ಜೋಯಿಡಾ: ತಾಲೂಕಿನ ಹಾಗೂ ಉತ್ತರ ಕರ್ನಾಟಕ ಭಾಗದ ಜನರ ಪ್ರಸಿದ್ದ ಜಾತ್ರೆಗಳಲ್ಲಿ ಒಂದಾದ ಶ್ರೀ ಉಳವಿ ಚೆನ್ನಬಸವಣ್ಣನ ಜಾತ್ರೆ ಫೆ. 4 ರಿಂದ ಪ್ರಾರಂಭವಾಗಿ ಫೆ. 15 ರವರೆಗೆ ನಡೆಯಲಿದ್ದು ಫೆ. 13 ರಂದು ಮಹಾ ರಥೋತ್ಸವ ಜರುಗಲಿದೆ. ಜಾತ್ರೆಯಲ್ಲಿ ಸಂಪೂರ್ಣವಾಗಿ ಸಾರಾಯಿ ಮತ್ತು ಪ್ಲಾಸ್ಟಿಕ್ ನಿಷೇಧ ಮಾಡಲಾಗಿದೆ ಎಂದು ಉಳವಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಸಂಜಯ ಕಿತ್ತೂರ ಉಳವಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಟ್ರಸ್ಟ್ ಕಮಿಟಿ ಉಪಾಧ್ಯಕ್ಷ ಪ್ರಕಾಶ ಕಿತ್ತೂರ ಮಾತನಾಡಿ ರಥೋತ್ಸವದ ದಿನ ಕರ್ನಾಟಕ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಶಾಸಕರಾದ ಆರ್.ವಿ.ದೇಶಪಾಂಡೆ, ವಿಧಾನ ಪರಿಷತ್ ಸದಸ್ಯರಾದ ಗಣಪತಿ ಉಳ್ವೇಕರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ತಾಲೂಕಾ ಆಡಳಿತದ ಅಧಿಕಾರಿ ವರ್ಗದವರು ಭಾಗವಹಿಸಲಿದ್ದಾರೆ, ಜಾತ್ರೆಗೆ ಬರುವ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಉಳವಿ ಪಂಚಾಯತ ಮತ್ತು ನಮ್ಮ ಟ್ರಸ್ಟ್ ಕಮಿಟಿವತಿಯಿಂದ ಮಾಡಲಾಗಿದೆ, ಮುಖ್ಯವಾಗಿ ಜಾತ್ರೆಗೆ ಹೆಚ್ಚಿನ ವಾಹನಗಳು ಬರುವುದರಿಂದ ಕಡಗರ್ಣಿ ಮೈದಾನ ಮತ್ತು ಉಳವಿ ಗದ್ದೆಯಲ್ಲಿ ವಾಹನದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ವಾಹನಗಳಿಗೆ ಮುಖ್ಯವಾಗಿ ಟ್ರಾಕ್ಟರ್ಗಳಿಗೆ ರೆಡಿಯಮ್ ಬಳಸಬೇಕು. ಅಲ್ಲಲ್ಲಿ ತಾತ್ಕಾಲಿಕ ಶೌಚಾಲಯ ನಿರ್ಮಾಣ ಮಾಡಲಾಗುತ್ತದೆ. ಜಾತ್ರೆಯಲ್ಲಿ ಯಾರು ಬೆಲೆಬಾಳುವ ಬಂಗಾರ ಹಾಗೂ ಇನ್ನಿತರ ವಸ್ತುಗಳನ್ನು ಧರಿಸಿ ಬರಬೇಡಿ. ದೇವಸ್ಥಾನದ ಆವರಣ ಮತ್ತು ಅಗತ್ಯವಿದ್ದಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಲಾಗಿದೆ. ಎಲ್ಲರೂ ಪರಿಸರ ರಕ್ಷಣೆ ಮಾಡಬೇಕು. ಕಾಡಿನಲ್ಲಿ ಬೆಂಕಿ ಹಾಗೂ ಪ್ಲಾಸ್ಟಿಕ್ ಹಾಕುವ ಕೆಲಸ ಮಾಡಬಾರದು. ಚಕ್ಕಡಿಗಾಡಿಗಳು ನಿಧಾನವಾಗಿ ಬರಬೇಕು. ಅರಣ್ಯ ಇಲಾಖೆ ಮತ್ತು ಪೋಲಿಸ್ ಇಲಾಖೆ ಸಹಕಾರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಉಳವಿ ಗ್ರಾಮ ಪಂಚಾಯತ ಅಧ್ಯಕ್ಷ ಮಂಜುನಾಥ ಮೋಕಾಶಿ, ಟ್ರಸ್ಟ್ ಕಮಿಟಿ ಸದಸ್ಯ ವಿರೇಶ್ ಕಂಬಳಿ, ಪ್ರಧಾನ ಅರ್ಚಕ ಕಲ್ಮಠ ಶಾಸ್ತ್ರಿ ಇದ್ದರು.