ದಾಂಡೇಲಿ : ನಗರ ಸಭೆಯ ನೀರು ಸರಬರಾಜು ವಿಭಾಗದಿಂದ ನೀರು ಪೂರೈಕೆಯಾಗಿಲ್ಲ ಎಂದು ನಗರದ ಹಳಿಯಾಳ ರಸ್ತೆಯಲ್ಲಿ ಸಾರ್ವಜನಿಕರಿಗೆ ಹಾಗೂ ಸುಗಮ ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿದ 10 ಜನರ ಮೇಲೆ ದಾಂಡೇಲಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಬಗ್ಗೆ ನಗರ ಪೊಲೀಸ್ ಠಾಣೆಯಿಂದ ಸೋಮವಾರ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ.
ಕುಡಿಯುವ ನೀರು ಪೂರೈಕೆಯಾಗಿಲ್ಲ ಎಂದು ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿ ಕದಡುವ ಉದ್ದೇಶದಿಂದ ಕಾನೂನು ಬಾಹಿರವಾದ ಅಕ್ರಮ ಕೂಟ ಕಟ್ಟಿಕೊಂಡು ಭಾನುವಾರ ರಾತ್ರಿ 10 ಗಂಟೆಯಿಂದ 11 ಗಂಟೆಯ ನಡುವಿನ ಅವಧಿಯಲ್ಲಿ ನಗರದ ಹಳಿಯಾಳ ರಸ್ತೆಯ ನೂರ್ ಮಸೀದಿ ಕಮಾನಿನ ಹತ್ತಿರ ರಸ್ತೆಯ ಮಧ್ಯದಲ್ಲಿ ಸಿಮೆಂಟ್ ಚೀಲದಲ್ಲಿ ಜಲ್ಲಿ ತುಂಬಿ ಮತ್ತು ಸ್ಕೂಟಿಯನ್ನು ಅಡ್ಡಲಾಗಿ ನಿಲ್ಲಿಸಿಟ್ಟು ರಸ್ತೆಯ ಮಧ್ಯದಲ್ಲಿ ಕುಳಿತು ಘೋಷಣೆಗಳನ್ನು ಕೂಗುತ್ತಾ ಆ ರಸ್ತೆಯಲ್ಲಿ ಹೋಗಿ ಬರುವ ಸಾರ್ವಜನಿಕರಿಗೆ ಹಾಗೂ ಸುಗಮ ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಯನ್ನು ಹಾಳು ಮಾಡಿದ್ದಾರೆಂದು ಸ್ವತಃ ಪಿಎಸ್ಐ ಅಮೀನ್ ಅತ್ತಾರ್ ಅವರು ಸರಕಾರದ ಪರವಾಗಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಗರಸಭಾ ಸದಸ್ಯೆ ಪ್ರೀತಿ ನಾಯರ್, ಮಾಜಿ ನಗರಸಭಾ ಸದಸ್ಯ ಉದಯ ನಾಯರ್, ಸ್ಥಳೀಯ ನಿವಾಸಿಗಳಾದ ಮಂಜುನಾಥ್ ಪಂತೋಜಿ, ಪ್ರವೀಣ್ ಕೊಠಾರಿ, ಜಮೀಲ್ ಮಕ್ತುಂ ಸಾಬ್ ಸವಣಗಿ, ಸಂತೋಷ ತೇರದಾಳ, ಸದ್ದಾಂ ಬಾಳೆಕುಂದ್ರಿ, ಸಂಜು ಕಲಾಲ, ಅಬ್ಬಾಸ್ ಉಡುಪಿ, ಶಿವಾನಂದ ಗಗರಿ ಹಾಗೂ ಇನ್ನೂ ಕೆಲವರ ಮೇಲೆ ದೂರು ದಾಖಲಿಸಲಾಗಿದೆ ಎಂದು ನಗರ ಪೊಲೀಸ್ ಠಾಣೆ ಮಾಧ್ಯಮಕ್ಕೆ ನೀಡಿದ ಮಾಹಿತಿಯಲ್ಲಿ ತಿಳಿಸಿದೆ.