ಕಾರವಾರ: ಸವಿತಾ ಸಮಾಜವು ಎಲ್ಲ ವರ್ಗದ ಜನರಿಗೂ ಯಾವುದೇ ಭೇದ ಭಾವವಿಲ್ಲದೇ ಸೇವೆ ಮಾಡುವ ಮನೋಭಾವವನ್ನು ಮೈಗೂಡಿಸಿಕೊಂಡಿದ್ದು, ಈ ಸಮಾಜವು ತಮ್ಮ ವೃತ್ತಿಯ ಜೊತೆಯಲ್ಲಿ ಆರ್ಯವೇದ, ವೈದ್ಯಕೀಯ ಮತು ಔಷದೋಪಚಾರದಂತಹ ಸೇವೆಗಳನ್ನು ಮಾಡುತ್ತಿದ್ದು, ಸವಿತಾ ಮಹರ್ಷಿಗಳು ಸಂಗೀತ, ಸಾಹಿತ್ಯ ಮತ್ತು ಆರ್ಯವೇದದ ಪಂಡಿತರಾಗಿದ್ದರು ಎಂದು ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಹೇಳಿದರು.
ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರೀ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಸವಿತಾ ಮಹರ್ಷಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಪ್ರಪಂಚದಲ್ಲಿ ಹಳೆಯದಾದ ಭಾರತದ ಸನಾತನ ಧರ್ಮದ ಕಾಲಘಟ್ಟದ ಮಾರ್ಕಂಡೆ ಮಹರ್ಷಿ, ದೂರ್ವಾಸ ಮಹರ್ಷಿಗಳ ಸಮಕಾಲೀನರಾಗಿದ್ದ ಸವಿತಾ ಮಹರ್ಷಿ ಗಳು, ಚತುರ್ವೇದದಲ್ಲಿ ಒಂದಾದ ಸಾಮವೇದವನ್ನು ರಚಿಸಿದವರು. ಇವರ ಮಗಳಾದ ಗಾಯತ್ರಿ ದೇವಿಯು ಗಾಯಿತ್ರಿ ಮಂತ್ರ ರಚಿಸಿದ್ದಾರೆ. ಸ್ವಾತಂತ್ರ್ಯದ ಪೂರ್ವದಲ್ಲಿ ಬ್ರಿಟೀಷರಿಂದ ಶೋಷಣೆಗೆ ಒಳಗಾಗಿ ಎಲ್ಲಾ ಸಮಾಜಗಳು ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ಧಾರ್ಮಿಕ, ಶೈಕ್ಷಣಿಕ, ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ಈ ಸಮಾಜಕ್ಕಾಗಿ ಸರ್ಕಾರ ಕೂಡ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.
ನಿವೃತ್ತ ಪ್ರಾಚಾರ್ಯ ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ, ನಾಮ ನಿರ್ದೇಶಿತ ಸಿಂಡಿಕೇಟ್ ಸದಸ್ಯ ಶಿವಾನಂದ ವಿ. ನಾಯ್ಕ ಸವಿತಾ ಮಹರ್ಷಿ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಜಗತ್ತಿನ ಕಣ್ಣನ್ನು ತೆರೆಸಿದ ವ್ಯಕ್ತಿಗಳಲ್ಲಿ ಸವಿತಾ ಮಹರ್ಷಿ ಒಬ್ಬರಾಗಿದ್ದಾರೆ. ಇವರು ಶಿವನ ದಿವ್ಯ ದೃಷ್ಠಿಯಿಂದ ಜನ್ಮ ತಾಳಿದ್ದಾರೆ. ಸವಿತಾ ಮಹರ್ಷಿಗಳು ಒಂದೇ ಸಮಾಜಕ್ಕೆ ಮಾತ್ರ ಸೀಮಿತವಾಗದೇ ಮನು ಕುಲದ ಅಭಿವೃದ್ಧಿಗೆ ಶ್ರಮಿಸಿದವರು. ಸಮಾಜದಲ್ಲಿ ಮಾನವೀಯ ಮೌಲ್ಯವನ್ನು ಬೆಳಸಿಕೊಂಡು ಯಾವ ರೀತಿ ಬದುಕಬೇಕು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟವರು. ಇಂತಹ ಅನೇಕ ಮಹಾನ್ ವ್ಯಕ್ತಿಗಳ ವಿಚಾರಧಾರೆಗಳು, ತತ್ವಗಳು, ಚಿಂತನೆಗಳನ್ನು ಎಲ್ಲರೂ ಅಳವಡಿಸಿಕೊಂಡು ದೇಶದ ಅಭಿವೃದ್ಧಿಗೆ ಹಾಗೂ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ಎಂ. ನಾಯ್ಕ, ಸಮುದಾಯದ ಮುಖಡರು, ಸರಸ್ವತಿ ವಿದ್ಯಾ ಮಂದಿರದ ಶಾಲಾ ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.