ವಿಡಿಯೋ, ವಾಯ್ಸ್ ಮೆಸೆಜ್ ವೈರಲ್
ಹೊನ್ನಾವರ: ತಾಲೂಕಿನ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರು ಮತ್ತು ಅತಿಥಿ ಉಪನ್ಯಾಸಕರ ನಡುವಿನ ಹೊಂದಾಣಿಕೆ ಕೊರತೆಯಿಂದ ಭಿನ್ನಾಭಿಪ್ರಾಯ ಉಂಟಾಗಿ ಮಾತಿನ ಕದನ ಏರ್ಪಟಿದ್ದು, ಕಾಲೇಜಿನಲ್ಲಿಯೇ ಕೂಗಾಡಿಕೊಂಡಿರುವ ವಿಡಿಯೋ, ವೈಯ್ಸ್ ಮೆಸೆಜ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಶಿಕ್ಷಕರ ಜಗಳಕ್ಕೆ ವಿದ್ಯಾರ್ಥಿಗಳು ಮೂಕ ಪ್ರೇಕ್ಷಕರಾಗುತ್ತಿದ್ದಾರೆ. ಘಟನೆಗೆ ಸಂಬಂಧಪಟ್ಟಂತೆ ಅತಿಥಿ ಉಪನ್ಯಾಸಕ ಗಿರೀಶ ಹೆಗಡೆ ತಮಗೆ ಆಗುತ್ತಿರುವ ಸಮಸ್ಯೆ ಬಗ್ಗೆ ‘e – ಉತ್ತರ ಕನ್ನಡ’ದೊಂದಿಗೆ ಹೇಳಿಕೊಂಡಿದ್ದಾರೆ.
ಅತಿಥಿ ಉಪನ್ಯಾಸಕರಿಗೆ ವಾರದಲ್ಲಿ 15 ರಿಂದ 19 ಗಂಟೆ ಕೆಲಸ ಮಾಡಬೇಕು ಎಂಬ ನಿಯಮವಿದೆ. ಕ್ಲಾಸ್ ಮುಗಿದ ಮೇಲೆ ಅವರು ಮನೆಗೆ ಹೋಗಬಹುದು, ಆದರೆ ಹೊನ್ನಾವರ ಸರಕಾರಿ ಕಾಲೇಜಿನಲ್ಲಿ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3.30 ರ ವರೆಗೆ ಅಂದರೆ ಆರುವರೆ ಗಂಟೆ ಕಾಲೇಜಿನಲ್ಲಿಯೇ ಇರಬೇಕು ಎಂದು ಪ್ರಾಂಶುಪಾಲರು ಕಟ್ಟಪ್ಪಣೆ ಮಾಡುತ್ತಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಖಾಯಂ ಉಪನ್ಯಾಸಕರು 7 ಗಂಟೆ ಕಾಲೇಜಿನಲ್ಲಿ ಇರಬೇಕು ಎಂಬ ನಿಯಮವಿದೆ. ಆದರೆ ಅವರು ಕೇವಲ 3 ಗಂಟೆ ಮಾತ್ರ ಕಾಲೇಜಿನಲ್ಲಿ ಇರುತ್ತಾರೆ. ಅತಿಥಿ ಶಿಕ್ಷಕರಿಗೆ ಮಾತ್ರ ಹೊನ್ನಾವರ ಕಾಲೇಜಿನಲ್ಲಿ ಹೊಸ ನಿಯಮ ಜಾರಿ ಮಾಡಿ ಬಿಟ್ಟಿದ್ದಾರೆ. ಪ್ರಶ್ನೆ ಮಾಡಿದರೆ ಸಮರ್ಪಕ ಉತ್ತರ ಕೊಡದೆ, ನಮಗೆ ನೋಟಿಸ್ ನೀಡುತ್ತಿದ್ದಾರೆ ಎಂದು ಗಿರೀಶ ಹೆಗಡೆ ಹೇಳಿದ್ದಾರೆ.
