ಕೃಷಿ ಜಯಂತಿ ಸಮಾರೋಪ ಕಾರ್ಯಕ್ರಮ: ಕೃಷಿ ಸಾಧಕರಿಗೆ ಸನ್ಮಾನ
ಶಿರಸಿ: ಕೃಷಿಯಲ್ಲಿ ಉದಾಸೀನತೆ ದೂರಮಾಡಿಕೊಂಡು ಕೃಷಿ ಕ್ಷೇತ್ರದ ಸಾಧನೆ ಇನ್ನಷ್ಟು ಹೆಚ್ಚಬೇಕು ಎಂದು ಸ್ವರ್ಣವಲ್ಲೀಯ ಶ್ರೀಮದ್ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ಅವರು ಭಾನುವಾರ ಸ್ವರ್ಣವಲ್ಲೀ ಮಠದ ಸುಧರ್ಮಾ ಸಭಾಂಗಣದಲ್ಲಿ ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನ ಸೋಂದಾ, ಟಿಎಸ್.ಎಸ್, ಟಿಎಂಎಸ್, ಗ್ರಾಮಾಭ್ಯುದಯ , ಜಾಗೃತ ವೇದಿಕೆ ಸೋಂದಾ ಆಶ್ರಯದಲ್ಲಿ ಹಮ್ಮಿಕೊಂಡ ಕೃಷಿ ಜಯಂತಿಯ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ, ಮಾತನಾಡಿದರು.
ಪೌಷ್ಠಿಕಾಂಶ ನೀಡುವ ಬಗ್ಗೆ ಉದಾಸೀನತೆ ಎಲೆಚುಕ್ಕೆ ರೋಗಕ್ಕೆ ಕಾರಣ. ಮಣ್ಣಿಗೆ ಪೋಷಕಾಂಶಗಳನ್ನು ನೀಡದಿದ್ದರೆ ಭೂಮಿ ಬರಡಾಗುತ್ತದೆ. ನಿರಂತರ ಕೃಷಿಯ ಬಗ್ಗೆ ಗಮನವಹಿಸಿ, ನಿರಂತರ ಪ್ರಯತ್ನ ಮಾಡಬೇಕು. ಮಲೆನಾಡು ಭಾಗದ ರೈತರಿಗೆ ಬೆಟ್ಟಗಳ ವಿಷಯದಲ್ಲಿ ಕಾನೂನು ತೊಡಕಾಗುತ್ತಿದ್ದು, ಬೆಟ್ಟಗಳನ್ನು ಉತ್ಪನ್ನಗಳನ್ನು ತೋಟಕ್ಕೆ ಬಳಕೆ ಮಾಡಿಕೊಂಡು ರೋಗ ಬಾರದಂತೆ ನೋಡಿಕೊಳ್ಳಬೇಕು. ಕೃಷಿಕರು ಮಣ್ಣಿನ ಪರೀಕ್ಷೆ ಮಾಡದೇ ಗೊಬ್ಬರದ ನಿರ್ಣಯ ಮಾಡಬಾರದು. ಮಣ್ಣಿನ ಆರೋಗ್ಯ ಕಾಪಾಡುವುದು ಮುಖ್ಯ. ಜೈವಿಕ ಗೊಬ್ಬರಕ್ಕೆ ಹೆಚ್ಚು ಮಹತ್ವ ನೀಡಬೇಕು. ಪ್ರಮುಖ ವಾಣಿಜ್ಯ ಬೇಸಾಯವಾದ ಯಾಲಕ್ಕಿ ಕೃಷಿಯಿಂದ ಇಂದು ವಿಮುಖರಾಗುತ್ತಿದ್ದೇವೆ. ಮಿಶ್ರ ಬೆಳೆ ಕೃಷಿಯ ಬಗ್ಗೆಯೂ ಆಸಕ್ತಿ ಮೂಡಿಸಿಕೊಳ್ಳಬೇಕು ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿ, ಭಗವಂತನ ಸರ್ವ ವ್ಯಾಪಕತೆ, ತೇಜಸ್ಸು, ಭಕ್ತ ವಾತ್ಸಲ್ಯ ನಮ್ಮ ಸ್ಮೃತಿಗೆ ತರುವ ದಿನ ನೃಸಿಂಹ ಜಯಂತಿ. ಭಕ್ತನೊಬ್ಬನಿಗೇ ಅವತರಿಸಿ ಬಂದವನು ನೃಸಿಂಹ ದೇವರು ಎಂದರು.
ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕ ಮಾತನಾಡಿ,ಕೃಷಿಯಲ್ಲಿ ಅನೇಕ ಸಾಧಕರು ನಮ್ಮ ನಡುವೆ ಇದ್ದಾರೆ. ಆದರೆ ಹಲವು ಸವಾಲುಗಳಿದ್ದು, ಅದನ್ನು ಎದುರಿಸಲು ಶಕ್ತಿ ತುಂಬುವುದು ಕೃಷಿ ಜಯಂತಿಯ ಉದ್ದೇಶವಾಗಿದೆ. ಬೆಲೆಗಳಿಗೆ ಉತ್ತಮ ದರ ಸಿಗಬೇಕು. ಕೃಷಿ ಯಂತ್ರೋಪಕರಣಗಳು ಕಡಿಮೆ ದರದಲ್ಲಿ ದೊರೆಯಬೇಕು. ರಾಸಾಯನಿಕಗಳ ಬಳಕೆಯಿಂದ ಆರೋಗ್ಯ ಮೇಲೆ ಉಂಟಾಗುವ ಸಮಸ್ಯೆ ನಾವು ಕಾಣುತ್ತಿದ್ದೇವೆ. ಸಾವಯುವ ಗೊಬ್ಬರಕ್ಕೆ ಆದ್ಯತೆ ನೀಡಬೇಕಿದೆ. ದೇಶದಲ್ಲಿ ಮೊದಲು ಶೇ.೭೦ ರಷ್ಟು ಕೃಷಿಕರಿದ್ದು, ಈಗ ಕೃಷಿಕರ ವೇಗವಾಗಿ ಕಡಿಮೆಯಾಗಿದೆ. ಕೃಷಿ ಗೌರವ ಸ್ಥಾನ ಎಂಬುದನ್ನು ನಾವೆಲ್ಲರೂ ಹೇಳಬೇಕಿದೆ ಎಂದರು.
ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಹಾಗೂ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಮಾತನಾಡಿ, ಕೃಷಿ ಪರಂಪರೆಯಿಂದ ಬಂದವರು ನಾವು. ಹಾಲಿನ ಉತ್ಪಾದನೆಯಲ್ಲಿ ಕೂಡ ಹೆಚ್ಚಳವಾಗಿದೆ. ಕಾಲಚಕ್ರ ತಿರುಗುತ್ತಿದೆ. ಕೃಷಿಗೆ ವಾಪಸ್ ಬರುತ್ತಿದ್ದಾರೆ. ತಾಯಂದಿರೂ ಹೈನುಗಾರಿಕೆಗೆ ಬರುತ್ತಿದ್ದಾರೆ. ಮಕ್ಕಳು ಜಮೀನು ಮಾರಾಟ ಮಾಡಬೇಡ ಎನ್ನುವ ಸ್ಥಿತಿ ಬಂದಿದೆ. ಹಳ್ಳಿ ಸಾಧಕ ಕೃಷಿಕನಿಗೂ ಹೆಣ್ಣು ಕೊಡುವ ಕಾಲ ಬರಲಿದೆ ಎಂದರು.
ವಿಚಾರಗೋಷ್ಠಿಯ ನಿರ್ಣಯಗಳನ್ನು ಡಾ.ಜಿ.ವಿ.ಹೆಗಡೆ ಹುಳಗೋಳ ಮಂಡಿಸಿದರು. ಶ್ರೀಮಠದ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ನಳ್ಳಿ, ಕಾರ್ಯದರ್ಶಿ ಜಿ.ವಿ.ಹೆಗಡೆ ಗೊಡವೆಮನೆ ಉಪಸ್ಥಿತರಿದ್ದರು. ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆರ್.ಎನ್.ಹೆಗಡೆ ಉಳ್ಳೀಕೊಪ್ಪ ಸ್ವಾಗತಿಸಿದರು. ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನದ ಕಾರ್ಯದರ್ಶಿ ಸುರೇಶ ಹೆಗಡೆ ಹಕ್ಕಿಮನೆ ನಿರೂಪಿಸಿದರು.
