–ಮುಕ್ತಾ ಹೆಗಡೆ
ಉತ್ತರ ಕನ್ನಡದ ನೆಲವು ಅನೇಕ ಮುತ್ತುಗಳನ್ನು ರಾಜ್ಯಕ್ಕೆ, ದೇಶಕ್ಕೆ ನೀಡಿದೆ. ಅಂತಹ ಮುತ್ತುಗಳಲ್ಲಿ ಒಬ್ಬರು ನಾವು ಇತ್ತೀಚೆಗಷ್ಟೇ ಕಳೆದುಕೊಂಡ ನಮ್ಮ ಪ್ರೀತಿಯ ಸುಕ್ರಜ್ಜಿಯುವರು.
ಪದ್ಮಶ್ರೀ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡು ಪೂರ್ಣ ದೇಶವೇ ತಮ್ಮತ್ತ ನೋಡುವಂತೆ ಮಾಡಿದ್ದ ಸುಕ್ರಿ ಬೊಮ್ಮ ಗೌಡ ಅವರು ೧೯೪೦ರಲ್ಲಿ ಉತ್ತರ ಕನ್ನಡದ ಅಂಕೋಲಾದ ಹಳ್ಳಿಯಾದ ಶಿರ್ಕುಲದಲ್ಲಿ ಸುಬ್ಬಗೌಡ ಮತ್ತು ದೇವಿಯವರ ಮಗಳಾಗಿ ಜನಿಸಿದರು. ಕೃಷಿ ಕೆಲಸಗಳನ್ನು ಮಾಡುತ್ತಾ ಜೀವನ ನಡೆಸುತ್ತಿದ್ದ ಇವರು ಬಾಲ್ಯದಿಂದಲೂ ಜಾನಪದ ಹಾಡುಗಳನ್ನು ಗುನುಗುತ್ತಾ ಬೆಳೆದವರು.
‘ಕನ್ನಡದ ಅಸ್ಮಿತೆ’ಯಾದ ಜನಪದವನ್ನು ಉಳಿಸುವಲ್ಲಿ ಇವರ ಪಾತ್ರ ದೊಡ್ಡದು. ಜಾನಪದ ನೃತ್ಯ ಪ್ರಕಾರಗಳಾದ ಪಗಡೆ, ಬಿದರಂಟೆ, ತಾರ್ಲೆ ಮುಂತಾದವುಗಳನ್ನು ಇವರು ಊರಿನ ಅನೇಕ ಮಕ್ಕಳಿಗೆ ಕಲಿಸಿ ನೃತ್ಯ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ರವಾನಿಸಿದ್ದಾರೆ. ಮಾದೇವರಾಯ, ಚಂದನರಾಯ, ರಾಮಲಕ್ಷ್ಮಣ, ಐರಾವತ ಎಂಬ ಕವನ ಕಥನಗಳು ಮತ್ತು ಬಲೀಂದ್ರ ರಾಯ, ಗೋವಿಂದ ರಾಯ ಕರಿದೇವರು ಎಂಬ ಮಹಾ ಕಥನಗಳು ಮರೆಯಾಗದಂತೆ ಕಾಪಾಡಿದ್ದಾರೆ. ತಮ್ಮ ತಂಡದವರ ಜೊತೆ ಸೇರಿ ಸೋಬಾನೆ ಹಾಡುಗಳನ್ನು ಹಾಡಿ, ಸುಗ್ಗಿ ಕುಣಿತವನ್ನು ಕುಣಿದು ತಮ್ಮ ಊರು ಅಂಕೋಲೆಯನ್ನು ಇನ್ನಷ್ಟು ಶ್ರೀಮಂತವನ್ನಾಗಿಸಿದ್ದಾರೆ.
ಇವರ ಈ ಕಲಾಪ್ರೇಮವನನ್ನು ಗಮನಿಸಿದ ರಾಜ್ಯ, ಕೇಂದ್ರ ಸರ್ಕಾರ ಮತ್ತು ಹಲವು ಸಂಘ-ಸಂಸ್ಥೆಗಳು ಇವರಿಗೆ ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದಾರೆ. ೧೯೮೮ ರಲ್ಲಿ ‘ಕರ್ನಾಟಕ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ’, ೧೯೯೮ರಲ್ಲಿ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’, ‘ಜಾನಪದ ಶ್ರೀ ಪ್ರಶಸ್ತಿ’, ನಾಡೋಜ ಪ್ರಶಸ್ತಿ ಮತ್ತು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇಷ್ಟೇ ಅಲ್ಲದೇ ಮಧ್ಯಪಾನದ ವಿರುದ್ಧ ಹೋರಾಟ ನಡೆಸಿದ ಇವರು ಊರಿನ ಅನೇಕರಿಗೆ ಕುಡಿತದ ಚಟದಿಂದ ಬಿಡಿಸಲು ಮತ್ತು ಮದ್ಯದಂಗಡಿಗಳನ್ನು ಮುಚ್ಚಿಸಲು ಯಶಸ್ವಿಯಾಗಿದ್ದಾರೆ. ನಾಟಿ ವೈದ್ಯರಾಗಿ ಅನೇಕ ಕಾಡಿನ ಗಿಡಮೂಲಿಕೆಗಳಿಂದ ಅನೇಕ ಔಷಧೋಪಚಾರವನ್ನು ಮಾಡಿದ್ದಾರೆ. ಹೆಮ್ಮೆಯ ಇನ್ನೊಂದು ವಿಷಯವೇನೆಂದರೆ ಎಂಟನೇ ತರಗತಿಯ ಕನ್ನಡ ಪಠ್ಯವೊಂದರಲ್ಲಿ ನಾವು ಸುಕ್ರಜ್ಜಿಯ ಪಾಠವೊಂದನ್ನು ಕಾಣಬಹುದು.
ಹೂವೊಂದು ಬಾಡಿ ಹೋಗುವಂತೆ ಸುಕ್ರಜ್ಜಿಯೂ ವಯೋ ಸಹಜ ಕಾಯಿಲೆಯಿಂದ ಮರಣವನ್ನಪ್ಪಿದಳು. ನಮ್ಮ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎನ್ನುವುದಕ್ಕೆ ಸುಕ್ರಜ್ಜಿ ಒಂದು ಮೇರು ಆದರ್ಶವೇ ಹೌದು.