ಅಂಕೋಲಾ: ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸತತ ಪ್ರಯತ್ನದಿಂದಾಗಿ ಜಿಲ್ಲೆಯ ರೈತರ ಖಾತೆಗಳಿಗೆ ಕಳೆದ ಆರೇಂಟು ತಿಂಗಳ ಹಿಂದೆ ಜಮಾ ಆಗಬೇಕಿದ್ದ ಬೆಳೆ ವಿಮೆ ತಡವಾಗಿ ಆದರೂ ಜಮಾ ಆಗುತ್ತಿರುವುದು ಸಂತಸ ತಂದಿದೆ ಎಂದು ರಾಮನಗುಳಿ ಗ್ರೂಪ್ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಸಂಘದ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.
ಈ ಹಣವು 2024 ಅಕ್ಟೋಬರ್ ತಿಂಗಳಲ್ಲಿ ಜಮೆ ಆಗಬೇಕಾಗಿತ್ತು. 2023-24 ರ ಹವಾಮಾನ ಆಧಾರಿತ ಬೆಳೆ ವಿಮಾ ಪರಿಹಾರ ವಿತರಣೆಯಲ್ಲಿ ವಿಳಂಬ ಉಂಟಾಗಿತ್ತು. ರಾಜ್ಯ ಸರ್ಕಾರವು ಮಳೆ ಮಾಪನ ಯಂತ್ರಗಳ ನಿರ್ವಹಣೆಯನ್ನು ಸರಿಯಾಗಿ ಮಾಡದಿರುವ ಕಾರಣದಿಂದಾಗಿ ಈ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಂಸದ ಕಾಗೇರಿಯವರ ಪ್ರಯತ್ನದಿಂದ ಕೇಂದ್ರ ಸರ್ಕಾರವು ಮೂರು ಬಾರಿ ಹಣ ಬಿಡುಗಡೆಗೆ ಆದೇಶಿಸಿದ್ದರೂ, ವಿಮಾ ಕಂಪನಿ ವಿಳಂಬ ಮಾಡುತ್ತಿತ್ತು. ಇದೀಗ ಕೇಂದ್ರದ ಸ್ಪಷ್ಟ ಸೂಚನೆಯಿಂದ ಬಾಕಿ ಹಣ ಬಿಡುಗಡೆಯಾಗಿದ್ದು ರೈತರ ಖಾತೆ ಗಳಿಗೆ ಜಮಾ ಆಗುತ್ತಿದೆ. ವಿಮಾ ಹಣ ಬಿಡುಗಡೆಗೆ ಸಹಕರಿಸಿದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜೀ, ಕೇಂದ್ರ ಕೃಷಿ ಸಚಿವ, ಶಿವರಾಜ ಸಿಂಗ್ ಚೌಹಾಣ್, ಸಂಸದ ಕಾಗೇರಿ ಹಾಗೂ ಎಲ್ಲ ಅಧಿಕಾರಿಗಳಿಗೆ ಧನ್ಯವಾದಗಳು. ವಿಮಾ ಕಂಪನಿಯವರು ರೈತರ ಖಾತೆಗಳಿಗೆ ಹಣ ಜಮಾ ಮಾಡದೇ ಇರುವ ಸಂದರ್ಭದಲ್ಲಿ ನಮ್ಮ ಸಂಸತ್ ಸದಸ್ಯರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಕೇಂದ್ರ ಸರಕಾರದಿಂದ ವಿಮಾ ಕಂಪನಿಗಳಿಗೆ ನಿರ್ದೇಶನ ನೀಡುವಂತೆ ಮಾಡಿ ರೈತರಿಗೆ ನ್ಯಾಯ ಒದಗಿಸಿದ್ದಾರೆ. ಕಳೆದ ವರ್ಷ ಹೆಚ್ಚು ಮಳೆ ಆಗಿದ್ದರಿಂದ ಬೆಳೆಗೆ ಕೊಳೆ ರೋಗದಿಂದ ದೊಡ್ಡ ಪ್ರಮಾಣದಲ್ಲಿ ಹಾಳಾಗಿ ರೈತರು ಕಷ್ಟ ದಲ್ಲಿ ಇದ್ದರು. ಈಗ ಬೆಳೆ ವಿಮೆ ಜಮೆ ಆಗಿರುವುದರಿಂದ ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ. ಅಂಕೋಲಾ ತಾಲೂಕು ರೈತರ ಪರವಾಗಿ
ಹಾಗೂ ರಾಮನಗುಳಿ ಗ್ರೂಪ್ ಸೇವಾ ಸಹಕಾರಿ ಸಂಘದ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ.
ಬೆಳೆ ವಿಮೆ ಜಮಾ ಆಗದಿರುವ ಸಂದರ್ಭದಲ್ಲಿ ರೈತರಿಗೆ ಆಗಿರುವ ಅನ್ಯಾಯದ ವಿರುದ್ಧ ಜಿಲ್ಲಾ ಮಧ್ಯವರ್ತಿ ಕೆಡಿಸಿಸಿ ಬ್ಯಾಂಕ್ ಶಿರಸಿ ಅವರು ಸಂದರ್ಭ ಬಂದರೆ ಈ ಬಗ್ಗೆ ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದು ಧೈರ್ಯ ಹೇಳಿದ್ದು, ರೈತರ ಅಡಿಕೆ ಮಾರಾಟ ಸಂಸ್ಥೆ ಟಿ.ಎಸ್.ಎಸ್ ಅವರು ಸಹ ಅಡಿಕೆಯನ್ನೇ ನಂಬಿ ಬದುಕುತ್ತಿರುವ ರೈತರ ಪರವಾಗಿ ನಿಲ್ಲುತ್ತೇವೆ ಎಂದು ರೈತರ ಬೆಂಬಲಕ್ಕೆ ನಿಂತಿದ್ದರು. ಅವರನ್ನು ಸಹ ರೈತರ ಪರವಾಗಿ ಧನ್ಯವಾದಗಳನ್ನು ತಿಳಿಸುತ್ತೇವೆ.
ಮುಂದಿನ ದಿನಗಳಲ್ಲಿ ವಿಮಾ ಕಂಪನಿ ಇರಬಹುದು, ಸರ್ಕಾರ ಇರಬಹುದು, ರೈತರಿಗೆ ಈ ರೀತಿ ಅನ್ಯಾಯ ಆಗದ ರೀತಿಯಲ್ಲಿ ಬೆಳೆ ವಿಮೆಯನ್ನು ಸಕಾಲದಲ್ಲಿ ರೈತರ ಖಾತೆಗೆ ಜಮಾ ಆಗಲು ಹವಾಮಾನ ಮಾಹಿತಿ ಕೇಂದ್ರಗಳು ಸರಿಯಾಗಿರುವಂತೆ ಮುನ್ನೆಚ್ಚರಿಕೆಯನ್ನು ವಹಿಸಬೇಕು ಎಂದು ರಾಮನಗುಳಿ ಗ್ರೂಪ್ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ತಿಳಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಗಜಾನನ ಹೆಗಡೆ, ಪ್ರಭಾರ ಮುಖ್ಯ ಕಾರ್ಯನಿರ್ವಾಹಕ ರವೀಂದ್ರ ವೈದ್ಯ ಇದ್ದರು.