ್ಕಿ ಹೊಡೆದು, ಪತನಗೊಂಡಿದ್ದು, ಹಾಸ್ಟೆಲ್ನಲ್ಲಿದ್ದ ಕೆಲ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆಂಬ ಮಾಹಿತಿ ದೊರೆತಿದೆ.
ಇನ್ನು ವಿಮಾನದಲ್ಲಿದ್ದ ಬಹುತೇಕ ಮಂದಿ ಪ್ರಾಣಕಳೆದಿಕೊಂಡಿದ್ದು, ಓರ್ವ ತುರ್ತು ನಿರ್ಗಮನದಿಂದ ಹಾರಿದ ಪರಿಣಾಮ ಸಣ್ಣಪುಟ್ಟ ಗಾಯಗಳಾಗಿ, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಉಳಿದಂತೆ ಸಾವಿನ ನಿಖರವಾದ ಸಂಖ್ಯೆಯ ಮಾಹಿತಿ ತಿಳಿದುಬತಬೇಕಿದೆ.
ಗುಜರಾತ್ ಮಾಜಿ ಮುಖ್ಯಮಂತ್ರಿ ನಿಧನ:
ಪತನಗೊಂಡ ವಿಮಾನದಲ್ಲಿ ಗುಜರಾತಿನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಪ್ರಯಾಣಿಸುತ್ತಿದ್ದರು ಎಬ ಮಾಹಿತಿ ದೊರೆತಿದ್ದು, ಅವರೂ ಕೂಡ ದುರಂತದಲ್ಲಿ ಪ್ರಾಣವನ್ನು ಕಳೆದುಕೊಂಡಿದ್ದಾರೆ.
ಪ್ರಧಾನಿ ಮೋದಿ ಸಂತಾಪ:
ಏರ ಇಂಡಿಯಾ ವಿಮಾನ ದುರಂತಕ್ಕೆ ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿದ್ದು, ತಮ್ಮ ‘X’ ಖಾತೆಯಲ್ಲಿ ‘ಅಹಮದಾಬಾದ್ನಲ್ಲಿ ನಡೆದ ದುರಂತವು ದಿಗ್ಭ್ರಮೆಗೊಳಿಸಿದೆ. ಅತೀವ ದುಃಖಕರವಾಗಿದೆ. ಇದು ಪದಗಳಿಗೆ ಮೀರಿದ ಹೃದಯವಿದ್ರಾವಕ ಘಟನೆಯಾಗಿದೆ. ದುರಂತದಲ್ಲಿ ಒಳಗೊಂಡಿರುವ ಪ್ರತಿಯೊಬ್ಬರ ಬಗ್ಗೆಯೂ ಯೋಚನೆಯಾಗುತ್ತಿದೆ. ಅಲ್ಲಿ ಸಹಾಯ ಮಾಡಲು ನಿಂತಿರುವ ಸಚಿವರು, ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.