ಸಂದೇಶ್ ಎಸ್.ಜೈನ್, ದಾಂಡೇಲಿ
ದಾಂಡೇಲಿ : ಛಲವೊಂದಿದ್ದರೆ ಸಾಧನೆಗೆ ಯಾವುದು ಅಡ್ಡಿಯಾಗದು ಎನ್ನುವುದಕ್ಕೆ ದಾಂಡೇಲಿಯ ಛಲಗಾರ್ತಿ ಆರಾಧನಾ ಬಸವರಾಜ ಅತ್ಯುತ್ತಮ ಉದಾಹರಣೆ ಎನ್ನಬಹುದು.
ಹೌದು, ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 620 ಅಂಕಗಳನ್ನು ಪಡೆದ ಈಕೆಗೆ ನನಗೆ ಇನ್ನೂ ನಾಲ್ಕು ಅಂಕಗಳು ಬರಬೇಕಿತ್ತು. ಮರು ಮೌಲ್ಯಮಾಪನಕ್ಕೆ ಹಾಕಿದ್ದಲ್ಲಿ ಅಂಕಗಳು ಬರಬಹುದೇ ಎಂಬ ಆತಂಕದಲ್ಲಿದ್ದ ಆರಾಧನಾ ಬಸವರಾಜ ಗಟ್ಟಿ ಮನಸ್ಸು ಮಾಡಿ ಧೈರ್ಯದಿಂದ ವಿಜ್ಞಾನ ಮತ್ತು ಸಮಾಜ ವಿಜ್ಞಾನಕ್ಕೆ ಮರು ಪರೀಕ್ಷೆಗಾಗಿ ಅರ್ಜಿ ಸಲ್ಲಿಸಿ ಮರು ಪರೀಕ್ಷೆಯನ್ನು ಬರೆದಳು. ಅವಳು ಮಾಡಿದ ಧೈರ್ಯದಿಂದಾಗಿ ಅವಳ ನಿರೀಕ್ಷೆಯಂತೆ ಸಮಾಜ ವಿಜ್ಞಾನ ವಿಷಯದಲ್ಲಿ ಮೂರು ಅಂಕ ಮತ್ತು ವಿಜ್ಞಾನ ವಿಷಯದಲ್ಲಿ ಒಂದು ಅಂಕ ಸೇರಿ ಒಟ್ಟು 4 ಅಂಕಗಳನ್ನು ಹೆಚ್ಚಿಸಿಕೊಂಡು 624 ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡು ಕಲಿತ ಜನತಾ ವಿದ್ಯಾಲಯ ಪ್ರೌಢಶಾಲೆಗೆ ಶಾಲೆಗೆ ಹಾಗೂ ಊರಿಗೆ ಕೀರ್ತಿ ಮತ್ತು ಗೌರವವನ್ನು ತಂದಿದ್ದಾಳೆ.
ಇಂಗ್ಲೀಷ್ ವಿಷಯದಲ್ಲಿ 125ಕ್ಕೆ 124 ಅಂಕಗಳನ್ನು ಪಡೆದಿರುವ ಇವಳು ಉಳಿದ ಐದು ವಿಷಯದಲ್ಲಿಯೂ ನೂರಕ್ಕೆ ನೂರು ಅಂಕಗಳನ್ನು ಪಡೆದುಕೊಂಡಿದ್ದಾಳೆ. ಮರು ಪರೀಕ್ಷೆ ಬರೆದು ಅಂಕಗಳನ್ನು ವೃದ್ಧಿಸಿಕೊಂಡು ರಾಜ್ಯಕ್ಕೆ ಎರಡನೇ ಸ್ಥಾನವನ್ನು ತನ್ನದಾಗಿಸಿಕೊಳ್ಳುವ ಮೂಲಕ ಸಾಧನೆಯ ಛಲಗಾರ್ತಿ ಎಂಬ ಹಿರಿಮೆಗೆ ಪಾತ್ರಳಾಗಿದ್ದಾಳೆ.
ನಗರದ ಟೌನಶಿಪ್ ನಿವಾಸಿಗಳು ಹಾಗೂ ಉಪನ್ಯಾಸಕ ದಂಪತಿಗಳಾದ ಬಸವರಾಜ ಕುಡವಕ್ಕಲ್ ಮತ್ತು ನಿರುಪಮಾ ವಿ. ನಾಯಕ ಅವರ ಸುಪುತ್ರಿಯಾಗಿರುವ ಆರಾಧನಾ ಬಸವರಾಜ ಈಕೆ ನಗರದ ಜನತಾ ವಿದ್ಯಾಲಯದ ವಿದ್ಯಾರ್ಥಿನಿಯಾಗಿದ್ದಾಳೆ. ಭಾಷಣ, ಭಗವದ್ಗೀತೆ, ಸಂಗೀತ, ಭರತನಾಟ್ಯ ಮುಂತಾದ ಕಲೆಗಳಲ್ಲಿ ಅದ್ಭುತ ಪ್ರತಿಭೆ ಹೊಂದಿರುವ ಇವಳು ಜಿಲ್ಲಾ ಹಾಗೂ ರಾಜ್ಯ ಮಟ್ಟಗಳಲ್ಲಿ ನಡೆದ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನವನ್ನು ಗಿಟ್ಟಿಸಿಕೊಂಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ರಾಜ್ಯಕ್ಕೆ ಎರಡನೇ ಸ್ಥಾನ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿನಿ ಆರಾಧನಾ ಬಸವರಾಜ ಇವಳ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದ ಮಹಾಲೆ, ಜನತಾ ವಿದ್ಯಾಲಯ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೀಟಾ ಡಯಾಸ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ನವೀನ ಕಾಮತ್, ಜನತಾ ವಿದ್ಯಾಲಯ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಅಮೃತ್ ರಾಮರಥ, ಪ್ರಭಾರಿ ಮುಖ್ಯೋಪಾಧ್ಯಾಯ ಎಂ.ಬಿ.ಅರವಳ್ಳಿ ಹಾಗೂ ಶಾಲೆಯ ಶಿಕ್ಷಕ ವೃಂದದವರು, ಸಿಬ್ಬಂದಿಗಳು ಹಾಗೂ ನಾಡವರ ಸಮಾಜದ ಅಧ್ಯಕ್ಷ ಸುರೇಶ ನಾಯಕ ಸೇರಿದಂತೆ ನಗರದ ಗಣ್ಯರನೇಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.