ಕೋಟ್:
ಕೃಷಿಕರು ಮಣ್ಣಿನ ಪರೀಕ್ಷೆ ಮಾಡದೇ ಗೊಬ್ಬರ ಕೊಡುವ ನಿರ್ಧಾರಕ್ಕೆ ಬರಬಾರದು. ಮಣ್ಣು ಆರೋಗ್ಯ ಸರಿಯಾಗಿದ್ದರೆ ಕೃಷಿ ಚೆನ್ನಾಗಿರುತ್ತದೆ.
-ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ
ಕೋಟ್:
ಧರ್ಮ ಸಾಧನೆಗೆ ಶರೀರ ಅವಶ್ಯಕ. ಶರೀರ ರಕ್ಷಣೆಗೆ ಧಾನ್ಯ ಕಾರಣ. ಈ ಆಹಾರ ಕೃಷಿಮೂಲದಿಂದ ಬರಲಿದೆ. ಧರ್ಮ ಸಾಧನೆಗೆ ಕೃಷಿ ಕೂಡ ಒಂದು ಸಾಧನ.
-ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ
ಕೋಟ್:
ತಾಯಿಯ ಪ್ರೀತಿಯನ್ನು ಸ್ವರ್ಣವಲ್ಲೀ ಮಠದ ಶ್ರೀಗಳು ನಮಗೆ ನೀಡಿ, ಪ್ರೋತ್ಸಾಹಿಸುತ್ತಿದ್ದಾರೆ. ಅದವರ ಮಾರ್ಗದರ್ಶನದಿಂದ ಕೃಷಿಯಲ್ಲಿ ಯುವಕರು ಆಸಕ್ತಿ ಮೂಡಿಸಿಕೊಳ್ಳಬೇಕು.
-ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ
ಬಾಕ್ಸ್
ಬಾಕ್ಸ್:
ಉತ್ತಮ ಕೃಷಿಕ(ಕೃಷಿ ಕಂಠೀರವ)- ಮಹೇಶ ಚಂದ್ರಶೇಖರ ಹೆಗಡೆ ಅರಗಿನಮನೆ
ಸಾಧಕ ಕೃಷಿ ಮಹಿಳೆ-ವೀಣಾ ಮಹಾಬಲೇಶ್ವರ ಹೆಗಡೆ ಹೆಬ್ಳೆಮನೆ
ಸಾಧಕ ಕೃಷಿ ಪೂರಕ ಸಂಸ್ಥೆ- ಪ್ರಗತಿ ಮಿತ್ರ ರೈತ ಉತ್ಪಾದಕ ಕಂಪನಿ ಬಾಳೆಗದ್ದೆ
ಸಾಧಕ ಕೃಷಿ ಕುಶಲಕರ್ಮಿ-ಗಣಪತಿ ಭೈರವೇಶ್ವರ ಭಟ್ಟ ಕಲ್ಲೇಮನೆ, ಅಚವೆ, ಮಹಾಬಲೇಶ್ವರ ಅನಂತ ಹೆಗಡೆ ಮೆಣಸುಮನೆ ವಾನಳ್ಳಿ
ಉತ್ತಮ ಬೆಟ್ಟ ನಿರ್ವಹಣಾ ಪ್ರಶಸ್ತಿ ಪುರಸ್ಕೃತರು ಪ್ರಥಮ-ಗಣಪತಿ ವೆಂಕಟರಮಣ ಹೆಗಡೆ ಎಮ್ಮೆನಹೋಂಡಾ,
ದ್ವಿತೀಯ- ಬಿ.ಜಿ.ಹೆಗಡೆ ಹೆಗಡೆ ಮತ್ತು ಎನ್.ಜಿ.ಹೆಗಡೆ ಗೇರಾಳ,
ದ್ವಿತೀಯ-ಸುಬ್ರಾಯ ಗಜಾನನ ಹೆಗಡೆ ಊರತೋಟ.
ಶತಾಯುಷಿ ವಿಶೇಷ ಪ್ರಶಸ್ತಿ- ಶ್ರೀಕೃಷ್ಣ ಜಯದೇವರಾವ್ ಕಲ್ಗುಂಡಿಕೊಪ್ಪ.