ಶಿರಸಿ: ದಿ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿಯ ಪ್ರಧಾನ ಕಛೇರಿಯಲ್ಲಿ ಅಮೇರಿಕಾ ರಾಷ್ಟ್ರದಲ್ಲಿ ಅಡಿಕೆ ಹಾಳೆಯ ಉತ್ಪನ್ನಗಳ ನಿಷೇಧ ಹಿನ್ನೆಲೆಯಲ್ಲಿ ಸಾಧಕ ಬಾಧಕಗಳ ಚಿಂತನಾ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಕೃಷಿ ತಜ್ಞ ಹಾಗೂ ಕರ್ನಾಟಕ ಕೃಷಿ ಭೇಟಿ ಆಯೋಗದ ಮಾಜಿ ಅಧ್ಯಕ್ಷರಾದ ಡಾ.ಟಿ.ಎನ್.ಪ್ರಕಾಶ ಕಮ್ಮರಡಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾಹಿತಿ ವಿನಿಮಯ ಮಾಡಿಕೊಂಡರು. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಸುಪ್ರೀಮ್ ಕೋರ್ಟಿನಲ್ಲಿ ಅಡಿಕೆಯಿಂದ ಕ್ಯಾನ್ಸರ್ ಬರುತ್ತದೆಯೋ ಇಲ್ಲವೋ ಎಂಬ ವಿಚಾರ ಚರ್ಚೆಯಾಗುತ್ತಿದೆ. ಅಡಿಕೆಯಲ್ಲಿರುವ ಆರೋಗ್ಯಕ್ಕೆ ಬೆಂಬಲಿಸುವ ಅಂಶಗಳನ್ನು ನಿರ್ಲಕ್ಷಿಸಿ ಅನವಶ್ಯಕ ಸಮಸ್ಯೆ ಸೃಷ್ಠಿಸುತ್ತಿದ್ದಾರೆ. ಅಡಿಕೆ ಹಾಳೆಗೂ ಸಾಂಸ್ಕೃತಿಕ ಮತ್ತು ವ್ಯಾವಹಾರಿಕ ಮಹತ್ವವಿದ್ದು, ಇದರಿಂದ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮವಿಲ್ಲ ಎಂದು ಸ್ಪಷ್ಟಪಡಿಸಿದರು. ಬಳಸುವವರಿಗೆ ನೀರು ಮತ್ತು ಸಮಯ ಉಳಿಸುವ ಗ್ರಾಹಕ ಮತ್ತು ಪರಿಸರ ಸ್ನೇಹಿ ಉತ್ಪನ್ನಗಳಾಗಿದ್ದು, ಪ್ಲಾಸ್ಟಿಕ್ನಂತೆ ನಿಸರ್ಗದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. ಇಂಥ ರೈತರ ಉತ್ಕೃಷ್ಟ ಉತ್ಪನ್ನ ನಿಷೇಧಿಸುವ ಮೂಲಕ ಅಮೇರಿಕ ಉದ್ಧಟತನ ಪ್ರದರ್ಶಿಸಿದೆ. ವಿಶ್ವ ವ್ಯಾಪಾರ ಒಪ್ಪಂದದ ನೀತಿ ನಿಯಮಗಳ ವಿರುದ್ಧವಾಗಿ ಏಕ ಪಕ್ಷೀಯ ತೀರ್ಮಾನ ಮಾಡಿ ವ್ಯವಹರಿಸುತ್ತಿದೆ. ಇದನ್ನು ನಾವು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಗಮನಕ್ಕೆ ತಂದಿದ್ದೇವೆ. ಕೇಂದ್ರ ವಾಣಿಜ್ಯ ಸಚಿವರಲ್ಲಿ ಮನವಿ ನೀಡಿದ್ದೇವೆ. ದೇಶದ 104 ವಿಜ್ಞಾನಿಗಳ ಅನುಮೋದನೆ ದೊರೆತಿದ್ದು ಸಹಕಾರ ಸಂಘಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ತ್ವರಿತವಾಗಿ ಈ ನಿಟ್ಟಿನಲ್ಲಿ ಕ್ರಮ ಜರುಗಿಸುವಂತೆ ನೋಡಿಕೊಳ್ಳಬೇಕಿದೆ ಎಂದರು.
