ನವದೆಹಲಿ: 2029 ರ ವೇಳೆಗೆ ಸರ್ಕಾರ 3 ಲಕ್ಷ ಕೋಟಿ ರೂಪಾಯಿಗಳ ರಕ್ಷಣಾ ಉತ್ಪಾದನೆಯ ಗುರಿಯನ್ನು ಇಟ್ಟಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ಆಯೋಜಿಸಲಾದ ‘ರಾಷ್ಟ್ರೀಯ ಭದ್ರತೆ ಮತ್ತು ಭಯೋತ್ಪಾದನೆ’ ವಿಷಯದ ಕುರಿತು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, ಆ ಹೊತ್ತಿಗೆ ಈ ವಲಯದಲ್ಲಿ ದೇಶದ ರಫ್ತು 50,000 ಕೋಟಿ ರೂಪಾಯಿಗಳನ್ನು ತಲುಪುತ್ತದೆ ಎಂದು ಹೇಳಿದರು. 2014 ರಲ್ಲಿ ಸುಮಾರು 40,000 ಕೋಟಿ ರೂಪಾಯಿಗಳಷ್ಟಿದ್ದ ವಾರ್ಷಿಕ ರಕ್ಷಣಾ ಉತ್ಪಾದನೆಯು ಇಂದು ದಾಖಲೆಯ 1.30 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ. ಈ ವರ್ಷದ ವೇಳೆಗೆ ಸರ್ಕಾರ 1.75 ಲಕ್ಷ ಕೋಟಿ ರಕ್ಷಣಾ ಉತ್ಪಾದನೆಯ ಗುರಿಯನ್ನು ಹೊಂದಿದೆ ಎಂದರು.
2024-25 ರ ಆರ್ಥಿಕ ವರ್ಷದಲ್ಲಿ ರಕ್ಷಣಾ ರಫ್ತು 23,622 ಕೋಟಿ ರೂಪಾಯಿಗಳಿಗೆ ಏರಿದೆ ಮತ್ತು ಭಾರತದಲ್ಲಿ ತಯಾರಿಸಿದ ರಕ್ಷಣಾ ಉತ್ಪನ್ನಗಳನ್ನು ಸುಮಾರು 100 ದೇಶಗಳಿಗೆ ರಫ್ತು ಮಾಡಲಾಗುತ್ತಿದೆ ಎಂದರು.
ಭಯೋತ್ಪಾದನೆಯನ್ನು ಎದುರಿಸಲು ಮತ್ತು ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸಲು ಸರ್ಕಾರ ಅಳವಡಿಸಿಕೊಂಡ ಕಾರ್ಯತಂತ್ರವನ್ನು ಎತ್ತಿ ತೋರಿಸಿದ ಸಿಂಗ್, ರಕ್ಷಣಾ ವಲಯವು ಆತ್ಮನಿರ್ಭರ ಭಾರತದ ಬಲಿಷ್ಠ ಸ್ತಂಭಗಳಲ್ಲಿ ಒಂದಾಗಿ ಹೊರಹೊಮ್ಮಿದೆ ಮತ್ತು ಆಪರೇಷನ್ ಸಿಂಧೂರ್ ಸಮಯದಲ್ಲಿ ಬಳಸಲಾದ ಶಸ್ತ್ರಾಸ್ತ್ರಗಳು ಮತ್ತು ವೇದಿಕೆಗಳನ್ನು ಭಾರತದಲ್ಲಿ ತಯಾರಿಸಲಾಗಿದೆ ಎಂದು ಹೇಳಿದರು.
ಇಂದು ಭಾರತವು ತನ್ನ ಗಡಿಗಳನ್ನು ರಕ್ಷಿಸುವುದಲ್ಲದೆ, ನಮ್ಮನ್ನು ಕಾರ್ಯತಂತ್ರವಾಗಿ, ಆರ್ಥಿಕವಾಗಿ ಮತ್ತು ತಾಂತ್ರಿಕವಾಗಿ ಬಲಿಷ್ಠರನ್ನಾಗಿ ಮಾಡುವ ವ್ಯವಸ್ಥೆಯನ್ನು ಸಹ ರಚಿಸುತ್ತಿದೆ ಎಂದರು.
ಮೊದಲು ಭಾರತವು ವಿದೇಶಿ ರಕ್ಷಣಾ ಸಾಧನಗಳ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿತ್ತು, ಆದರೆ ಇಂದು ಭಾರತವು ರಕ್ಷಣಾ ವಲಯದಲ್ಲಿ ವೇಗವಾಗಿ ಸ್ವಾವಲಂಬಿಯಾಗುತ್ತಿದೆ ಎಂದರು.
ರಕ್ಷಣಾ ಸಾಮರ್ಥ್ಯಗಳ ಬಗ್ಗೆ ಮಾತನಾಡಿದ ಸಚಿವರು, ಭಾರತೀಯ ಸಶಸ್ತ್ರ ಪಡೆಗಳು ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಕ್ಷಿಪಣಿಗಳು, ಟ್ಯಾಂಕ್ಗಳು ಮತ್ತು ದೇಶದಲ್ಲಿ ತಯಾರಾದ ವೇದಿಕೆಗಳನ್ನು ಬಳಸುತ್ತವೆ ಎಂದರು.
ಅಗ್ನಿ, ಪೃಥ್ವಿ ಮತ್ತು ಬ್ರಹ್ಮೋಸ್ನಂತಹ ಸ್ಥಳೀಯ ಕ್ಷಿಪಣಿಗಳು ಶತ್ರುಗಳಿಗೆ ಸೂಕ್ತ ಉತ್ತರ ನೀಡಲು ಸಿದ್ಧವಾಗಿವೆ ಎಂದರು.