ಪ್ರಕೃತಿಯ ಮಡಿಲಲ್ಲಿ ಅಹೋರಾತ್ರಿ ಹಿಂದುಸ್ಥಾನಿ ಶಾಸ್ತ್ರೀಯ ರಾಗ ಸಂಗೀತೋತ್ಸವ
ಶಿರಸಿ : ಶಿರಸಿ ಸಿದ್ದಾಪುರದ ಗಡಿ ಭಾಗದಲ್ಲಿರುವ ಗಿಳಿಗುಂಡಿಯಲ್ಲಿ ಮೇ.31 ರಂದು ಮುಂಜಾನೆಯಿಂದ ತಡರಾತ್ರಿಯವರೆಗೆ ನಡೆದ ಸ್ವರ ಸಂವೇದನಾ ಪ್ರತಿಷ್ಠಾನದ ಆಯೋಜಿತ ಹಿಂದುಸ್ಥಾನಿ ಶಾಸ್ತ್ರೀಯ ರಾಗ ಸಂಗೀತೋತ್ಸವ ನಾದಸಿರಿ, ದೇಶದ ಶ್ರೇಷ್ಠ ಕಲಾವಿದರ ಹಾಗೂ ಯುವ ಕಲಾವಿದರ ಸಮ್ಮಿಲನದೊಂದಿಗೆ ನೂರಾರು ಸಂಗೀತಾಸಕ್ತರ ಸಮಕ್ಷಮದಲ್ಲಿ ಸಂಗೀತ ವೈಭವಕ್ಕೆ ಸಾಕ್ಷಿಯಾಯಿತು.
ಮುಂಜಾನೆ 8 ಘಂಟೆಯಿಂದ, ದೇಶದ ಪ್ರಖ್ಯಾತ ಗಾಯಕರಾದ ಪುಣೆಯ ಪಂ. ಉದಯ ಭಾವಲ್ಕರ್ ರವರು ಪ್ರಾಚೀನ ಸಂಗೀತ ಪ್ರಕಾರವಾದ ದ್ರುಪದ್ ಗಾಯನವನ್ನು ಪ್ರಸ್ತುತಪಡಿಸಿದರು. ಪ್ರತಾಪ್ ಅವಥ್ ಪಕ್ಕವಾದ್ಯದಲ್ಲಿ ಸಹಕರಿಸಿದರು. ವಿಸ್ತಾರ ರಾಗಾಲಾಪದೊಂದಿಗೆ, ಪಖ್ವಾಜದ ತಾಳದ ಪೆಟ್ಟುಗಳಿಗೆ ಮೇಲೈಸಿ ಪ್ರಸ್ತುತಗೊಳ್ಳುತ್ತಿದ್ದ ಗಾಯನ, ಧ್ಯಾನಸ್ಥ ಪ್ರೇಕ್ಷಕರಿಗೆ ವಿಶಿಷ್ಠ ಅನುಭೂತಿಯನ್ನು ನೀಡಿತು. ನಂತರ ಗಿಳಿಗುಂಡಿಯ ಗುರುಪ್ರಸಾದ ಹೆಗಡೆ ಯವರಿಂದ ವಿರಳ ವಾದ್ಯವಾದ ಸಾರಂಗಿಯ ಪ್ರಸ್ತುತಿ ಮಹೇಶ್ ಹೆಗಡೆಯವರ ಸಮರ್ಥ ತಬಲಾ ಸಹಕಾರದೊಂದಿಗೆ ಕೇಳುಗರ ಮನ ಗೆದ್ದಿತು. ಮುಂಜಾನೆಯ ಪ್ರಹರದ ಅಂತ್ಯದಲ್ಲಿ ಮುಂಬೈಯ ಯುವ ಗಾಯಕಿ ಪ್ರಿಯಾ ಪುರುಷೋತ್ತಮ ಅವರಿಂದ ಗಾಯನ ಕಾರ್ಯಕ್ರಮ ನಡೆಯಿತು. ಇವರಿಗೆ ಮುಂಬೈಯ ಸೃಷಿಲ್ ಭೀಸೆ ತಬಲಾ ಸಾಥ್ ಹಾಗೂ ಭರತ್ ಹೆಗಡೆ, ಹೆಬ್ಬಲಸು ಸಂವಾದಿನಿಯಲ್ಲಿ ಸಹಕಾರ ನೀಡಿದರು.
