ಸಿದ್ದಾಪುರ: ಮಾನವೀಯ ಮೌಲ್ಯಗಳನ್ನೇ ಮೈಗೂಡಿಸಿಕೊಂಡಿರುವ ದಕ್ಷ, ಪ್ರಾಮಾಣಿಕ ಅಧಿಕಾರಿ ಯಲ್ಲಾಪುರ ತಾಲೂಕಿನ ಮಂಚಿಕೇರಿ ವಲಯ ಅರಣ್ಯಾಧಿಕಾರಿಗಳಾಗಿರುವ ಬಸವರಾಜ ಬೋಚಳ್ಳಿ ತಮ್ಮ ಮಗಳು ಲಾಸ್ಯರವರ ಜನ್ಮದಿನವನ್ನು ತಮ್ಮ ಪತ್ನಿ ಚೈತನ್ಯ, ಮಕ್ಕಳು, ತಂದೆ ತಾಯಿ ಬಂಧುಗಳು, ಸ್ನೇಹಿತರ ಜೊತೆ ಸೇರಿ ತಾಲೂಕಿನ ಮುಗದೂರಿನಲ್ಲಿರುವ ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮದಲ್ಲಿ ವಿಶೇಷವಾಗಿ ಆಚರಿಸಿಕೊಂಡರು.
72 ಜನ ಆಶ್ರಮ ವಾಸಿಗಳಿಗೆ ಹೊಸ ಬಟ್ಟೆ, ಉತ್ತಮ ಗುಣಮಟ್ಟದ ಸ್ಟೀಲ್ ಬಟ್ಟಲು – ಲೋಟ, ಹಾಗೂ ಊಟದ ವ್ಯವಸ್ಥೆ ಮಾಡುವ ಮೂಲಕ ತಮ್ಮ ಪತ್ನಿ ಚೈತನ್ಯ, ಮಕ್ಕಳು, ತಮ್ಮ ತಂದೆ – ತಾಯಿ, ಬಂಧುಗಳು, ಸ್ನೇಹಿತರ ಜೊತೆ ಸೇರಿ ಆಶ್ರಮಕ್ಕೆ ಆಗಮಿಸಿ ಆಶ್ರಮವಾಸಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ, ಎಲ್ಲರಿಗೂ ಕೇಕ್ ಹಾಗೂ ಸಿಹಿ ಹಂಚಿ ಆಶ್ರಮವಾಸಿಗಳ ಜೊತೆ ಸಮಯ ಕಳೆಯುವ ಮೂಲಕ ತಮ್ಮ ಮಗಳ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಸಿದ್ದಾಪುರ ವಲಯ ಅರಣ್ಯಾಧಿಕಾರಿ ಅಜಯಕುಮಾರ್ ಎಮ್.ಎಸ್. ಹಾಗೂ ವಾಲ್ಮೀಕಿ ಗ್ಯಾಸ್ ಎಜೆನ್ಸಿಯ ಮುಖ್ಯಸ್ಥರಾದ ಮಂಜುನಾಥ ವಾಲ್ಮೀಕಿ, ಆಶ್ರಮದ ಮುಖ್ಯಸ್ಥರಾದ ನಾಗರಾಜ ನಾಯ್ಕ ಮತ್ತು ಮಮತಾ ನಾಯ್ಕ ದಂಪತಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಇವತ್ತಿನ ದಿನಮಾನಗಳಲ್ಲಿ ಮೋಜು ಮಸ್ತಿ ಮಾಡಿ ಅಥವಾ ಲಕ್ಷಾಂತರ ರೂಪಾಯಿ ದುಂದುವೆಚ್ಚ ಮಾಡಿ ಜನ್ಮದಿನಗಳನ್ನು ಆಚರಿಸಿಕೊಳ್ಳುವ ಜನರ ಮಧ್ಯೆ ಅನಾಥಾಶ್ರಮಕ್ಕೆ ಸಹಾಯ ನೀಡಿ ಆಶ್ರಮವಾಸಿಗಳ ಜೊತೆ ತಮ್ಮ ಮಗಳ ಜನ್ಮದಿನವನ್ನು ಆಚರಿಸಿ ಜನ್ಮದಿನವನ್ನು ಅರ್ಥಪೂರ್ಣವಾಗಿಸಿದ ಬಸವರಾಜ ಬೋಚಳ್ಳಿರವರ ಕಾರ್ಯ ಎಲ್ಲರೂ ಅನುಸರಿಸಿದರೆ ಅನಾಥ ನೊಂದ ಜೀವಗಳಿಗೆ ಸಂತಸ ನೀಡುವ ಜೊತೆಗೆ ಸಮಾಜದಲ್ಲಿ ಮನುಷ್ಯತ್ವ ಮಾನವೀಯತೆ ಜೀವಂತವಾಗಿರಿಸಬಹುದು ಎಂದು ಆಶ್ರಮದ ಮುಖ್ಯಸ್ಥರಾದ ನಾಗರಾಜ ನಾಯ್ಕ ಅಭಿಪ್ರಾಯ ವ್ಯಕ್ತಪಡಿಸಿದರು. ಹಾಗೂ ಆಶ್ರಮದಲ್ಲಿ ತಮ್ಮ ಮಗಳ ಜನ್ಮದಿನವನ್ನು ಆಚರಿಸಿದ ಬಸವರಾಜ ಬೋಚಳ್ಳಿ ರವರಿಗೆ ಆಶ್ರಮ ವಾಸಿಗಳ ಪರವಾಗಿ ಡಾ. ನಾಗರಾಜ ನಾಯ್ಕ ಹಾಗೂ ಮಮತಾ ನಾಯ್ಕ ದಂಪತಿಗಳು ಅಭಿನಂದನೆಗಳನ್ನು ತಿಳಿಸಿದರು.