ಕನಸು ಬಯೋಪೈಟ್ಸ್ ಅಡಿಕೆ ಹಾಳೆ ಉತ್ಪನ್ನಗಳ ಸಂಘದ ಅಧ್ಯಕ್ಷರಾದ ಮಂಜುನಾಥ ಮಾತನಾಡಿ ನೂತನ ಆವಿಷ್ಕಾರಗಳ ಮೂಲಕ ಯಾವುದೇ ರಾಸಾಯನಿಕ ಬಳಸದೇ ಸುಮಾರು 40 ವರ್ಷಗಳಿಂದ ಅಡಿಕೆ ಹಾಳೆ ಉತ್ಪನ್ನಗಳನ್ನು ತಯಾರಿಸಿ 70 ಶೇಕಡಾ ಅಮೇರಿಕಾಗೆ ರಪ್ತು ಮಾಡಲಾಗುತಿದೆ. ಉದ್ಯೋಗ ಸೃಷ್ಟಿಸುವುದರೊಂದಿಗೆ ರೈತರ ಆರ್ಥಿಕತೆಗೆ ಒತ್ತುಕೊಟ್ಟು ತಯಾರಿಸಿರುವ ಈ ಉತ್ಪನ್ನ ಬೇರೆ ರಾಷ್ಟ್ರಗಳಲ್ಲಿ ಬಳಸುತ್ತಿದ್ದರೂ ಅಮೇರಿಕ ತಳೆದ ನೀತಿ ಅವೈಜ್ಞಾನಿಕ ಮತ್ತು ದುರುದ್ದೇಶದಿಂದ ಕೂಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಟಿ.ಎಸ್.ಎಸ್. ನ ಅಧ್ಯಕ್ಷರಾದ ಗೋಪಾಲಕೃಷ್ಣ ವೆಂಕಟ್ರಮಣ ವೈದ್ಯ ಮತ್ತಿಘಟ್ಟ ಪ್ರಾಸ್ತಾವಿಕವಾಗಿ ಮಾತಾನಾಡಿ ಅಡಿಕೆ ಕ್ಯಾನ್ಸರ್ಕಾರಕ ಮತ್ತು ಅಡಿಕೆ ಹಾಳೆಯ ಉತ್ಪನ್ನಗಳು ಅನಾರೋಗ್ಯಕ್ಕೆ ಕಾರಣ ಎಂಬ ವಿಷಯಗಳು ಕೂಲಂಕುಶವಾಗಿ ಪರಿಶೀಲನೆಯಾಗಿ ರೈತರ ಸಮಸ್ಯೆಗಳು ಶೀಘ್ರವಾಗಿ ಬಗೆಹರಿಯಲೆಂದು ಆಗ್ರಹಿಸಿದರು.
ಕಾರ್ಯಾಗಾರದಲ್ಲಿ ವಿಜ್ಞಾನಿ ಶ್ರೀಮತಿ ತೇಜಸ್ವಿನಿ ಪ್ರಕಾಶ್, ಖ್ಯಾತ ಪರಿಸರ ತಜ್ಞ ಮತ್ತು ಬರಹಗಾರ ಶಿವಾನಂದ ಕಳವೆ, ಟಿ.ಎಸ್.ಎಸ್. ನಿರ್ದೇಶಕರು, ಪ್ರಧಾನ ವ್ಯವಸ್ಥಾಪಕರು, ಸದಸ್ಯರು, ಸಿಬ್ಬಂದಿಗಳು ಹಾಗೂ ವಿವಿಧ ಸಹಕಾರ ಸಂಘದ ಪದಾಧಿಕಾರಿಗಳು, ಪತ್ರಕರ್ತರು, ಉಪಸ್ಥಿತರಿದ್ದರು. ಟಿ.ಎಸ್.ಎಸ್. ಸಹಾಯಕ ವ್ಯವಸ್ಥಾಪಕ ಗೋಪಾಲ ಹೆಗಡೆ ಕಾರ್ಯಕ್ರಮ ನಿರೂಪಣೆ ನೆರವೇರಿಸಿದರು.