ಮಧ್ಯಾಹ್ನದ ಪ್ರಹರದ ಆರಂಭದಲ್ಲಿ ರಾಜ್ಯದ ಯುವ ಕಲಾವಿದರಾದ ಬೆಂಗಳೂರಿನ ಕೌಶಿಕ್ ಐತಾಳ್ ಅವರಿಂದ ರಾಗ್ ಮುಲ್ತಾನಿ ಯೊಂದಿಗೆ ಶಾಸ್ತ್ರೀಯ ಗಾಯನ ನಡೆಯಿತು. ತಬಲಾದಲ್ಲಿ ಭಾರವಿ ದೇರಾಜೆ, ಸುರತ್ಕಲ್ ಹಾಗೂ ಭರತ್ ಹೆಗಡೆ, ಹೆಬ್ಬಲಸು ಸಂವಾದಿನಿಯಲ್ಲಿ ಸಹಕಾರ ನೀಡಿದರು. ನಂತರ ಪದ್ಮ ವಿಭೂಷಣ ಪಂ. ರಾಮ್ ನಾರಾಯಣ್ ರವರ ಪರಂಪರೆಯ ಯುವ ಕಲಾವಿದರಾದ ಮುಂಬೈಯ ಹರ್ಷ ನಾರಾಯಣ್ ರವರಿಂದ ಸಾರಂಗೀಯ ಪ್ರಸ್ತುತಿ, ಮುಂಬೈಯ ಸೃಷ್ಟಿಲ್ ಭೀಸೆಯವರ ತಬಲಾ ಸಾಥ್ ನೊಂದಿಗೆ ನಡೆಯಿತು. ಮುಸ್ಸಂಜೆಯ ರಾಗವಾದ ಪೂರಿಯಾ ಧನಶ್ರೀಯ ಸುಂದರ ಪ್ರಸ್ತುತಿ ಶ್ರೋತೃಗಳ ಮನಸೂರೆಗೊಂಡಿತು. ನಂತರ ಕೋಲ್ಕತ್ತಾದ, ಗ್ವಾಲಿಯರ್ ಘರಾಣೆಯ ಈ ತರುವಾಯದ ಶ್ರೇಷ್ಠ ಯುವ ಗಾಯಕರಲ್ಲೊಬ್ಬರಾದ ಓಂಕಾರ್ ದಾದರ್ಕರ್ ರವರು ರಾಗ್ ಪುರಿಯಾ ದೊಂದಿಗೆ ಗಾಯನ ಪ್ರಾರಂಭಿಸಿ, ರಾಗ್ ಹಮೀರ್ ಹಾಗೂ ರಾಗ್ ಬಹಾರ್ ಗಳ ಅದ್ಭುತ ಬಂದಿತಗಳ ಸಂಯೋಜನೆಗಳನ್ನು ಪ್ರಸ್ತುತ ಪಡಿಸಿದರು. ಪುಣೆಯ ಪಂ. ಭರತ್ ಕಾಮತ್ ರವರ ತಬಲಾ ಸಹಕಾರ ಹಾಗೂ ಗುರುಪ್ರಸಾದ್ ಹೆಗಡೆಯವರ ಸಂವಾದಿನಿಯ ಅಮೋಘ ಸಹಕಾರ ಗಾಯನಕ್ಕೆ ಮೆರುಗು ನೀಡಿ, ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಯಿತು.
ವಿಶ್ವಪ್ರಸಿದ್ದ ಕೊಳಲು ವಾದಕರಾದ ಪಂ. ಹರಿಪ್ರಸಾದ್ ಚೌರಾಸಿಯಾ ಪರಂಪರೆಯ ಮೇರು ಕೊಳಲು ವಾದಕರಾದ, ಪಂ. ರಾಕೇಶ್ ಚೌರಾಸಿಯಾ ರವರಿಂದ ರಾಗ ಜಿಂಜೋಟಿ, ಚಂದ್ರಕೌಂಸ್ ಹಾಗೂ ಪಹಾಡಿ ಧುನ್ ಳ ಸುಂದರ ಬಾನ್ಸುರಿ ವಾದನ ನಡೆಯಿತು. ಇವರಿಗೆ ದೇಶದ ಶ್ರೇಷ್ಠ ತಬಲಾ ವಾದಕರಾದ ಪಂ. ಯೋಗೇಶ್ ಸಂಶಿ ಯವರು ತಬಲಾ ಸಹಕಾರ ನೀಡಿದರು. ಕಾಡುಮಧ್ಯದಲ್ಲಿರುವ ಒಂದು ಚಿಕ್ಕ ಗ್ರಾಮದಲ್ಲಿ ಇಷ್ಟೊಂದು ಉನ್ನತ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸುವುದು ಆಶ್ಚರ್ಯಕರ ಎಂದು ದಿಗ್ಗಜದ್ವಯರು ಪ್ರತಿಷ್ಠಾನವನ್ನು ಅಭಿನಂದಿಸಿದರು. ಕರ್ನಾಟಕದ ಹಿರಿಯ ಕಲಾವಿದರಾದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಕರ್ನಾಟಕ ಕಲಾಶ್ರೀ ಪಂ. ವಿನಾಯಕ ತೋರ್ವಿ ಯವರ ಗಾಯನದೊಂದಿಗೆ ಸಂಗೀತೋತ್ಸವವು ಸಮಾಪ್ತಿಗೊಂಡಿತು. ಪುಣೆಯ ಪಂ. ಭರತ್ ಕಾಮತ್ ರವರ ತಬಲಾ ಸಹಕಾರ ಹಾಗೂ ಗುರುಪ್ರಸಾದ್ ಹೆಗಡೆಯವರು ಸಂವಾದಿನಿಯಲ್ಲಿ ಸಹಕರಿಸಿದರು.
ಪಂ. ಎಂ. ಪಿ. ಹೆಗಡೆ ಪಡಿಗೆರೆ, ವಿದುಷಿ, ಶುಭದಾ ಪರಾಡ್ಕರ್,. ಎಂ. ಕೆ. ಹೆಗಡೆ ಧಾರವಾಡ, ಮುಂತಾದ ಗಣ್ಯ ವ್ಯಕ್ತಿಗಳು ಸೇರಿದಂತೆ 500 ಕ್ಕೂ ಹೆಚ್ಚು ಸಂಗೀತಾಸಕ್ತರು ಕಾರ್ಯಕ್ರಮದುದ್ದಕ್ಕೂ ಉಪಸ್ಥಿತರಿದ್ದರು. ಪ್ರತಿಷ್ಠಾನದ ಅಧ್ಯಕ್ಷರಾದ ರಾಜಾರಾಮ ಹೆಗಡೆ, ಬಿಳಿಕಲ್ ರವರು, ಸಂಗೀತೋತ್ಸವದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಅಭಿವಂದಿಸಿದರು.