ಶಿರಸಿ: ನೂತನ ಆಸ್ಪತ್ರೆ ಕಟ್ಟಡ ಕಾಮಗಾರಿ ಮುಗಿಯುತ್ತಿದ್ದಂತೆಯೇ ಆಸ್ಪತ್ರೆಗೆ ಬೇಕಾದ ಎಲ್ಲ ಸೌಲಭ್ಯಗಳೂ ಬರಲಿದೆ. ಎಮ್.ಆರ್.ಐ., ಸಿಟಿ ಸ್ಕಾನ್ ಸೇರಿದಂತೆ ಎಲ್ಲಾ ಸೌಲಭ್ಯ ವ್ಯವಸ್ಥೆಯ ನಂತರವೇ ಆಸ್ಪತ್ರೆಯ ಉದ್ಘಾಟನೆ ಮಾಡಲಾಗುತ್ತದೆ ಎಂದು ಭೀಮಣ್ಣ ನಾಯ್ಕ ಹೇಳಿದ್ದಾರೆ.
ಭಾನುವಾರ ನಗರದ ಹೋಟೆಲ್ ಸುಪ್ರಿಯಾ ಇಂಟರ್ನ್ಯಾಷನಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಸ್ಪೀಕರ್ ಆಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಶ್ರಮದಿಂದ ಆರಂಭವಾಗಿದ್ದ ಆಸ್ಪತ್ರೆ ನಿರ್ಮಾಣ ಕಾಮಗಾರಿ ನಂತರದಲ್ಲಿ ಅನುದಾನದ ಹಣ ಬಾರದೇ ನಿಧಾನಗತಿಯಲ್ಲಿ ಸಾಗಿತ್ತು. ಹೊಸ ಆಸತ್ರೆಗೆ ಬೇಕಾದ ವೈದ್ಯಕೀಯ ಉಪಕರಣಕ್ಕೆ ಮೆಡಿಕಲ್ ಟೆಕ್ನಿಕಲ್ ಟೀಂ ನೀಡುವ ವರದಿ ಆಧರಿಸಿ ಹಣ ಬಿಡುಗಡೆ ಆಗಲಿದೆ. ಹಣ ಎಷ್ಟೇ ಬೇಕಾದರೂ ಸರಕಾರ ಒದಗಿಸಲು ಸಿದ್ದ. ವೈದ್ಯಕೀಯ ಸಲಕರಣೆಗಳ ಜೊತೆ ತಜ್ಞ ವೈದ್ಯರನ್ನೂ ಜೋಡಿಸಿಕೊಳ್ಳಬೇಕಾಗುತ್ತದೆ ಎಂದರು.
ಯಾರಿಗೆ ಯಾರು 5-6 ಕೋಟಿ ಪ್ರಸ್ತಾವನೆ ಎಂಬ ಮಾಹಿತಿ ನೀಡಿದ್ದಾರೆ ಗೊತ್ತಿಲ್ಲ, ಆದರೆ ಹಿಂದೆ ಪ್ರಸ್ತಾಪಿತ ಆಸ್ಪತ್ರೆ ಪೂರ್ಣ ಪ್ರಮಾಣದಲ್ಲಿ ನಡೆಸಲು ಬೇಕಾದ ಸೌಲಭ್ಯ ಒದಗಿಸಲಾಗುತ್ತದೆ. ಕೆಲವು ಕಾಮಗಾರಿ ನಡೆಸಲು ಸಮಯ ಬೇಕಾಗುತ್ತದೆ. ಕೇಂದ್ರ ಸರಕಾರದ ಹಾವೇರಿ, ಕುಮಟಾ ಮಾರ್ಗಗಳು ಸಾಕ್ಷಿ. ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಎಂದು ಮನವಿ ಮಾಡಿದರು. ಆಸತ್ರೆಯ ಕುರಿತು ಆರೋಗ್ಯ ಸಚಿವ ದಿನೇಶ ಗುಂಡುರಾವ್, ಹಿರಿಯ ಅಧಿಕಾರಿಗಳ ಜೊತೆಗೂ ಸಾಕಷ್ಟು ಸಲ ಚರ್ಚೆ ಮಾಡಲಾಗಿದೆ. ಸಂಪೂರ್ಣ ಸೌಲಭ್ಯ, ವೈದ್ಯರನ್ನು ನೀಡಿಯೇ ಆರಂಭಿಸೋಣ ಎಂದಿದ್ದಾರೆ ಎಂದರು.
ಇನ್ನು ಬೇಸಿಗೆಕಾಲ ಆರಂಭವಾಗುತ್ತಿದ್ದು, ಬಿಸಿಲಿನ ಝಳಕ್ಕೆ ನೀರಿನ ಸಮಸ್ಯೆಗಳು ಬಾರದಂತೆ ಎಚ್ಚರ ವಹಿಸಬೇಕಾಗಿದೆ. ಸಿದ್ದಾಪುರದಲ್ಲಿ ಹೊಸೂರು ಡ್ಯಾಮಿಗೆ 15 ಕೋಟಿ ರೂಪಾಯಿ ಹಣ, ಜೋಗದಿಂದ ನೀರು ತರಲು 58 ಕೋ. ರೂ. ಹಣ ಮಂಜೂರಿ ಆಗಿದೆ. ಸಿದ್ದಾಪುರಕ್ಕೆ ಪ್ರತಿ ದಿನ ನೀರು ಕೊಡಬೇಕು ಎಂಬುದು ಆಶಯವಾಗಿದೆ ಎಂದರು.
ಶಾಸಕನಾಗಿ ಎರಡು ವರ್ಷ ಪೂರೈಸುತ್ತಿದ್ದು, ಕಾಂಗ್ರೆಸ್ ಸರ್ಕಾರ ಚುನಾವಣೆ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆಯೇ ಐದು ಗ್ಯಾರಂಟಿ ಯೋಜನೆಗಳನ್ನು ನೀಡಲಾಗಿದೆ. ಯಾವುದೇ ಆರೋಪ ಇಲ್ಲದಂತೆ ರಾಜ್ಯದಲ್ಲಿ ಅಭಿವೃದ್ಧಿ ನಡೆಯುತ್ತಿದೆ. ಅದೇ ರೀತಿ ಶಿರಸಿ ಸಿದ್ದಾಪುರ ಕ್ಷೇತ್ರದಲ್ಲಿ ಶಿಕ್ಷಣ ಹಾಗೂ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಿದ್ದಾಗಿ ಹೇಳಿದರು.
ಶಿರಸಿ ಸಂಚಾರಿ ಪೊಲೀಸ್ ಠಾಣೆಯನ್ನು ಗೃಹ ಸಚಿವರು ಆಗಮಿಸಿ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಹೆಗಡೆ ಹೊಸಬಾಳೆ, ಜಿಲ್ಲಾ ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷ ಸತೀಶ ನಾಯ್ಕ, ಕೆಪಿಸಿಸಿ ಸದಸ್ಯ ದೀಪಕ ಹೆಗಡೆ ದೊಡ್ಡೂರು, ಶಿರಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ, ಉಪಾಧ್ಯಕ್ಷ ಗಣೇಶ ದಾವಣಗೆರೆ ಹಾಗೂ ಪ್ರಮುಖರಾದ ರಮೇಶ ದುಭಾಶಿ, ಅಪೂರ್ವ ನಾಯ್ಕ, ದೇವರಾಜ ಮರಾಠಿ ಇದ್ದರು.