ದಾಂಡೇಲಿ : ವೃದ್ಧೆಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಯನ್ನು ಬಂಧಿಸುವ ವೇಳೆ ಹಲ್ಲೆಗೊಳಗಾಗಿ ಗಾಯಗೊಂಡು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಿಎಸ್ಐ ಹಾಗೂ ಪೊಲೀಸ್ ಸಿಬ್ಬಂದಿಗಳನ್ನು ಭಾನುವಾರ ಬ್ಲಾಕ್ ಕಾಂಗ್ರೆಸ್ ನಿಯೋಗ ಭೇಟಿ ಮಾಡಿ ಆರೋಗ್ಯವನ್ನು ವಿಚಾರಿಸಿ, ಪೊಲೀಸರ ಸಾಹಸಿಕ ಕಾರ್ಯವನ್ನು ಶ್ಲಾಘಿಸಿದೆ.
ವೃದ್ಧೆಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ ಫೈರೋಜ್ ಯಾಸಿನ್ ಯರಗಟ್ಟಿಯನ್ನು ಬಂಧಿಸುವ ವೇಳೆ ಆತನಿಂದ ಹಲ್ಲೆಗೊಳಗಾಗಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಿಎಸ್ಐ ಕಿರಣ್ ಪಾಟೀಲ್ ಮತ್ತು ಪೊಲೀಸ್ ಸಿಬ್ಬಂದಿಗಳಾದ ಇಮ್ರಾನ್ ಹಾಗೂ ಕೃಷ್ಣ ಅವರನ್ನು ದಾಂಡೇಲಿಯ ಬ್ಲಾಕ್ ಕಾಂಗ್ರೆಸ್ ನಿಯೋಗ ಭೇಟಿ ಮಾಡಿ, ಆರೋಗ್ಯವನ್ನು ವಿಚಾರಿಸಿತು. ಈ ಸಂದರ್ಭದಲ್ಲಿ ಕೆಚ್ಚೆದೆಯ ಸಾಹಸವನ್ನು ತೋರಿದ ಪೊಲೀಸ್ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಗಳನ್ನು ಬ್ಲಾಕ್ ಕಾಂಗ್ರೆಸ್ ನಿಯೋಗವು ಅಭಿನಂದಿಸಿತು.
ಈ ನಿಯೋಗದಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೀರ್ತಿ ಗಾಂವಕರ, ಕಾಂಗ್ರೆಸ್ ಮುಖಂಡರಾದ ತಸ್ವರ ಸೌದಗಾರ, ದಿವಾಕರ ನಾಯ್ಕ, ಅನಿಲ್ ದಂಡಗಲ್, ರಾಮಲಿಂಗ ಜಾಧವ, ರಫೀಕ್ ಖಾನ್, ರವಿ ಚೌವ್ಹಾಣ್, ದಲಿತ ಸಾಹಿತ್ಯ ಪರಿಷತ್ತಿನ ತಾಲೂಕು ಗೌರವ ಅಧ್ಯಕ್ಷ ಶ್ರೀಕಾಂತ ಅಸೋದೆ ಹಾಗೂ ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ಕೌಟುಂಬಿಕ ಕಾರ್ಯಕ್ರಮದ ನಿಮಿತ್ತ ಮಹಾರಾಷ್ಟçಕ್ಕೆ ತೆರಳಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ ಅವರು ಮೊಬೈಲ್ ಕರೆ ಮಾಡಿ ಪಿಎಸ್ಐ ಕಿರಣ್ ಪಾಟೀಲ್ ಹಾಗೂ ಗಾಯಗೊಂಡಿರುವ ಇಬ್ಬರು ಪೊಲೀಸ್ ಸಿಬ್ಬಂದಿಗಳ ಜೊತೆ ಮಾತನಾಡಿ ಧೈರ್ಯ ತುಂಬಿ, ಸಾಹಸಿಕ ಕಾರ್ಯವನ್ನು ಕೊಂಡಾಡಿದರು.