ಸಿದ್ದಾಪುರ: ತಾಲೂಕಿನ ಗೊಂಟನಾಳ (ಕಲ್ಮನೆ) ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ರಜತ ಮಹೋತ್ಸವವನ್ನು ಸ್ಥಳೀಯ ಜನತೆ ಊರಿನ ಹಬ್ಬದಂತೆ ಶನಿವಾರ ಆಚರಿಸಿ ಸಂಭ್ರಮಿಸಿದರು.
ಸಿದ್ದಾಪುರ ತಾಲೂಕಿನ ಗ್ರಾಮೀಣ ಭಾಗದ ಪುಟ್ಟ ಊರಾದ ಗೊಂಟನಾಳ (ಕಲ್ಮನೆ)ದಲ್ಲಿ 1999ರಲ್ಲಿ ಸ್ಥಾಪನೆಗೊಂಡ ಶಾಲೆ ಇದಾಗಿದ್ದು ಇಲ್ಲಿ ಕಲಿತ ವಿದ್ಯಾರ್ಥಿಗಳು ದೇಶ ವಿದೇಶದಲ್ಲಿ ಉದ್ಯೋಗದಲ್ಲಿರುವುದಲ್ಲದೇ ಉತ್ತಮ ಕೃಷಿಕರು, ಸಂಘಟಕರು, ಯಕ್ಷಗಾನಕಲಾವಿದರು ಈ ಊರಿನಲ್ಲಿರುವುದು ವಿಶೇಷವಾಗಿದೆ.
ಬಿದ್ರಕಾನ ಗ್ರಾಪಂ ಅಧ್ಯಕ್ಷೆ ಸರೋಜಾ ಡಿ.ನಾಯ್ಕ ರಜತಮಹೋತ್ಸವ ಉದ್ಘಾಟಿಸಿ ಊರಿನವರ ಸಂಘಟನೆ ಹಾಗೂ ಶಿಕ್ಷಣಾಭಿಮಾನದ ಕುರಿತು ಮೆಚ್ಚುಗೆವ್ಯಕ್ತಪಡಿಸಿದರು. ಎಸ್ಡಿಎಂಸಿ ಅಧ್ಯಕ್ಷ ಅಶೋಕ ಜಿ.ಗೌಡ ಅಧ್ಯಕ್ಷತೆವಹಿಸಿದ್ದರು.
ರಜತಮಹೋತ್ಸವ ಗೌರವಾಧ್ಯಕ್ಷ ವೆಂಕಟರಮಣ ವಿ.ಹೆಗಡೆ ಗೊಂಟನಾಳ ಚಿಣ್ಣರ ಚಿತ್ತಾರ ಹಸ್ತಪ್ರತಿ ಬಿಡುಗಡೆಮಾಡಿದರು. ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರನ್ನು, ಎಸ್ಡಿಎಂಸಿ ಅಧ್ಯಕ್ಷರನ್ನು, ಅಂಗನವಾಡಿ ಶಿಕ್ಷಕಿಯರನ್ನು, ಯಕ್ಷಗುರು ಶಶಿಕಲಾ ಸುಬ್ರಾಯ ಹೆಗಡೆ ದೇವಣಗದ್ದೆ ಹಾಗೂ ಶಾಲೆಯ ಅಭಿವೃದ್ಧಿಗೆ ಸಹಕರಿಸಿದವರನ್ನು ಗೌರವಿಸಲಾಯಿತು.
ಶಾಲೆಯ ಹಳೆಯ ವಿದ್ಯಾರ್ಥಿ ರಂಜೀತ ಚಿಕ್ಕು ದೇವಾಡಿಗ ಶಾಲೆಗೆ 25ಸಾವಿರ ರೂ ಮೌಲ್ಯದ ಕಂಪ್ಯೂಟರನ್ನು ದೇಣಿಗೆಯಾಗಿ ನೀಡಿದರು.
ಗ್ರಾಪಂ ಸದಸ್ಯೆ ಮಮತಾ ಚನ್ನಯ್ಯ, ಜಯಂತ ಹೆಗಡೆ ಕಲ್ಲಾರೆಮನೆ, ಶಾಮಲಾ ಗೌಡ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ಹೆಗಡೆ, ಕಾರ್ಯದರ್ಶಿ ಗುರುರಾಜ ನಾಯ್ಕ, ನಮೃತಾ ಪೈ, ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ರಮೇಶ ಹಾರ್ಸಿಮನೆ, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮಹೇಶ ಎಂ.ನಾಯ್ಕ ಇತರರು ಉಪಸ್ಥಿತರಿದ್ದರು.
ಶಾಲೆಯ ಸಂಸ್ಥಾಪಕ ಅಧ್ಯಕ್ಷ ಅನಂತ ಹೆಗಡೆ ಗೊಂಟನಾಳ ಪ್ರಾಸ್ತಾವಿಕ ಮಾತನಾಡಿದರು. ಹೇಮಂತ ಸ್ವಾಗತಿಸಿದರು. ಮುಖ್ಯಶಿಕ್ಷಕ ಮನೋಹರ ವರದಿ ವಾಚಿಸಿದರು. ಗೀತಾ ಶ್ರೀಧರ, ಶಿಲ್ಪಾ , ವಿನಯ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು.
ವಿದ್ಯಾರ್ಥಿಗಳಿಂದ ಮನರಂಜನಾ ಕರ್ಯಕ್ರಮ, ಊರಿನ ಮಕ್ಕಳಿಂದ ಹಾಗೂ ಊರಿನ ಆಯ್ದ ಕಲಾವಿದರಿಂದ ಯಕ್ಷಗಾನ ಪ್ರದರ್ಶನಗೊಂಡು ಮೆಚ್ಚುಗೆಗಳಿಸಿದರು.