ದಾಂಡೇಲಿ : ಪಲ್ಪ್ ಮತ್ತು ಪೇಪರ್ ಉದ್ದಿಮೆಗಳಲ್ಲಿ ಕನಿಷ್ಠ ವೇತನ ಹೆಚ್ಚಳವಾಗದೆ ಇರುವುದರಿಂದ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಪಲ್ಪ್ ಮತ್ತು ಪೇಪರ್ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರ ಕನಿಷ್ಠ ವೇತನವನ್ನು ಹೆಚ್ಚಳ ಮಾಡಲೇಬೇಕೆಂದು ಆಗ್ರಹಿಸಿ ದಾಂಡೇಲಿ ಕಾರ್ಮಿಕರ ಸಂಘದಿಂದ ನಗರದ ಕಾರ್ಮಿಕ ನಿರೀಕ್ಷಕರ ಕಾರ್ಯಾಲಯದ ಮುಂಭಾಗದಲ್ಲಿ ಮಂಗಳವಾರ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳಕ್ಕಾಗಿ ಹಮ್ಮಿಕೊಂಡಿರುವ ಉಪವಾಸ ಸತ್ಯಾಗ್ರಹದಲ್ಲಿ ದಾಂಡೇಲಿ ಕಾರ್ಮಿಕರ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಕಾರ್ಮಿಕರು ಭಾಗವಹಿಸಿ, ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಯಲ್ಲಾಪುರ ಕಾರ್ಮಿಕ ಉಪ ವಿಭಾಗದ ಕಾರ್ಮಿಕ ಅಧಿಕಾರಿ ಮತ್ತು ಕಾರ್ಮಿಕ ನಿರೀಕ್ಷಕರಾದ ಲಕ್ಷ್ಮೀಬಾಯಿ ಲಾಯದಗುಂಡಿ ಅವರು ಭೇಟಿ ನೀಡಿ ಉಪವಾಸ ಸತ್ಯಾಗ್ರಹ ನಿರತರ ಜೊತೆ ಮಾತುಕತೆಯನ್ನು ನಡೆಸಿದರು. ಇದೇ ಸಂದರ್ಭದಲ್ಲಿ ಕನಿಷ್ಠ ವೇತನ ಹೆಚ್ಚಳಕ್ಕಾಗಿ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಹಾಗೂ ಕಾರ್ಮಿಕ ಸಚಿವರಿಗೆ ಬರೆದ ಮನವಿಯನ್ನು ಕಾರ್ಮಿಕ ಅಧಿಕಾರಿಗಳ ಮೂಲಕ ನೀಡಲಾಯಿತು.
ಈ ಸಂದರ್ಭದಲ್ಲಿ ದಾಂಡೇಲಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಸಾಬ ಕೇಸನೂರು, ಸಂಘದ ಕಾರ್ಯಾಧ್ಯಕ್ಷರಾದ ಎಸ್.ಎಸ್.ಪೂಜಾರ, ಉಪಾಧ್ಯಕ್ಷರಾದ ಶರಣಪ್ಪ ಬಾಗಲಿ, ಸಂಘದ ಪ್ರಮುಖರುಗಳಾದ ಶಿವಪ್ಪ ಹರಿಜನ, ಸುಭಾಷ ಮಿಶಾಳೆ, ಬಾಬು, ಶಿವಪ್ಪ.ಎಚ್, ಯಲ್ಲಪ್ಪ ಹಾಗೂ ಸಂಘದ ಸದಸ್ಯರು ಮತ್ತು ಕಾರ್ಮಿಕರು ಉಪಸ್ಥಿತರಿದ್ದರು.