Slide
Slide
Slide
previous arrow
next arrow

ಜ್ಞಾನಾರ್ಜನೆಯ ಹಿಂದೆ ಓಡಿದರೆ ಅಂಕ ಹಿಂಬಾಲಿಸುತ್ತದೆ: ಪರ್ತಗಾಳಿ ಶ್ರೀ

300x250 AD

ಕುಮಟಾ: ವಿದ್ಯಾರ್ಥಿಗಳು ಅಂಕಗಳ ಹಿಂದೆ ಓಡದೇ ಜ್ಞಾನಾರ್ಜನೆಯ ಹಿಂದೆ ಓಡಿದರೆ, ಅಂಕಗಳು ನಿಮ್ಮನ್ನು ಹಿಂಬಾಲಿಸುತ್ತವೆ ಎಂದು ಪರ್ತಗಾಳಿ ಮಠದ ವಿದ್ಯಾಧೀಶ ತೀರ್ಥರು ನುಡಿದರು.

ಗಿಬ್ ಸಮೂಹ ಸಂಸ್ಥೆಯ ಮಹಾತ್ಮಾಗಾಂಧಿ ಪ್ರೌಢಶಾಲೆಗೆ ಭೇಟಿ ನೀಡಿದ ಸಂದರ್ಭ ವಿದ್ಯಾರ್ಥಿಗಳಿಗೆ ಆಶೀರ್ವಚನ ನೀಡಿದ ಅವರು, ಮಕ್ಕಳು ತಮ್ಮ ಮನೆತನದ ಆಚಾರ ವಿಚಾರಗಳನ್ನು ಮುಂದುವರೆಸಿಕೊಂಡು ಹೋಗಬೇಕು. ಒಂದಲ್ಲ ಒಂದು ವಿದ್ಯೆಯಲ್ಲಿ ಮಕ್ಕಳು ದೈವದತ್ತ ಪ್ರತಿಭೆಯನ್ನು ಹೊಂದಿರುತ್ತಾರೆ. ಅದನ್ನು ಶಿಕ್ಷಕರು ಹಾಗೂ ಪಾಲಕರು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ವಿದ್ಯೆಯ ಮಹತ್ವವನ್ನು ವಿವಿಧ ದೃಷ್ಟಾಂತಗಳ ಮೂಲಕ ವಿಶ್ಲೇಷಿಸಿದ ಅವರು, ಪರ್ತಗಾಳಿ ಗುರುಪರಂಪರೆಯ 20ನೇ ಪೀಠಾಪತಿಗಳಾದ ಇಂದಿರಾಕಾಂತ ತೀರ್ಥರ ಅಮೃತ ಹಸ್ತದಿಂದ ಉದ್ಘಾಟನೆಗೊಂಡ ಗಿಬ್ ಸಂಸ್ಥೆಗೆ 20ನೇ ತಾರೀಖಿಗೆ ಆಗಮಿಸಿರುವುದು ವಿಶೇಷ ಎಂದರು.

ಶಾಲೆಗೆ ಆಗಮಿಸಿದ ಶ್ರೀಗಳನ್ನು ಪೂರ್ಣ ಕುಂಭದ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಮುಖ್ಯ ಶಿಕ್ಷಕರ ಕೊಠಡಿಯಲ್ಲಿ ಜ್ಞಾನದ ಪ್ರತೀಕವಾದ ದೀಪ ಪ್ರಜ್ವಲಸಿ ಮಂಗಳಾರತಿ ಸ್ವೀಕರಿಸಿದ ಅವರು, ಗಿಬ್ ಪ್ರಾಥಮಿಕ ಶಾಲೆ, ಗಿಬ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಗಿಬ್ ಪ್ರೌಢಶಾಲೆ, ಗಿಬ್ ಬಾಲಕಿಯರ ಪ್ರೌಢಶಾಲೆಗೆ ತೆರಳಿ ಶೈಕ್ಷಣಿಕ ಪರಿಸರವನ್ನು ವೀಕ್ಷಿಸಿ, ವಿದ್ಯಾರ್ಥಿಗಳೊಂದಿಗೆ ಲಘು ಹಾಸ್ಯದೊಂದಿಗೆ ತಮ್ಮ ಪೂರ್ವಾಶ್ರಮದ ದಿನಗಳನ್ನು ನೆನಪಿಸಿಕೊಂಡರು.

300x250 AD

ಗಿಬ್ ಬಾಲಕಿಯರ ಪ್ರೌಢಶಾಲೆಯ ಇಂದಿರಾಕಾಂತ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯಾಧ್ಯಕ್ಷ ವಸುದೇವ ಪ್ರಭು ಸ್ವಾಗತಿಸಿ, ಪ್ರಾಸ್ತಾವಿಸಿದರು. ಗಿಬ್ ಸಮೂಹ ಸಂಸ್ಥೆಯ ವಿದ್ಯಾರ್ಥಿನಿಯರು ಮನೋಜ್ಞವಾದ ನೃತ್ಯ ರೂಪಕದ ಸ್ವಾಗತವನ್ನು ಶ್ರೀಗಳ ಚರಣದಲ್ಲಿ ಅರ್ಪಿಸಿದರು. ಸಂಸ್ಥೆಯ ಉಪಾಧ್ಯಕ್ಷ ಮೋಹನ ಶಾನಭಾಗ ಹಾಗೂ ಕಾರ್ಯದರ್ಶಿ ಶ್ರೀನಿವಾಸ ಪ್ರಭು ಗುರು ಪಾದ್ಯಪೂಜೆ, ಗೌರವಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕೆನರಾ ಎಜುಕೇಶನ್ ಸೊಸೈಟಿಯ ಸರ್ವ ನಿರ್ದೇಶಕರು, ಗಿಬ್ ಸಮೂಹ ಸಂಸ್ಥೆಯ ಸ್ಥಳೀಯ ವಿದ್ಯಾರ್ಥಿ- ವಿದ್ಯಾರ್ಥಿನಿಯರು, ಎಲ್ಲಾ ಶಾಲೆಗಳ ಮುಖ್ಯಾಧ್ಯಾಪಕರು, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು, ಶಾಲಾಭಿಮಾನಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ಮುಖ್ಯಾಧ್ಯಾಪಕ ವಿನಾಯಕ ಶಾನಭಾಗ ನೇತೃತ್ವದ ಸಿಬ್ಬಂದಿ ವರ್ಗ ಅಚ್ಚುಕಟ್ಟಾಗಿ ನಿರ್ವಹಿಸಿತು. ಕೊನೆಯಲ್ಲಿ ನೆರೆದ ಸರ್ವರಿಗೂ ಗುರುಗಳು ಫಲಮಂತ್ರಾಕ್ಷತೆಯನ್ನು ನೀಡಿ ಆಶೀರ್ವದಿಸಿದರು.

Share This
300x250 AD
300x250 AD
300x250 AD
Back to top