ಇದಕ್ಕೆ ಸಂಬಂಧಪಟ್ಟಂತೆ ಮಾಹಿತಿ ಹಕ್ಕಿನಲ್ಲಿ ಕೇಳಿದಾಗ ಇದೇ ಪ್ರಾಂಶುಪಾಲರು ಪೂರ್ಣ ಅವಧಿ ಕಾಲೇಜಿನಲ್ಲೆ ಇರಲು ಯಾವುದೇ ಆದೇಶವಿಲ್ಲ ಎಂದು ಉತ್ತರಿಸಿದ್ದಾರೆ. ನ್ಯಾಕ್ ಸಮಯದಲ್ಲಿ ಹೆಚ್ಚು ಕೆಲಸ ಇರುತ್ತದೆ ಆಗ ಹೆಚ್ಚಿನ ಸಮಯ ಕಾಲೇಜಿನಲ್ಲಿಯೇ ಇರಬೇಕು ನಿಜ, ಈಗ ಅಂತಹ ಯಾವುದೇ ಕೆಲಸ ಇಲ್ಲದೇ ಇದ್ದರೂ ಸಹ ಕಾಲೇಜಿನಲ್ಲಿಯೇ ಕಾಲ ಕಳೆಯಬೇಕಿದೆ ಎಂದು ಪ್ರಾಂಶುಪಾಲರ ನಡೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಾಂಶುಪಾಲರ ಬಳಿ ಕಾಲೇಜಿನಲ್ಲಿಯೇ ಇರುವ ನಿಯಮವಿಲ್ಲ ಎಂದು ನೀವೇ ಮಾಹಿತಿ ಹಕ್ಕಿನಲ್ಲಿ ಉತ್ತರಿಸಿದ್ದೀರಿ. ಹಾಗಿದ್ದು ಕೂಡ ಯಾಕೆ ಇಲ್ಲೆ ಇರಲು ಹೇಳುತ್ತೀರಿ ಎಂದು ಪ್ರಶ್ನೆ ಮಾಡಿದರೆ, ಪ್ರಶ್ನೆ ಮಾಡಿದ ಉಪನ್ಯಾಸಕನಿಗೆ ಕರ್ತವ್ಯಕ್ಕೆ ಅಡ್ಡಿ, ಮಹಿಳಾ ದೌರ್ಜನ್ಯದ ಕಾರಣ ನೀಡಿ ನೋಟಿಸ್ ನೀಡಿದ್ದಾರೆ. ಅವರು ನೀಡಿದ ನೋಟಿಸಿಗೆ ಉಳಿದೆಲ್ಲ ಅತಿಥಿ ಉಪನ್ಯಾಸಕರು ಅಂತಹ ಯಾವುದೇ ತಪ್ಪು ಮಾಡಿಲ್ಲ, ಅಂತಹ ಪದ ಬಳಕೆ ಕೂಡ ಮಾಡಿಲ್ಲ ಎಂದು ಮರು ಪತ್ರ ಬರೆದಿರುವ ಘಟನೆ ಕೂಡ ನಡೆದಿದೆ. ಅತಿಥಿ ಶಿಕ್ಷಕರ ರಾಜ್ಯಾಧ್ಯಕ್ಷರು ಕರೆ ಮಾಡಿ ಮಾತನಾಡಿದರೆ ಅವರಿಗೂ ಸಮರ್ಪಕವಾಗಿ ಮಾತನಾಡಿಲ್ಲ ಎಂದು ಹೇಳಲಾಗುತ್ತಿದೆ. ಇನ್ನೂ ವಿದ್ಯಾರ್ಥಿಗಳ ಒಇಸಿ ಆಯ್ಕೆಯಲ್ಲಿ ಪ್ರಾಂಶುಪಾಲರು ಹೇಳಿರುವುದನ್ನೆ ತೆಗೆದುಕೊಳ್ಳಬೇಕು, ವಿದ್ಯಾರ್ಥಿಗಳ ಆಯ್ಕೆಗೆ ಅವಕಾಶ ಮಾಡಿಕೊಡುತ್ತಿಲ್ಲ ಎನ್ನುವ ಆರೋಪವು ಕೇಳಿ ಬಂದಿದೆ.
ವಿಡಿಯೋ, ವಾಯ್ಸ್ ಮೆಸೆಜ್ ವೈರಲ್:
ಕಾಲೇಜಿನಲ್ಲಿ ನಡೆಯುತ್ತಿರುವ ಕೆಲವು ಬೆಳವಣಿಗೆಯ ವಿಡಿಯೋ ಮತ್ತು ವಾಯ್ಸ್ ರೆಕಾರ್ಡ್ ಒಡಾಡುತ್ತಿದೆ. ಗುಂಪು ಕಟ್ಟಿ ಒಂದಿಷ್ಟು ಜನರು ಕಂಡುಬಂದರೆ, ಒಬ್ಬ ಶಿಕ್ಷಕ ದೊಡ್ಡದಾಗಿ ಕೂಗಾಡಿದ್ದಾರೆ. ಮಾತಿಗೆ ಮಾತು ಬೆಳೆಸಿರುವ ವಾಯ್ಸ್ ರೆಕಾರ್ಡ ಕೂಡ ಕೇಳುತ್ತಿದೆ. ಅತಿಥಿ ಶಿಕ್ಷಕರ ರಾಜ್ಯಾಧ್ಯಕ್ಷರ ಜೊತೆ ಮಾತನಾಡಿದ ಸಂಭಾಷಣೆಗೆ ಕೂಡ ಹರಿದಾಡುತ್ತಿದೆ.
ಪ್ರಾಂಶುಪಾಲರು ಬೆಳಿಗ್ಗೆ 9 ರಿಂದ ಮಧ್ಯಾಹ್ನ 3.30 ರವೆರೆಗೆ ಕಾಲೇಜಿನಲ್ಲಿಯೇ ಇರಲು ಹೇಳುತ್ತಾರೆ. ಅಂತಹ ನಿಯಮವಿಲ್ಲ ಎಂದು ಅವರೇ ಮಾಹಿತಿ ಹಕ್ಕಿನಲ್ಲಿ ಉತ್ತರಿಸಿದ್ದಾರೆ. ಹಾಗಿದ್ದೂ ಕೂಡ ಉದ್ದೇಶಪೂರ್ವಕವಾಗಿ ನಮಗೆ ತೊಂದರೆ ಕೊಡುತ್ತಿದ್ದಾರೆ. ಸಂಬಂಧಪಟ್ಟವರು ಅತಿಥಿ ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯಕ್ಕೆ ನ್ಯಾಯ ಒದಗಿಸಿ ಕೊಡಬೇಕು.
ಗಿರೀಶ ಹೆಗಡೆ, ಅತಿಥಿ ಉಪನ್ಯಾಸಕ
ಸ.ಪ್ರ.ದ ಕಾಲೇಜು, ಹೊನ್ನಾವರ