ಕಾರವಾರ: ಜಿಲ್ಲೆಯಲ್ಲಿ ಘಟಿಸುವ ಎಲ್ಲಾ ಜನನ, ಮರಣ ಘಟನೆಗಳು ವಿಳಂಬವಾಗದಂತೆ 21 ದಿನದೊಳಗಾಗಿ ನೋಂದಾಯಿಸಲು ಕ್ರಮವಹಿಸುವಂತೆ ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಸೂಚಿಸಿದರು.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜನನ, ಮರಣ ನೋಂದಣಿ ಕುರಿತು ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜನನ, ಮರಣ ನೋಂದಣಿ ಕುರಿತು ಎದುರಾಗುವ ತಿದ್ದುಪಡಿಗಳನ್ನು, ಸರಿಯಾಗಿ ಪರಿಶೀಲಿಸಿ ನೋಂದಣಿ ಮಾಡುವುದು. ನೋಂದಣಿ ಸಂದರ್ಭದಲ್ಲಿ ಜನನ, ಮರಣ ದಿನಾಂಕವನ್ನು ತಪ್ಪಿಲ್ಲದಂತೆ ನಮೂದಿಸುವುದು, ತಾಂತ್ರಿಕ ಮತ್ತು ಆಡಳಿತಾತ್ಮಕ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.
2024 ಜುಲೈದಿಂದ ಗ್ರಾಮ ಪಂಚಾಯತ ಕಾರ್ಯದರ್ಶಿಗಳನ್ನು ಜನನ, ಮರಣ ಉಪನೋಂದಣಾಧಿಕಾರಿಗಳನ್ನಾಗಿ ನೇಮಿಸಲಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿನ ಸಾರ್ವಜನಿಕರು ಪಂಚಾಯತ ಕೇಂದ್ರಗಳಲ್ಲಿ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳುವ ಬಗ್ಗೆ ಪ್ರಚಾರ ಕಾರ್ಯ ಕೈಗೊಳ್ಳುವಂತೆ ತಿಳಿಸಿದ ಅವರು, ಪ್ರತಿ ತಿಂಗಳು ತಾಲೂಕಾ ಮಟ್ಟದ ಜನನ, ಮರಣ ಸಮನ್ವಯ ಸಮಿತಿ ಸಭೆ ನಡೆಸಲು ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸೋಮಶೇಖರ್ ಮೇಸ್ತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವಿರೂಪಾಕ್ಷಗೌಡ ಪಾಟೀಲ್, ನಗರ ಸಭೆ ಪೌರಯುಕ್ತ ಜಗದೀಶ್ ಹುಲಗಜ್ಜಿ ಮತ್ತಿತರರು ಇದ್ದರು.